ಚೆನ್ನೈ: ತಮಿಳುನಾಡಿನಲ್ಲಿ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಲು ಸಾವಿರಕ್ಕೂ ಹೆಚ್ಚು ‘ಮುಧಲ್ವರ್ ಮರುಂಧಗಂಗಲ್’ ಎಂಬ ಔಷಧಿ ಮಳಿಗೆಗಳನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ರಾಜ್ಯಾದ್ಯಂತ ಜಾರಿಗೊಳಿಸಲಾದ ಈ ಯೋಜನೆಯಿಂದ ಶೇ. 75 ರವರೆಗೂ ರಿಯಾಯಿತಿ ದರದಲ್ಲಿ ನಾಗರೀಕರಿಗೆ ಅಗತ್ಯ ಔಷಧಿಗಳು ದೊರೆಕಲಿದೆ. ಜತೆಗೆ 1500 ಕ್ಕೂ ಹೆಚ್ಚು ಫಾರ್ಮಸಿ ಶಿಕ್ಷಣ ಪಡೆದಿರುವ ಯುವಕ ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ.
ಕೋಟ್ಯಂತರ ಜನರು ತಮ್ಮ ಗಳಿಕೆಯ ಸಾಕಷ್ಟು ಹಣವನ್ನು ಔಷಧಿಗಳಿಗಾಗಿಯೇ ಖರ್ಚು ಮಾಡುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ದುಬಾರಿ ಬೆಲೆಯ ಔಷಧಿ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಹೀಗಾಗಿ ನಾವು ಮುಧಲ್ವರ್ ಮರುಂಧಗಂಗಲ್ ಔಷಧಿ ಮಳಿಗೆಗಳನ್ನು ತಮಿಳುನಾಡಿನಾದ್ಯಂತ ತೆರೆಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಔಷಧ ವಿತರಕರು ಮತ್ತು ಸಹಕಾರ ಸಂಘಗಳ ಆಶ್ರಯದಲ್ಲಿ ಈ ಅಂಗಡಿಗಳನ್ನು ತೆರೆಯಲಾಗಿದೆ. ಔಷಧ ವಿತರಕರಿಗೆ ಮಳಿಗೆಗಳನ್ನು ತೆರೆಯಲು ರೂ. 3 ಲಕ್ಷ ಹಾಗೂ ಸಹಕಾರ ಸಂಘಗಳಿಗೆ ರೂ. 2 ಲಕ್ಷ ಸಹಾಯಧನವನ್ನು ಒದಗಿಸಲಾಗಿದೆ. ಮುಧಲ್ವರ್ ಮರುಂಧಗಂಗಲ್ ಔಷಧಿ ಮಳಿಗೆಗಳಿಗೆ ಅಗತ್ಯ ಔಷದಿ ಸರಬರಾಜು ಮಾಡುವುದಕ್ಕಾಗಿಯೇ ತಮಿಳುನಾಡಿನ ಎಲ್ಲ 38 ಜಿಲ್ಲೆಗಳಲ್ಲಿ ಸುಸಜ್ಜಿತ ದಾಸ್ತಾನು ಮಳಿಗೆಗಳನ್ನು ತೆರೆಯಲಾಗಿದೆ. ಮೂರು ತಿಂಗಳಿಗಾಗುವಷ್ಟು ಔಷಧಿಗಳನ್ನು ಇವುಗಳಲ್ಲಿ ಈಗಾಗಲೇ ದಾಸ್ತಾನು ಮಾಡಲಾಗಿದೆ ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.