ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಜೈಶ್ ಭಯೋತ್ಪಾದಕ ಮಸೂದ್ ಅಜರ್ ಕುಟುಂಬದ ಹತ್ತು ಸದಸ್ಯರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಬಾವ ಸೇರಿದ್ದಾರೆ. ಬಹಾವಲ್ಪುರ್ ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯಲ್ಲಿ ಒಂದೇ ಕಡೆ ನೆಲೆಸಿದ್ದ ಹತ್ತು ಮಂದಿ ಹತರಾಗಿದ್ದಾರೆ ಎಂದು ಪಾಕಿಸ್ತಾನದ ಡೇಲಿ ಉರ್ದು ಪತ್ರಿಕೆ ತಿಳಿಸಿದೆ. ಸ್ಥಳೀಯ ಮೂಲಗಳ ಪ್ರಕಾರ, ಕ್ಷಿಪಣಿ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಪಾಕಿಸ್ತಾನ ಇದುವರೆಗೂ ಈ ಸಾವುಗಳನ್ನು ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಅಸುನೀಗಿದ್ದರು. ಈ ದುರಂತಕ್ಕೆ ಪ್ರತಿಯಾಗಿ ಬುಧವಾರ ಭಾರತೀಯ ಸಶಸ್ತ್ರ ಪಡೆಗಳು “ಆಪರೇಷನ್ ಸಿಂಧೂರ್” ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಎರಡೂ ಕಡೆ ದಾಳಿ ನಡೆಸಿದೆ.
ಹಫೀಜ್ ಮಸೂದ್ ಅಜರ್ ನಿಷೇಧಿತ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಸ್ಥಾಪಕ ಮತ್ತು ಮುಖ್ಯಸ್ಥ. 1995 ರಲ್ಲಿ ಕಾಶ್ಮೀರದಲ್ಲಿ ಆರು ವಿದೇಶಿ ಪ್ರವಾಸಿಗರ ಅಪಹರಣ ನಡೆದಾಗ ಆತ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದ. ಆಗ ಆತನನ್ನು ಭಾರತ ಬಂಧಿಸಿತ್ತು. ಅಪಹರಣಕಾರರು ತಮ್ಮನ್ನು “ಅಲ್-ಫ್ರಾನ್” ಗುಂಪು ಎಂದು ಗುರುತಿಸಿಕೊಂಡು ಮಸೂದ್ ಅಜರ್ ಬಿಡುಗಡೆಗೆ ಒತ್ತಾಯಿಸಿದ್ದರು. ಆದರೆ ಭಾರತ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿರಲಿಲ್ಲ.