ಬೆಂಗಳೂರು: ಎರಡು ತಿಂಗಳುಗಳಿಂದ ಮಾತನಾಡದೆ ಅಂತರ ಕಾಯ್ದುಕೊಂಡಿದ್ದ ವಿವಾಹಿತ ಮಹಿಳೆಯನ್ನು ಐಟಿ ಉದ್ಯೋಗಿಯೊಬ್ಬ ಹೊಟೇಲ್ ವೊಂದಕ್ಕೆ ಕರೆಯಿಸಿಕೊಂಡು ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ.
36 ವರ್ಷದ ಹರಿಣಿ ಹತ್ಯೆಗೀಡಾದ ಮಹಿಳೆ. 25 ವರ್ಷದ ಯಶಸ್ ಹತ್ಯೆ ಮಾಡಿದ ಆರೋಪಿ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹತ್ಯೆ ನಡೆದಿದ್ದು, ಎರಡು ದಿನಗಳ ನಂತರ ಶವ ಪತ್ತೆಯಾಗಿದೆ.
ಹರಿಣಿಗೆ ಮದುವೆಯಾಗಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಈಕೆ ವಾಸಿಸುತ್ತಿದ್ದ ಕೆಂಗೇರಿಯ ಲೇಔಟ್ ವೊಂದರ ಜಾತ್ರೆಗೆ ಯಶಸ್ ಹೋಗಿದ್ದಾನೆ. ಅಲ್ಲಿ ಹರಿಣಿ ಪರಿಚಯವಾಗಿದೆ. ನಂತರ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪರಸ್ಪರ ಭೇಟಿಯಾಗುತ್ತಿರುತ್ತಾರೆ. ಈ ವಿಷಯ ತಿಳಿದ ಪತಿ ಹರಿಣಿಯ ಮೊಬೈಲ್ ಕಿತ್ತುಕೊಂಡಿದ್ದಾರೆ. ಎರಡು ತಿಂಗಳು ಸಂಪರ್ಕ ಕಡಿತಗೊಂಡಿತ್ತು. ನಂತರ ಆಕೆ ಹೇಗೋ ಯಶಸ್ ನನ್ನು ಸಂಪರ್ಕಿಸಿದ್ದಾಳೆ. ಯಶಸ್ ಹೋಟೆಲ್ ವೊಂದರಲ್ಲಿ ರೂಂ ಬುಕ್ ಮಾಡಿ ಆಕೆಯನ್ನು ಕರೆಸಿಕೊಂಡಿದ್ದಾನೆ. ಅಲ್ಲಿ ಶುಕ್ರವಾರ ರಾತ್ರಿ ಹರಿಣಿಯನ್ನು ಹತ್ಯೆ ಮಾಡಿದ್ದಾನೆ. ಎರಡು ತಿಂಗಳಿನಿಂದ ಸಂಪರ್ಕಕ್ಕೆ ಸಿಗದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಯಶಸ್ ತಪ್ಪೊಪ್ಪಿಕೊಂಡಿದ್ದಾನೆ.