ವಿಬಿಜಿ ಗ್ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಮರುಸ್ಥಾಪನೆಯಾಗುವವರೆಗೆ ಹೋರಾಟ:ಸಿಎಂ ಸಿದ್ದರಾಮಯ್ಯ ಕರೆ

Most read

ಮೈಸೂರು: ವಿಬಿಜಿ ಗ್ರಾಮ್ ಜಿ ಕಾಯ್ದೆ  ರದ್ದಾಗಿ MNREGA ಮರು ಸ್ಥಾಪನೆಯಾಗುವವರೆಗೆ ನಡೆಸುವ ಹೋರಾಟಕ್ಕೆ  ಎಲ್ಲರೂ ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ. ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.

2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು. ಬಿಜೆಪಿಯವರು ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿ ಮುಖಂಡರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯಿದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನು ತೀರ್ಮಾನಿಸಲಿದೆ. ವಿಬಿಜಿ ಗ್ರಾಮ್ ಜಿ ರದ್ದಾಗಬೇಕು. ಜನರನ್ನು ತಪ್ಪು ದಾರಿ ಎಳೆಯಲು ರಾಮ್ ಜಿ ಸೇರಿಸಿದ್ದಾರೆ. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಇನ್ನು ಮುಂದೆ ನರೇಗಾ ಯೋಜನೆ ಇರುವುದಿಲ್ಲ. ನಮ್ಮ ಸರ್ಕಾರ MNREGA ಯೋಜನೆಯನ್ನು ಮುಂದುವರೆಸಲು  ಹೋರಾಡುತ್ತಿದೆ. ದಲಿತರಿಗೆ, ಹೆಣ್ಣುಮಕ್ಕಳಿಗೆ ಮೂರು ದಿನ ಕೆಲಸ ಕೊಡುವ ಕಾಯ್ದೆ.ಅದು  ಸಂವಿಧಾನದ ಹಕ್ಕು. ಅದನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂಬ ಒತ್ತಡವನ್ನು ಹಾಕಲಾಗುತ್ತಿದೆ ಎಂದರು.

ವರುಣಾ ಕ್ಷೇತ್ರದಲ್ಲಿ 1932 ಕೋಟಿ ರೂ. ಕಾಮಗಾರಿ:

ಕುಪ್ಯಾ ಗ್ರಾಮದಲ್ಲಿ ಸುಮಾರು 323ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ವರುಣಾ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22/10/2024 ರಲ್ಲಿ 501 ಕೋಟಿ ರೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ನಂತರ 9/8/2025 ರಂದು 1108 ಕೋಟಿ ರೂ ಗಳ ಕಾರ್ಯಕ್ರಮ. ಮತ್ತು ಇಂದು 323 ಕೋಟಿ ಸೇರಿದಂತೆ ಒಟ್ಟು 1932 ಕೋಟಿ ರೂ.ಗಳ ಕಾಮಗಾರಿಗಳಿಗೆ ವರುಣಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ. 1500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೆರವೇರಿಸಿದೆ. ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. 1,15,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರುಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ,  ಸುಖಗಳನ್ನು ಆಲಿಸುವವರು ಡಾ. ಯತೀಂದ್ರ ಎಂದರು. ಅವರಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳ ಪರಿಚಯವಿದೆ. ವಾರಕ್ಕೆ ಎರಡು ಮೂರು ಸಾರಿ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲಾ ಜನರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಡಾ: ಎಂ.ಸಿ.ಸುಧಾಕರ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಮಟ್ಟದ  ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮೇಲ್ಮನೆ ಸದಸ್ಯರಾದ ಡಾ: ತಿಮ್ಮಯ್ಯ, ಶಾಸಕ ರವಿಶಂಕರ್ ಸೇರಿ ಮೊದಲಾದವರು ಉಪಸ್ಥಿತರಿದ್ದರು.

More articles

Latest article