ಹಾಸನ ಲೈಂಗಿಕ ಹಗರಣ: ಪೊಲೀಸರೇಕೆ ಸುಮ್ಮನಿದ್ದಾರೆ? ಸಿಪಿಐ (ಎಂ) ಪ್ರಶ್ನೆ

Most read

ಹಾಸನ: ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತಿಯ ಮದದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ಕುಟುಂಬದ ವ್ಯಕ್ತಿಯೊಬ್ಬ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದಾನೆ ಅಲ್ಲದೆ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕುಕೃತ್ಯಕ್ಕೆ ಬಳಸಿಕೊಳ್ಳಲು ಅವನು ತನಗಿರುವ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ. ಪೊಲೀಸರು ಕೂಡಲೇ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ರಾಜಕೀಯ ನಾಯಕ ತನ್ನ ಕಾಮತೃಷೆಗಾಗಿ ನೂರಾರು ಮಹಿಳೆಯರನ್ನು ಬಳಸಿಕೊಂಡು ಸಾವಿರಾರು ವೀಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ದೃಶ್ಯಗಳಲ್ಲಿ ಅವನದೇ ಪಕ್ಷದ ಮಹಿಳಾ ಮುಖಂಡರು, ಮಹಿಳಾ ಕಾರ್ಯಕರ್ತೆಯರು, ಖಾಸಗಿ ಮತ್ತು ಸರ್ಕಾರಿ ಮಹಿಳಾ ನೌಕರರು ಹಾಗೂ ಅಧಿಕಾರಿಗಳು ಜೊತೆಗೆ ಮಹಿಳಾ ಪೋಲೀಸು ಅಧಿಕಾರಿಗಳೊಂದಿಗೆ ನಡೆಸಿರುವ ಲೈಂಗಿಕ ಚಟುವಟಿಕೆಗಳೂ ಇವೆ ಎನ್ನಲಾಗುತ್ತಿದೆ. ಅವನ ಮನೆಯ ಕೆಲಸ ಹೆಂಗಸಿನ ಮೇಲೂ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿ ಆ ದೃಶ್ಯಗಳನ್ನೂ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಇಂತಹ ವಿಕೃತ ಮತ್ತು ವಿಕ್ಷಿಪ್ತ ಮನಸ್ಸಿನ ವ್ಯಕ್ತಿ ಜನಪ್ರತಿನಿಧಿಯಾಗಿ ಇರುವುದಿರಲಿ ನಾಗರಿಕ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವುದು ಬಹಳ ಅಪಾಯಕಾರಿಯಾದ ಮತ್ತು ಆತಂಕಕಾರಿಯಾದ ಸಂಗತಿಯಾಗಿದೆ. ಈತನ ಈ ಕುಕೃತ್ಯದಿಂದಾಗಿ ಹಲವಾರು ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ‌ ಎಂದು ಆತಂಕ ವ್ಯಕ್ತಪಡಿಸಿದ್ದಾರೆ‌.

ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತೀದಿನ ಹೊಸಹೊಸ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ ಎಂದು ಧರ್ಮೇಶ್ ತಿಳಿಸಿದ್ದಾರೆ.

ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್‌ಡ್ರೈವ್ ಹೊರ ಬರುತ್ತದೆಯೋ ಅದರಲ್ಲಿ ಯಾವ ಮಹಿಳೆಯ ಖಾಸಗೀ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಮತ್ತು ಕುತೂಹಲ ಎಲ್ಲೆಡೆ ಹರಡಿದೆ. ಸಾರ್ವಜನಿಕವಾಗಿ ಇಷ್ಟೆಲ್ಲಾ ಅನಾಹುತ ನಡೆದು ಆತಂಕ ಹರಡಿರುವಾಗ ಇದನ್ನು ತಡೆಗಟ್ಟಲು ಇದುವರೆಗೂ ಜಿಲ್ಲಾಡಳಿತ, ಪೊಲೀಸು ಇಲಾಖೆ ಮತ್ತು ಸರ್ಕಾರ ಯಾವುದೇ ಗಂಭೀರವಾದ ಪ್ರಯತ್ನ ಮಾಡದಿರುವುದು ಅತ್ಯಂತ ಖಂಡನೀಯವಾದ ವಿಚಾರ ಎನ್ನುವುದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಎಂ ನ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾಧವಾಗುತ್ತದೆ. ಯಾವುದೋ ಮತ್ತು ಯಾರದೋ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯವಾಗಿದೆ.

ಇಷ್ಟೆಲ್ಲಾ ಅನಾಹುತ ಸಾರ್ವಜನಿಕವಾಗಿ ಸಂಭವಿಸುತ್ತಿದ್ದರೂ ಸಹ ಪೋಲೀಸು ಇಲಾಖೆ, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಇದು ತನಗೆ ಸಂಬಂಧಿಸಿರುವ ವಿಷಯವಲ್ಲ ಎಂಬಂತೆ ಸುಮ್ಮನಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ಕಾಲದಲ್ಲಿ ಇಡೀ ಕರ್ಮಕಾಂಡದ ಮೂಲ ವ್ಯಕ್ತಿ ಮತ್ತು ಹಾಗೂ ಲೈಂಗಿಕ ದೃಶ್ಯಗಳನ್ನು ಸಾರ್ವಜನಿಕರಿಗೆ ಹಂಚುತ್ತಿರುವ ವ್ಯಕ್ತಿಯನ್ನು ಗುರುತಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸುವುದು ಅಷ್ಟೊಂದು ಕಷ್ಟದ ಕೆಲಸವೇನೂ ಅಲ್ಲ. ಆದರೆ ಈ ವಿಚಾರದಲ್ಲಿ ಪೋಲೀಸು ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸದೆ ಯಾರಾದರೂ ದೂರು ಕೊಟ್ಟರೆ ನೋಡೋಣ ಎಂದು ಕಾಯುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇಂತಹ ಹೀನ ಕೃತ್ಯ ನಡೆಸಿರುವ ವ್ಯಕ್ತಿಯ ಮತ್ತು ಕುಟುಂಬದ ರಾಜಕೀಯ ಪ್ರಭಾವ ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ ಯಾವ ಯಾವ ಒತ್ತಡಗಳ ಕಾರಣಕ್ಕೋ, ಕೆಲಸ ಕಾರ್ಯ ಮತ್ತು ಪ್ರಯೋಜನದ ಕಾರಣಕ್ಕೋ ಆತನಿಂದ ಲೈಂಗಿಕವಾಗಿ ಬಳಕೆಯಾಗಿ ವೀಡಿಯೋ ದೃಶ್ಯಗಳಲ್ಲಿ ಸೆರೆಯಾಗಿ ಸಾರ್ವಜನಿಕವಾಗಿ ಮಾನ ಕಳೆದುಕೊಳ್ಳುತ್ತಿರುವ ಮಹಿಳೆಯರು ಮತ್ತವರ ಕುಟುಂಬದ ಗೋಳು ಮಾತ್ರ ಹೇಳತೀರದಾಗಿದೆ.

ಇಂತಹ ಆತಂಕಕಾರಿ ಪರಿಸ್ಥಿತಿಯನ್ನು ಕೊನೆಗಾಣಿಸಲು ಪೋಲೀಸು ಇಲಾಖೆ ತಕ್ಷಣವೇ ಮುಂದಾಗಬೇಕೆಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ 2 ಸಾವಿರಕ್ಕೂ ಹೆಚ್ಚು ವೀಡಿಯೋಗಳಿವೆ ಆ ಕುರಿತು ಬೆಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಪೋಲೀಸರು ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಿದಲ್ಲಿ ಆ ವಿಡಿಯೋಗಳನ್ನು ಚಿತ್ತೀಕರಿಸಿರುವ ವ್ಯಕ್ತಿ ಯಾರು? ದೇವರಾಜೇಗೌಡರಿಗೆ ಆ ವೀಡಿಯೋಗಳನ್ನುು ನೀಡಿರುವ ವ್ಯಕ್ತಿ ಯಾರು? ಎನ್ನುವುದು ಗೊತ್ತಾಗುತ್ತದೆ. ಮತ್ತು ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದರೆ ಆ ವ್ಯಕ್ತಿ ಯಾರ್ಯಾರಿಗೆ ಈ ವೀಡಿಯೋಗಳನ್ನು ನೀಡಿದ್ದಾನೆ ಹಾಗೂ ಯಾರು ಈ ವೀಡಿಯೋಗಳನ್ನು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ಆಗ ಇನ್ನುಮುಂದೆ ವಿಡಿಯೋಗಳನ್ನು ಬಿಡುಗಡೆಯಾಗುವುದನ್ನು ತಡೆಯಬಹುದಾಗಿದೆ ಹಾಗೂ ಹಲವು ಮಹಿಳೆಯರ ಮಾನ ಪ್ರಾಣಗಳು ಉಳಿಯಲಿವೆ ಜೊತೆಗೆ ಇಡೀ ಈ ಲೈಂಗಿಕ ಅಕ್ರಮದ ಮೂಲ ವ್ಯಕ್ತಿಯನ್ನು ಬಂಧಿಸಿ ಸಮಾಜದಲ್ಲಿ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೂಡಲೇ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಸಾಧ್ಯವಾದಷ್ಟೂ ಬೇಗ ನೂರಾರು ಮಹಿಳೆಯರ ಮೇಲೆ ಲೈಂಗಿಕ ಅಕ್ರಮ, ಅತ್ಯಾಚಾರ ನಡೆಸಿ ಅವುಗಳನ್ನು ಚಿತ್ರೀಕರಿಸಿಕೊಂಡಿರುವ ವ್ಯಕ್ತಿಯನ್ನೂ ಹಾಗೂ ಅವುಗಳನ್ನು ಸಾರ್ವಜನಿಕರಿಗೆ ಪೆನ್‌ಡ್ರೈವ್ ಮುಖಾಂತರ ಹಂಚುತ್ತಿರುವ ವ್ಯಕ್ತಿಗಳನ್ನೂ ಬಂಧಿಸಬೇಕೆಂದು ಮತ್ತು ಸಂತ್ರಸ್ತ ಮಹಿಳೆಯರು ಮತ್ತವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ – ಸಿಪಿಎಂ ಹಾಸನ ಜಿಲ್ಲಾ ಸಮಿತಿಯು ಆಗ್ರಹಪಡಿಸುತ್ತದೆ. ಹಾಗೂ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತದೆ‌ ಎಂದು ಅವರು ಹೇಳಿದ್ದಾರೆ.

More articles

Latest article