ಕರಾವಳಿಯನ್ನು ಉತ್ತರಪ್ರದೇಶ, ಮಣಿಪುರ ಮಾಡಲು ಬಿಡುವುದಿಲ್ಲ; ಬಿ.ಕೆ.ಹರಿಪ್ರಸಾದ್ ಗುಡುಗು

Most read

ಮಂಗಳೂರು: ರಾಜ್ಯದ ಉದ್ದಗಲಕ್ಕೂ ಶಾಂತಿ ನೆಲೆಸಿದ್ದರೂ ಕರಾವಳಿಯಲ್ಲಿ ಮಾತ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವದಾದರೂ ಏಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್‌ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಅಮಾಯಕರನ್ನು ಸಾಯಿಸಲು ಕರ್ನಾಟಕವೇನೂ ಉತ್ತರಪ್ರದೇಶ ಅಥವಾ ಮಣಿಪುರ ಅಲ್ಲ ಎಂದೂ ಕಿಡಿ ಕಾರಿದ್ದಾರೆ.

ಇಂದು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಮಂಗಳೂರಿಗೆ ಒಳ್ಳೆಯ ಹೆಸರಿದೆ. ಈ ಪ್ರದೇಶವನ್ನು ಮತ್ತೊಂದು ಮಣಿಪುರ ಮಾಡುವುದು ಬೇಡ. ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಮುಖ್ಯಮಂತ್ರಿ ಮತ್ತು ಗೃಹಸಚಿವರು ಜತೆಯಾಗಿ ಕ್ರಮ ಜರುಗಿಸಬೇಕಾಗುತ್ತದೆ. ಇದು ಸೂಕ್ಷ್ಮ ಪ್ರದೇಶ. ಹಾಗಾಗಿ ಬಹಳ ಯೋಚನೆ ಮಾಡಿ ಅವರು ಹೆಜ್ಜೆ ಇಟ್ಟಿದ್ದಾರೆ. ನಾನೂ ಅವರ ಪರ ನಿಲ್ಲುತ್ತೇನೆ. ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಗಲಭೆಗಳಲ್ಲಿ ಭಾಗಿಯಾಗುವವರು ಹಾಗೂ ಅವರ ಕುಟುಂಬದವರು ಬಡಪಾಯಿಗಳು. ಸೂತ್ರಧಾರಿಗಳು ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಸೂತ್ರಧಾರಿಗಳ ಕೈಗೊಂಬೆಗಳಾದ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸೂತ್ರಧಾರಿಗಳು ಯಾರು ಯಾರು ಎಂಬ ಸತ್ಯ ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ ಎಂದ ಅವರು, ದಕ್ಷ ಪೊಲೀಸ್ ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಲಾಗಿದ್ದು, ಅವರು ಸೂಕ್ತ ಕ್ರಮ ಜರುಗಿಸುತ್ತಾರೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಭೇಟಿ ಕೇವಲ ಸೌಜನ್ಯದ ಭೇಟಿ ಅಷ್ಟೇ. ಅದನ್ನೇ ಮುಂದಿಟ್ಟು ನನ್ನನ್ನೇ ಈ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಾರೆ ಎನ್ನುವುದು ಕೇವಲ ಊಹಾಪೋಹ. ಕರಾವಳಿ ಜಿಲ್ಲೆಗಳ ಅಹಿತಕರ ಬೆಳವಣಿಗೆಗಳ ಬಗ್ಗೆ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೆ. ಇಲ್ಲಿನ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿರುವುದು ನಿಜ. ಆದಷ್ಟೂ ಬೇಗ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಲ್ಪಸಂಖ್ಯಾತ ಘಟಕದ ಮುಖಂಡರ ಸಾಮೂಹಿಕವಾಗಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲಿ ಅಹಿತಕರ ಘಟನೆಗಳು ನಡೆದಿವೆ. ಇದರಿಂದ ಭಾವನಾತ್ಮಕವಾಗಿ ನೊಂದು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಹಿಂಪಡೆಯುವಂತೆ ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವು ಯಾರನ್ನೂ ಕಳೆದುಕೊಳ್ಳಲು ಸಿದ್ಧವಿಲ್ಲ. ಇದಕ್ಕೆಲ್ಲ ರಾಜೀನಾಮೆ ನೀಡಬೇಕಾಗಿಲ್ಲ ಎಂದು ಉತ್ತರಿಸಿದರು.

ಈ ಘಟನೆಗಳಿಂದ ಯಾರೊಬ್ಬರೂ ಧೃತಿಗೆಡಬೇಕಿಲ್ಲ. ನಾವು ಸಂವಿಧಾನ ಮತ್ತು ನ್ಯಾಯದ ಪರ ಇದ್ದೇವೆ. ಸೈದ್ದಾಂತಿಕವಾಗಿ ಬಹಳ ದೃಢವಾಗಿ ಇದ್ದೇವೆ ಎಂದು ತಿಳಿಸಿದರು.

More articles

Latest article