ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​ ಕೇಸ್: ಸ್ವಾತಂತ್ರ್ಯ ಭಾರತದಲ್ಲಿಯೇ ಅತಿದೊಡ್ಡ ಪ್ರತಿಕ್ರಿಯೆ ಎಂದ ತುಷಾರ್ ಮೆಹ್ತಾ

Most read

”ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಸಂಬಂಧ ಸಚಿವ ಸಂಪುಟವು ತನ್ನ ನಿರ್ಧಾರ ತಿಳಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರತ್ವದಲ್ಲಿ ಸಂಪುಟ ಸಭೆ ನಡೆಸಿ, ಸುಮಾರು 91 ಪುಟಗಳ ಪ್ರತಿಕ್ರಿಯೆ ನೀಡಲಾಗಿದೆ. ಇದು ಸ್ವಾತಂತ್ರ್ಯ ಭಾರತದಲ್ಲಿಯೇ ಅತಿದೊಡ್ಡ ಪ್ರತಿಕ್ರಿಯೆ” ಎಂದು ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದ್ದಾರೆ.

ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆದಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ. ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡುತ್ತಿದ್ದಾರೆ.

”ಯಾವುದೇ ಆರೋಪ ಸಂಬಂಧ ಅನುಮತಿ ಬಂದ ಬಳಿಕ ಅದರ ಕುರಿತಂತೆ ಮೇಲ್ನೋಟಕ್ಕೆ ಸತ್ಯ ಎಂಬುದಾಗಿ‌ ಗೊತ್ತಾದ ನಂತರ ತಹಶೀಲ್ದಾರ್ ಇಲ್ಲವೇ, ರಾಜ್ಯಪಾಲರು ಸಹ ಅನುಮತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಉದ್ದೇಶ ಅಡಗಿದೆ ಎಂಬುದಾಗಿ ಆರೋಪಿಸಲಾಗದು” ಎಂದು ತುಷಾರ್ ಮೆಹ್ತಾ ವಾದಿಸಿದರು.

”ಪ್ರಕರಣ ಸಂಬಂಧ ಟಿ.ಜೆ. ಅಬ್ರಾಹಂ ಅವರು ದಾಖಲೆಗಳ ಮೂಲಕ ರಾಜ್ಯಪಾಲರಿಗೆ ಅನುಮತಿ ಕೇಳಿ ಮನವಿ ಮಾಡಿದ್ದರು. ಅದೇ ಆರೋಪ ಸಂಬಂಧ ಇನ್ನಿಬ್ಬರು ಮನವಿ ಮಾಡಿದ್ದಾರೆ. ಹೀಗಾಗಿ, ಅಬ್ರಾಹಂ ಅವರ ಅರ್ಜಿ ಸಂಬಂಧ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಲಾಗಿದೆ. ಇನ್ನಿಬ್ಬರ ಅರ್ಜಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿರಲಿಲ್ಲ ಎಂಬ ಅಂಶ ಮುಖ್ಯವಾಗಲಿದೆ. ರಾಜ್ಯಪಾಲರು ವಿವೇಚನೆ ಬಳಸಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ, ತನಿಖೆ ನಡೆದು ಸತ್ಯಾಂಶ ಹೊರ ಬರಬೇಕಾಗಿದೆ” ಎಂದರು.

”ಅಲ್ಲದೆ, ರಾಜ್ಯಪಾಲರು ಕಾನೂನಿನ ಪ್ರಕಾರ ನೋಟಿಸ್‌ ನೀಡುವ ಅಗತ್ಯವೇ ಇಲ್ಲ. ಪಿಸಿ ಕಾಯಿದೆ ಸೆಕ್ಷನ್‌ 17ಎ ಅಥವಾ 19 ಸಂದರ್ಭದಲ್ಲೂ ನೋಟಿಸ್‌ ನೀಡಬೇಕಿಲ್ಲ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಯಾವುದೇ ರೀತಿಯ ಶಿಫಾರಸು ಮಾಡಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ರಾಜ್ಯಪಾಲರು ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಂಡಿಲ್ಲ. ದಾಖಲೆಗಳನ್ನು ಪರಿಶೀಲಿಸಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ, ರಾಜ್ಯಪಾಲರ ಕ್ರಮ ಸರಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಹೈಕೋರ್ಟ್ ನಲ್ಲಿ ಸಿಎಂ ಅರ್ಜಿ ವಿಚಾರಣೆ ಆಲಿಸಿ ವಿಚಾರಣೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿತ್ತು. ಈಗ ಮತ್ತೆ ವಿಚಾರಣೆ ಆರಂಭವಾಗಿದೆ.

More articles

Latest article