‘ಮನ್ ಕಿ ಬಾತ್’ ಭಾಷಣದಂತೆ ಅಲ್ಲ ಸಂಸತ್: ಮೋದಿ ವಿರುದ್ಧ ಟಿಎಂಸಿ ಸಂಸದ ಒಬ್ರಯಾನ್‌

Most read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹಾಕುಂಭ ಕುರಿತ ಹೇಳಿಕೆಯು ಅಮೆರಿಕ ವಿಧಿಸಿರುವ ಸುಂಕ ಸೇರಿದಂತೆ ಇನ್ನಿತರೆ ವಿಷಯಗಳ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಾಗಿದೆ. ಸಂಸತ್ತು, ಮನ್‌ ಕಿ ಬಾತ್‌ ಭಾಷಣದಂತೆ ಏಕಮುಖ ಸಂವಹನವಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಒಬ್ರಯಾನ್‌ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ಮಹಾಕುಂಭದ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಮಾತನಾಡಿದ ಒಬ್ರಯಾನ್‌, ಅಧಿವೇಶನವು ಮನ್‌ ಕಿ ಬಾತ್‌ ಭಾಷಣದಂತೆ ಏಕಮುಖ ಸಂವಹನವಲ್ಲ. ಸದನದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸದ ಮತ್ತು ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭಾಷಣವು ಅಮೆರಿಕ ವಿಧಿಸಿದ ಸುಂಕಗಳ ಕುರಿತ ಚರ್ಚೆಯನ್ನು ಬೇರೆಡೆ ಸೆಳೆಯುವ ಉದ್ದೇಶವಾಗಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಹಾನಿಯನ್ನು ಮುಚ್ಚಿಡುವ ಪ್ರಯತ್ನದ ಭಾಗವಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಲೋಕಸಭೆಯಲ್ಲಿ ಸಂಸದರ ಪ್ರಶ್ನೆಗಳಿಗೆ ಉತ್ತರಿಸಿದ, ಪತ್ರಿಕಾಗೋಷ್ಠಿ ನಡೆಸಿ ಸಮಸ್ಯೆಗಳ ಮಾತನಾಡದ ಪ್ರಧಾನಿ ಮೋದಿ ವಿರುದ್ಧ ಒಬ್ರಯಾನ್‌ ಕಿಡಿಕಾರಿದ್ದಾರೆ.

ಮಹಾ ಕುಂಭಮೇಳವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ. ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ತಕ್ಕ ಉತ್ತರವನ್ನು ನೀಡಿದೆ ಎಂದು ಮೋದಿ ಹೇಳಿಕೆ ನೀಡಿದ್ದರು.

More articles

Latest article