ನವದೆಹಲಿ: ಗುಜರಾತ್ ನಲ್ಲಿ ಕಳೆದ 4 ವರ್ಷಗಳಲ್ಲಿ 16 ಸೇತುವೆಗಳು ಕುಸಿತದಿದ್ದು, ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಪಡಿಸಿದ್ದಾರೆ.
ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಒಂದು ವೇಳೆ ಎಸ್ಐಟಿ ತನಿಖೆ ನಡೆಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ವಡೋದರ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜೀನಾಮೆ ನೀಡಬೇಕು ಎಂದೂ ಕಾಂಗ್ರೆಸ್ ಪಟ್ಟುಹಿಡಿದಿದೆ.
ದೇಶದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ. ಕೆಲವೊಮ್ಮೆ ರೈಲು ಅಪಘಾತಗಳಾಗುತ್ತಿದ್ದರೆ ಮತ್ತೊಮ್ಮೆ ಹೊಸದಾಗಿ ನಿರ್ಮಿಸಿದ ಸೇತುವೆಗಳಲ್ಲೇ ಬಿರುಕು ಕಾಣಿಸಿಕೊಳ್ಳುತ್ತದೆ. ವಿಮಾನ ದುರಂತದ ನೋವಿನಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಗುಜರಾತ್ನ ಸೇತುವೆ ದುರಂತ ನಡೆದಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
3 ವರ್ಷದ ಹಿಂದೆಯೇ ಸೇತುವೆ ಅಪಾಯದ ಸ್ಥಿತಿಯಲ್ಲಿದೆ ಎನ್ನುವುದು ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 2021ರಿಂದ ಇದು 7ನೇ ಸೇತುವೆ ಕುಸಿತ ಘಟನೆಯಾಗಿದೆ. ಬಿಜೆಪಿಯ ನಿರ್ಲಕ್ಷ್ಯದ ವರ್ತನೆ ಮಿತಿ ಮೀರಿದೆ ಎಂದೂ ಖರ್ಗೆ ಆರೋಪಿಸಿದ್ದಾರೆ.