ತಳಸಮುದಾಯಗಳ ಧ್ವನಿ, ಸಂಸದ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಇನ್ನಿಲ್ಲ

Most read

ಬೆಂಗಳೂರು: ನಾಡಿನ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಇಂದು ನಿಧನರಾಗಿದ್ದಾರೆ.

ಮೂತ್ರಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 1.20ಕ್ಕೆ ಅವರು ಬಹು ಅಂಗಾಂಗಳ ವೈಫಲ್ಯದಿಂದ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರು 77ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ಐದು ದಶಕಗಳ ಸುದೀರ್ಘ ಅವಧಿಯಲ್ಲಿ ರಾಜಕಾರಣ ನಡೆಸಿದ ವಿ.ಶ್ರೀನಿವಾಸ ಪ್ರಸಾದ್‌ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಅನುಯಾಯಿಯಾಗಿದ್ದರು. ದಲಿತ, ದಮನಿತ ಸಮುದಾಯಗಳ ಪರವಾಗಿ ಅಪಾರವಾದ ಕಾಳಜಿ ಹೊಂದಿದ್ದರು.

ವೆಂಕಟಯ್ಯ ಶ್ರೀನಿವಾಸ್ ಪ್ರಸಾದ್ ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಮೂಲತಃ ಭಾರತೀಯ ರಾಷ್ಟ್ರೀ ಕಾಂಗ್ರೆಸ್‌ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಜನತಾದಳ (ಸಂಯುಕ್ತ) ಪಕ್ಷವನ್ನು ಸೇರ್ಪಡೆಯಾದರು. ನಂತರ ಕಾಂಗ್ರೆಸ್‌ ಪಕ್ಷಕ್ಕೆ ಮರಳಿ 2013ರಲ್ಲಿ ನಂಜನಗೂಡಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು, ನಂತರ ಶ್ರೀನಿವಾಸ್‌ ಪ್ರಸಾದ್‌ ಬಿಜೆಪಿ ಸೇರ್ಪಡೆಯಾಗಿದ್ದರು.

2013ರಿಂದ 2016ರವರೆಗೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶ್ರೀನಿವಾಸ ಪ್ರಸಾದ್‌ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ ಡಿಎ ಸರ್ಕಾರದಲ್ಲಿ, 1999ರಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ಬದುಕಿನ ಬಹುಕಾಲ ಜಾತ್ಯತೀತ ತತ್ತ್ವಗಳಿಗೆ ಬದ್ಧರಾಗಿ ಜೀವನ ನಡೆಸಿದ್ದ ಶ್ರೀನಿವಾಸ ಪ್ರಸಾದ್‌ ಅವರ ಅಗಲಿಕೆ ನಾಡಿನ ತಳಸಮುದಾಯಗಳ ಧ್ವನಿಯೊಂದು ಕಳೆದುಹೋದಂತಾಗಿದೆ.

More articles

Latest article