ಧರಾಲಿ: ಉತ್ತರಾಖಂಡ ರಾಜ್ಯದ ಧರಾಲಿಯಲ್ಲಿ ನಿನ್ನೆ ಆರಂಭವಾದ ಮಳೆ ಇಂದೂ ಮುಂದುವರಿದಿದೆ. ಅಬ್ಬರಿಸುವ ಮಳೆಯ ನಡುವೆಯೇ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ಆರಂಭಿಸಿದ್ದಾರೆ. ಹಠಾತ್ ಪ್ರವಾಹಕ್ಕೆ ಧರಾಲಿ ಗ್ರಾಮದ ಅರ್ಧದಷ್ಟು ಭಾಗವು ನಾಶವಾಗಿದೆ.
ಇದುವರೆಗೂ ಹಠಾತ್ ಪ್ರವಾಹದಲ್ಲಿ ಐವರು ಮೃತಪಟ್ಟಿರುವುದು ಖಚಿತವಾಗಿದ್ದರೂ 60ಕ್ಕಿಂತಲೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 130 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಅವಶೇಷದಡಿಯಿಂದ ಒಂದು ಶವವನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಧರಾಲಿ ಗ್ರಾಮದಲ್ಲಿ ನಡೆದ ಹರ್ ದೂದ್ ಜಾತ್ರೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಆದ್ದರಿಂದ ಕಾಣೆಯಾಗಿರುವ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ನಾಪತ್ತೆಯಾದವರ ಪತ್ತೆಗಾಗಿ ಭಾರತೀಯ ಸೇನೆಯು ತನ್ನ ಎಂಐ -17 ಮತ್ತು ಚಿನೂಕ್ ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. ನಾಪತ್ತೆಯಾದವರಲ್ಲಿ 11 ಯೋಧರು ಸೇರಿದ್ದಾರೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ತಿಳಿಸಿದ್ದಾರೆ.