ವಕ್ಫ್‌ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಮಹುವಾ ಮೊಯಿತ್ರಾ ಅರ್ಜಿ: ಏಪ್ರಿಲ್‌ 16ರಂದು ಸುಪ್ರೀಂಕೋರ್ಟ್‌ ನಲ್ಲಿ ವಿಚಾರಣೆ

Most read

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯಿದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಟಿಎಂಸಿ ಪಕ್ಷದ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಸುಪ್ರೀಂಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎಯೆಂಐಎಂ ಸದಸ್ಯ ಅಸಾದುದ್ದೀನ್‌ ಓವೈಸಿ ಸೇರಿದಂತೆ ಒಟ್ಟು ಹತ್ತು ಮಂದಿ ಸಲ್ಲಿಸಿರುವ ಅರ್ಜಿಗಳ ವಿವಚಾರಣೆಯನ್ನು ಏಪ್ರಿಲ್‌ 16 ರಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ತ್ರಿಸದಸ್ಯಪೀಠ ಕೈಗೆತ್ತಿಕೊಳ್ಳಲಿದೆ.

ಮೊಯಿತ್ರಾ ಅವರು ನಿನ್ನೆಯೇ ಅರ್ಜಿ ಸಲ್ಲಿಸಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಗಂಭೀರ ಕಾರ್ಯವಿಧಾನದ ಲೋಪಗಳು ಕಂಡು ಬಂದಿವೆ. ಅಲ್ಲದೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಹಲವಾರು ಮೂಲಭೂತ ಹಕ್ಕುಗಳನ್ನು ಕಡೆಗಣಿಸಲಾಗಿದೆ. ಕಾನೂನು ರೂಪಿಸುವ ವೇಳೆ ಸಂಸದೀಯ ನಡಾವಳಿಗಳನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿ ಕಾನೂನು ಅಸಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಕ್ಸ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಕರಡು ವರದಿಯ ಪರಿಗಣನೆ ಹಾಗೂ ಅಂಗೀಕಾರದ ಹಂತದಲ್ಲಿ ಮತ್ತು ಸಂಸತ್ತಿನ ಮುಂದೆ ಸದರಿ ವರದಿಯನ್ನು ಮಂಡಿಸುವ ಸಂದರ್ಭಗಳಲ್ಲಿ ಸಂಸದೀಯ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

2025ರ ಫೆಬ್ರುವರಿ 13ರಂದು ಸಲ್ಲಿಸಲಾದ ಅಂತಿಮ ವರದಿಯಲ್ಲಿ ವಿರೋಧ ಪಕ್ಷಗಳ ಸದಸ್ಯರ ವಿರೋಧಿ ಅಭಿಪ್ರಾಯಗಳನ್ನು ಕಾರಣವಿಲ್ಲದೆ ಪರಿಷ್ಕರಿಸಲಾಗಿದೆ. ಇಂತಹ ಕ್ರಮಗಳು ಸಂಸತ್ತಿನ ಚರ್ಚಾ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತವೆ. ಅಧಿಕೃತ ಸಂಸದೀಯ ಕಾರ್ಯವಿಧಾನದ ಕೈಪಿಡಿಗಳಲ್ಲಿ ವಿವರಿಸಿರುವಂತೆ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸುತ್ತವೆ ಎಂದು ತಿಳಿಸಿದೆ.

ಹೊಸ ಕಾನೂನು ಸಂವಿಧಾನದ 14ನೇ ವಿಧಿ (ಕಾನೂನಿನ ಮುಂದೆ ಸಮಾನತೆ), 15(1) (ತಾರತಮ್ಯ ಮಾಡದಿರುವುದು), 19(1)(ಎ) ಮತ್ತು (ಸಿ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ), 21 (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ), 25 ಮತ್ತು 26 (ಧಾರ್ಮಿಕ ಸ್ವಾತಂತ್ರ್ಯ), 29 ಮತ್ತು 30 (ಅಲ್ಪಸಂಖ್ಯಾತರ ಹಕ್ಕುಗಳು), ಮತ್ತು 300ಎ ವಿಧಿ (ಆಸ್ತಿಯ ಹಕ್ಕು) ಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.  ಕಾನೂನು ರೂಪಿಸುವ ವೇಳೆ ಕಾರ್ಯವಿಧಾನದ ಅಕ್ರಮಗಳು ಮತ್ತು ಸಂವಿಧಾನದ ಉಲ್ಲಂಘನೆಗಳನ್ನು ಉಲ್ಲೇಖಿಸಿರುವ ಮಹುವಾ ಮೊಯಿತ್ರಾ ಕಾಯಿದೆಯನ್ನು ಸಂಪೂರ್ಣವಾಗಿ ರದುಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

More articles

Latest article