ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದ ದಾಳಿಯಲ್ಲಿ 26 ಮಂದಿ ಅಸುನೀಗಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶದ ಹಲವು ರಾಜ್ಯಗಳಲ್ಲಿ ನಾಳೆ ಬುಧವಾರ ಅಣಕು ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದೆ.
ಏ. 22ರಂದು ಪಹಲ್ಗಾಮ್ ನಲ್ಲಿ ನಡೆದ ಕೃತ್ಯದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕರ್ನಾಟಕದ ಮೂವರು ಹಾಗೂ ಇಬ್ಬರು ವಿದೇಶಿಯರನ್ನು ಒಳಗೊಂಡು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನ ಮೂಲದ ನಿಷೇಧಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಅಂಗ ಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತಿಕೊಂಡಿತ್ತು. ಪ್ರತಿಯಾಗಿ ಭಾರತ ಪ್ರಸರ್ಕಾರ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಲೂವುದರ ಜತೆಗೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು. ತದನಂತರ ನಡೆದ ಬೆಳವಣಿಗೆಗಳಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಭೀತಿ ಎದುರಾಗಿದೆ.
ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಬ್ಲಾಕ್ ಔಟ್’ ಅಣಕು ಕಾರ್ಯಾಚರಣೆ:
ನಾಳೆ ಮೇ 7ರಂದು ಕೇಂದ್ರ ಗೃಹಸಚಿವಾಲಯವು ‘ಬ್ಲಾಕ್ ಔಟ್’ ಅಣಕು ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದೆ. ರಾಜ್ಯದ ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿ ದೇಶದ 244 ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಇದರಲ್ಲಿ ವಾಯುದಾಳಿಯ ಸೈರನ್ ಮೊಳಗಲಿದೆ. ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ ಮತ್ತು ಯುದ್ಧ ಹಾಗೂ ಇತರ ತುರ್ತು ಸಂದರ್ಭಗಳಿಗೆ ಜನರನ್ನು ಸಜ್ಜುಗೊಳಿಸುವ ತರಬೇತಿ ಕಾರ್ಯಾಗಾರವೂ ಆಗಿರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ನಾಗರಿಕ ಯುದ್ಧ ನಿಯಮ 1968ರ ಅಡಿಯಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ದೇಶದಲ್ಲಿ ಉದ್ಭವಿಸಿರುವ ಪರಿಸ್ಥಿತಿಗೂ ಅಣಕು ಕಾರ್ಯಾಚರಣೆಗೂ ಸಂಬಂಧವಿಲ್ಲ. ಆದರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನಾಗರಿಕರನ್ನು ರಕ್ಷಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಮೇ 2ರಂದು ಮಾಹಿತಿ ನೀಡಿತ್ತು.
ಅಣಕು ಕಾರ್ಯಾಚರಣೆ ಎಂದರೇನು?
ಯುದ್ಧ, ಕ್ಷಿಪಣಿ ದಾಳಿ ಅಥವಾ ವಾಯು ದಾಳಿಯ ಸಂದರ್ಭದಲ್ಲಿ ನಾಗರಿಕ ರಕ್ಷಣೆಯಲ್ಲಿ ಸರ್ಕಾರಿ ಯಂತ್ರ ಮತ್ತು ನಾಗರಿಕರನ್ನು ಸಜ್ಜುಗೊಳಿಸುವ ಪರೀಕ್ಷಾರ್ಥ ಪ್ರಯೋವಾಗಿರುತ್ತದೆ. ಇದರಲ್ಲಿ ಯುದ್ಧದ ನೈಜ ಸನ್ನಿವೇಶವನ್ನೇ ಸೃಷ್ಟಿಸಲಾಗಿರುತ್ತದೆ. 244 ನಗರಗಳಲ್ಲಿ ವಾಯು ದಾಳಿಯ ಸೈರನ್ ಮೊಳಗಲಿದೆ. ಆಗ ವಿದ್ಯುತ್ ಕಡಿತ ಮಾಡಲಾಗುತ್ತದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ನೈಜ ಪರಿಸರದಂತೆಯೇ ಕಾರ್ಯಾಚರಣೆ ನಡೆಸಲಿವೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಭೀತಿಯನ್ನು ತಗ್ಗಿಸುವುದು, ಗೊಂದಲ ನಿವಾರಿಸುವುದು ಹಾಗೂ ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಾಗಾರ ಮತ್ತು ಸಿದ್ಧತೆ ಇದಾಗಿರುತ್ತದೆ.
ನಾಳೆ ನಾಗರಿಕರಿಗೆ ಆಗುವ ಅನುಭವಗಳೇನು ?
ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ತಾತ್ಕಾಲಿಕ ದಿಗ್ಬಂಧನ ಇರಲಿದೆ. ಮೊಬೈಲ್ ಸಿಗ್ನಲ್ ಇರುವುದಿಲ್ಲ. ತುರ್ತು ಟ್ರಾಫಿಕ್ ಮಾರ್ಗ ಬದಲು ಜಾರಿಯಲ್ಲಿರಲಿದೆ. ನಾಗರಿಕರ ಸ್ಥಳಾಂತರ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ಅಲ್ಲಲ್ಲಿ ಮೈಕ್ ಗಳಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಕೆಲವು ಕಡೆಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಯುದ್ಧ ಮಾದರಿಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಲಿದ್ದಾರೆ.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಗುರುತಿಸಲಾದ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಈ ಅಣಕು ಕಾರ್ಯಾಚರಣೆ ನಡೆಯಲಿದೆ. ಇದರಲ್ಲಿ ನಾಗರಿಕ ರಕ್ಷಣಾ ವಾರ್ಡನ್ಗಳು, ಗೃಹ ರಕ್ಷಕ ದಳ, ಎನ್ಸಿಸಿ, ರಾಷ್ಟ್ರೀಯ ಸೇವಾ ಸಂಸ್ಥೆಯ ಸ್ವಯಂಸೇವಕರು, ನೆಹರು ಯುವಕೇಂದ್ರದ ಸಂಘಟನೆ ಸದಸ್ಯರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ನಿಮ್ಮ ತಯಾರಿ ಹೇಗಿರಬೇಕು?
• ಹೆಚ್ಚು ಒತ್ತಡವಿಲ್ಲದೆ ಸ್ಥಳೀಯ ಆಡಳಿತದ ಸೂಚನೆಗಳ ಪಾಲನೆ
• ನೀರು, ಔಷಧ ಮತ್ತು ಫ್ಲಾಶ್ ಲೈಟ್ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ
• ವದಂತಿ ಹರಡುವುದು ಅಥವಾ ಖಾತ್ರಿ ಇಲ್ಲದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಬಾರದು
• ವಿದ್ಯುತ್ ಅಥವಾ ಅಂತರ್ಜಾಲ ಹಠಾತ್ ಸ್ಥಗಿತಗೊಂಡರೆ ಗಾಬರಿಯಾಗಬೇಕಿಲ್ಲ
• ಸರ್ಕಾರಿ ರೇಡಿಯೊ ಮತ್ತು ಟಿವಿಗಳಲ್ಲಿ ಪ್ರಸಾರವಾಗುವ ಅಧಿಕೃತ ಮಾಹಿತಿಯನ್ನಷ್ಟೇ ಕೇಳಬೇಕು
ಅಣಕು ಕಾರ್ಯಾಚರಣೆಯಿಂದ ನಾಗರಿಕರಿಗೆ ಆಗುವ ಪ್ರಯೋಜನಗಳೇನು?
ಎಂತಹುದೇ ಪರಿಸ್ಥಿತಿ ಎದುರಾದರೂ ಸಜ್ಜುಗೊಳ್ಳುವ ಒಂದು ಕಾರ್ಯಾಚರಣೆ ಇದಾಗಿರುತ್ತದೆ. ಆದರೆ ಇದು ಜನರನ್ನು ಭಯಬೀತರನ್ನಾಗಿಸಲು ಮಾಡುತ್ತಿಲ್ಲ. ಸರ್ಕಾರಿ ಯಂತ್ರ ಮತ್ತು ಸಾರ್ವಜನಿಕರು ತಮ್ಮ ಪಾತ್ರಗಳೇನು ಎಂಬುದನ್ನು ಅರಿಯುವ ಪ್ರಯತ್ನ ಇದಾಗಿರುತ್ತದೆ. ಈ ಅಣಕು ಕಾರ್ಯಾಚರಣೆಯ ಫಲಿತಾಂಶವನ್ನು ಆಧರಿಸಿ, ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಪ್ರಯತ್ನ ಇದಾಗಿರುತ್ತದೆ.
ಅಣಕು ಕಾರ್ಯಾಚರಣೆಯ ಸ್ವರೂಪ ಹೇಗಿರಲಿದೆ?
ವಾಯುದಾಳಿಯ ಸೈರನ್: ವಾಯು ದಾಳಿಯ ಅಪಾಯವನ್ನು ಮುಂಚಿತವಾಗಿಯೇ ತಿಳಿಸುವ ಸೈರನ್ ಗಳನ್ನು ಅಣಕು ಕಾರ್ಯಾಚರಣೆಗೆ ಗುರುತಿಸಿದ ನಗರಗಳಲ್ಲಿ ಮೇ 7ರಂದು ಮೊಳಗಲಿವೆ. ತಕ್ಷಣ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಜ್ಜಾಗಬೇಕು.
ಕ್ರಾಶ್ ಬ್ಲಾಕ್ ಔಟ್ಸ್: ಗುರುತಿಸಲಾದ ನಗರಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. 1971ರ ಯುದ್ಧದಲ್ಲಿ ಈ ಪದ್ಧತಿ ಅಳವಡಿಸಲಾಗಿತ್ತು. ಬೆಳಕು ಇಲ್ಲದ ಕಾರಣ, ವಾಯುದಾಳಿಯನ್ನು ಸಾಧ್ಯವಾದಷ್ಟು ತಗ್ಗಿಸಬಹುದಾಗಿದೆ.
ಗೂಢವೇಷದ ಕಾರ್ಯಾಚರಣೆ: ಸಂಪರ್ಕ ಗೋಪುರಗಳು, ವಿದ್ಯುತ್ ಘಟಕಗಳು ಮತ್ತು ಸೇನಾ ನೆಲೆಗಳ ರಕ್ಷಣೆಗೆ ಗೂಢವೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ವಾಯುದಾಳಿಯನ್ನು ರಕ್ಷಿಸುವ ತಂತ್ರಗಳ ಜತೆಗೆ ಉಪಗ್ರಹಗಳ ಮೂಲಕವೂ ಈ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ.
ಸ್ಥಳಾಂತರ ಕಾರ್ಯಾಚರಣೆ: ಅತಿ ಹೆಚ್ಚು ಅಪಾಯವಿರುವ ಸ್ಥಳಗಳಲ್ಲಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ಕಡಿಮೆ ಸಮಯದಲ್ಲಿ ಗರಿಷ್ಠ ಜನರ ಸ್ಥಳಾಂತರದ ಸವಾಲಿನ ಜತೆಗೆ, ಬೇಕಾಗುವ ವಸ್ತುಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ.
ನಾಗರಿಕರಿಗೆ ತರಬೇತಿ: ಶಾಲೆ, ಕಾಲೇಜು, ಕಚೇರಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಅಪಾಯದ ಸಂದರ್ಭದಲ್ಲಿ ಜನರು ಹೇಗೆ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳಬೇಕು. ಭಯವಿಲ್ಲದೆ ಧೈರ್ಯವಾಗಿ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದರ ಕುರಿತು ಸಿಬ್ಬಂದಿ ಮಾರ್ಗದರ್ಶನ ಮಾಡಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್ನ ಫಿರೋಜ್ಪುರ ಕಂಟೋನ್ಮೆಂಟ್ ನಲ್ಲಿ ಭಾನುವಾರ ಸಂಜೆಯೇ ಇಂತಹ ಅಣಕು ಕಾರ್ಯಾಚರಣೆ ನಡೆದಿದೆ. ಇಲ್ಲಿ 30 ನಿಮಿಷಗಳ ಬ್ಲಾಕ್ ಔಟ್ ಡ್ರಿಲ್ ನಡೆದಿದೆ.
2022ರಲ್ಲಿ ನಡೆದ ಚಿಂತನ ಶಿಬಿರದಲ್ಲಿ ತೆಗೆದುಕೊಂಡ ನಿರ್ಧಾರದಂತೆ ದೇಶವ್ಯಾಪಿ ಇಂಥ ಅಣಕು ಕಾರ್ಯಾಚರಣೆ ನಡೆಸುವಂತೆ ಮುಖಂಡರು ಒತ್ತಾಯಿಸಿದ್ದರು. ಗಡಿ ಮತ್ತು ಕರಾವಳಿ ತೀರದಲ್ಲಿ ಗಡಿ ರಕ್ಷಣೆ ಕುರಿತು ಜಾಗೃತಿ ವಹಿಸಲು 2023ರ ಜನವರಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಸೂಚಿಸಿದ್ದರು. ಇವೆಲ್ಲದರ ಪರಿಣಾಮವಾಗಿ ನಾಳೆ ಮೇ 7ರಂದು ಅಣಕು ಕಾರ್ಯಾಚರಣೆ ನಡೆಯಲಿದೆ.