ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆಯ ಅವಧಿಯನ್ನು ಇದೇ 30ರವರೆಗೆ ವಿಸ್ತರಿಸಲಾಗಿದೆ.
ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಲು ಮೇ 5ರಿಂದ ಮನೆ ಮನೆ ಸಮೀಕ್ಷೆ ಆರಂಭಗೊಂಡಿತ್ತು. ಈವರೆಗೆ ರಾಜ್ಯದಾದ್ಯಂತ ಸಮೀಕ್ಷೆಯಲ್ಲಿ ಶೇ. 91 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 50 ರಷ್ಟು ಪ್ರಗತಿ ಸಾಧಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಕುಟುಂಬಗಳಿಗೆ ಅಂತಿಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮೀಕ್ಷೆಯ ಕೊನೆಯ ದಿನಾಂಕವನ್ನು ಇದೇ ತಿಂಗಳ 30ರವರೆಗೆ ವಿಸ್ತರಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ತಿಳಿಸಿದೆ. ಈ ಮೊದಲು ಅಂತಿಮ ದಿನಾಂಕವನ್ನು ಜೂನ್ 23ರವರೆಗೆ ವಿಸ್ತರಿಸಲಾಗಿತ್ತು.
ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಮೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್ಗಳಲ್ಲೂ ಪ್ರತ್ಯೇಕ ಶಿಬಿರಗಳನ್ನು ಆರಂಭಿಸಲಾಗಿದೆ. ಜತೆಗೆ ಆನ್ ಲೈನ್ ಲಿಂಕ್ (https:// schedulecastesurvey.karnataka.gov.in/selfdeclaration) ಮೂಲಕವೂ ಸ್ವಯಂಘೋಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಆಯೋಗ ತಿಳಿಸಿದೆ. ಅವಧಿ ವಿಸ್ತರಣೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರಿಗೆ ಆಯೋಗ ಪತ್ರ ಬರೆದಿದೆ.