ಶ್ರೀನಿವಾಸಪುರ: ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ

Most read

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸೋಮವಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಆರಂಭವಾದ ಗಲಾಟೆ ರಾತ್ರಿ ವೇಳೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ.
ತಾಲ್ಲೂಕಿನ ಗುಂತೋರಪಲ್ಲಿಯ ಮಂಜುನಾಥ ಹಾಗೂ ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ ಎಂಬುವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ನಂತರ ನಡೆದ ಪಂಚಾಯ್ತಿಯಲ್ಲಿ ರಾಜಿ ಮಾಡಲಾಗಿದೆ. ಆದರೆ ಈ ಘಟನೆ ಮತ್ತು ಅವಮಾನವನ್ನು ಸಹಿಸದ ಶ್ರೀಮೂರ್ತಿ ಸಂಜೆ ಸೋಮಯಾಜಲಪಲ್ಲಿ ಬಸ್ ನಿಲ್ದಾಣದಲ್ಲಿದ್ದ ಮಂಜುನಾಥ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ.

ಮಂಜುನಾಥ ಕೊಲೆಯಾಗುತ್ತಿದ್ದಂತೆ ಆತನ ಸಂಬಂಧಿಕರು ಶ್ರೀಮೂರ್ತಿ ಮನೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವ ಮೂಲಕ ಆರೋಪಿ ಶ್ರೀಮೂರ್ತಿಯನ್ನು ಬಂಧಿಸುವಂತೆ ಪಟ್ಟು ಹಿಡಿದು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಈ ಸಮಯದಲ್ಲಿ ಬೆಂಕಿ ನಂದಿಸಲು ಹೋದ ಅಗ್ನಿ ಶಾಮಕ ದಳದವರನ್ನು ಬೆಂಕಿ ನಂದಿಸಲೂ ಬಿಡದೆ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ತಡ ರಾತ್ರಿಯೇ ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಲಾಬೂರಾಮ್ ಹಾಗೂ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಸ್ತುತ ಸೋಮಯಾಜಪಲ್ಹಿ ಗ್ರಾಮ ಬೂದಿ ಮುಚ್ಚಿದ ಕೆಂಡದಂತಿದ್ದು ಹೆಚ್ಚಿನ ಪೋಲೀಸ್ ಭದ್ರತೆ ಒದಗಿಸಲಾಗಿದೆ.

More articles

Latest article