ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್ ಎಂಬಾತನಿಗೆ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ಡಿಸೆಂಬರ್ನಲ್ಲಿ ವಿಶ್ವವಿದ್ಯಾಲಯದಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಜ್ಞಾನಶೇಖರನ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದೀಗ ತೀರ್ಪು ಪ್ರಕಟಿಸಿರುವ ಈತನಿಗೆ 90 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಚೆನ್ನೈನ ಮಹಿಳಾ ನ್ಯಾಯಾಲಯ ತಿಳಿಸಿದೆ.
ಅಪರಾಧಿ ಕನಿಷ್ಠ 30 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ ಎಂದು ನ್ಯಾಯಾಧೀಶ ಎಂ. ರಾಜಲಕ್ಷ್ಮಿ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಮತ್ತು ಅಪಹರಣ ಸೇರಿದಂತೆ ಎಲ್ಲಾ 11 ಆರೋಪಗಳಲ್ಲಿ ಜ್ಞಾನಶೇಖರನ್ ತಪ್ಪಿತಸ್ಥನೆಂದು ನ್ಯಾಯಾಧೀಶರು ಕಳೆದ ವಾರ ಪ್ರಕಟಿಸಿದ್ದರು. ಪ್ರಕರಣದಲ್ಲಿ 29 ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದರು ಮತ್ತು ಪೊಲೀಸರು 100 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು.
ತನ್ನ ವೃದ್ಧ ತಾಯಿ ಮತ್ತು ಎಂಟು ವರ್ಷದ ಮಗಳನ್ನು ನೋಡಿಕೊಳ್ಳಲು ಮನೆಯಲ್ಲಿರಬೇಕಾದ ಅಗತ್ಯವನ್ನು ಉಲ್ಲೇಖಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಆರೋಪಿ ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಾದೀಶರು ತಿರಸ್ಕರಿಸಿದ್ದಾರೆ.
2023ರ ಡಿಸೆಂಬರ್ 23 ರಂದು, ಜ್ಞಾನಶೇಖರನ್ ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ ಎರಡನೇ ವರ್ಷದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಜತೆಗೆ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಅವನು ಈ ಕೃತ್ಯವನ್ನು ಚಿತ್ರೀಕರಿಸಿದ್ದ. ಡಿಸೆಂಬರ್ 24 ರಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಅದೇ ದಿನ ಆತನನ್ನು ಬಂಧಿಸಿದ್ದರು.