ಬೆಂಗಳೂರು: ಕರ್ನಾಟಕದಲ್ಲಿ ‘ಥಗ್ ಲೈಫ್‘ ಚಿತ್ರ ಬಿಡುಗಡೆಗೆ ರಕ್ಷಣೆ ನೀಡಬೇಕು ಎಂದು ಕೋರಿ ನಟ ಕಮಲ್ ಹಾಸನ್ ಸೋಮವಾರ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರ ನಟನೆಯ ಈ ಚಿತ್ರ ಜೂನ್ 5ರಂದು ಚಿತ್ರ ಬಿಡುಗಡೆಯಾಗಲಿದೆ.
ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, ಕ್ಷಮೆ ಯಾಚಿಸುವವರೆಗೂ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ ಸಿಸಿ) ಮತ್ತು ಕ್ನನೆಡ ಹೋರಾಟಗಾರರು ಎಚ್ಚರಿಕೆ ನೀಡಿದ್ದರು.
ಚೆನ್ನೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚಲನಚಿತ್ರ ಮಂಡಳಿ, ಕ್ಷಮೆಯಾಚಿಸುವವರೆಗೆ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ ಎಂದು ಇಂದು ನಿರ್ಧಶರ ಕೈಗೊಂಡಿತ್ತು. ರಾಜ್ಯದ ಸಾಂಸ್ಕೃತಿಕ ಹೆಮ್ಮೆ ಮತ್ತು ಭಾಷಾ ಪರಂಪರೆಯ ರಕ್ಷಣೆಗಾಗಿ ಈ ನಿಲುವು ತೆಗೆದುಕೊಂಡಿರುವುದಾಗಿ ಮಂಡಳಿ ಅಧ್ಯಕ್ಷರು ಹೇಳಿದ್ದರು.
ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ “ತಮಿಳುನಾಡು ಮತ್ತು ಕರ್ನಾಟಕದ ಜನರ ನಡುವಿನ ಏಕತೆ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುವ ಉದ್ದೇಶ ಹೊಂದಿತ್ತು. ಅವರ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ” ಎಂದು ಅರ್ಜಿಯಲ್ಲಿ ವಾದಿಸಿತ್ತು.
ಕಮಲ್ ಹಾಸನ್ ಅವರ ಹೇಳಿಕೆಯು ವಿಶಾಲ ಸಂದೇಶದ ಭಾಗವಾಗಿತ್ತು. ಮಂಡಳಿ ನಿರ್ಧಾರ ಅನಗತ್ಯ ಮಾತ್ರವಲ್ಲ, ನಟನ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಪ್ರೇಕ್ಷಕರು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದೂ ವಾದಿಸಿದೆ.
ಕರ್ನಾಟಕದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ಅಥವಾ ನಿಷೇಧಿಸದಂತೆ ಯಾವುದೇ ವ್ಯಕ್ತಿ, ಗುಂಪು ಅಥವಾ ಪ್ರಾಧಿಕಾರವನ್ನು (ಕೆಎಫ್ ಸಿಸಿ ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ) ತಡೆಯುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಚಲನಚಿತ್ರ ನಿರ್ಮಾಪಕ, ನಟರು, ಚಿತ್ರಮಂದಿರ ಮಾಲೀಕರು ಮತ್ತು ಪ್ರೇಕ್ಷಕರನ್ನು ಬೆದರಿಕೆ ಅಥವಾ ಅಡಚಣೆಗಳಿಂದ ರಕ್ಷಿಸಲು ಭದ್ರತಾ ವ್ಯವಸ್ಥೆಗಳನ್ನು ನೀಡಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೊದಲು ಚಲನಚಿತ್ರ ನಿರ್ಮಾಪಕರು ಚಿತ್ರ ಪ್ರದರ್ಶನಕ್ಕೆ ಸುರಕ್ಷತೆ ಮತ್ತು ಭದ್ರತೆ ನೀಡಬೇಕು ಎಂದು ಪೊಲೀಸರು ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ, ನಿರ್ಮಾಪಕರು ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯವು ಈ ವಿಷಯವನ್ನು ಇದುವರೆಗೂ ಪಟ್ಟಿ ಮಾಡಿಲ್ಲ.