ಬೆಂಗಳೂರು: ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಆಂಧ್ರಪ್ರದೇಶ ಕೆಂಪಲ್ಲಿ ಮೂಲದ ಶ್ರೀನಿವಾಸ್ (35) ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಈವರೆಗೂ 90ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈತ ಮೈಸೂರಿನಲ್ಲಿ ವಾಸವಾಗಿದ್ದ. ಶ್ರೀನಿವಾಸ್, ವಿವಿಧ ನಗರಗಳಲ್ಲಿ ಕಳ್ಳತನ ಮಾಡಿ ಮೈಸೂರಿಗೆ ಮರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ ಲೈನ್ ಗೇಮ್ ಹುಚ್ಚಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಶ್ರೀನಿವಾಸ್ ಮೊದಲು ಆಂಧ್ರಪ್ರದೇಶದಲ್ಲಿ ಸಿನೆಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ. 2008 ರಲ್ಲಿ ಸಿನೆಮಾ ಸೆಟ್ ನಲ್ಲಿ ಲ್ಯಾಪ್ಟಾಪ್ ಕಳ್ಳತನ ಮಾಡಿ ಮೊದಲ ಬಾರಿಗೆ ಜೈಲು ಸೇರಿದ್ದ. ಆಂಧ್ರಪ್ರದೇಶದಲ್ಲಿ ಕಳ್ಳತನ, ಸೈಬರ್ ವಂಚನೆ ಸೇರಿದಂತೆ 87 ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಧಾರವಾಡ,ಬೀದರ್, ಜೆ ಬಿ ನಗರ ಸೇರಿದಂತೆ 4 ಪ್ರಕರಣ ದಾಖಲಾಗಿವೆ.
ಇತ್ತೀಚೆಗೆ ಒಂದೇ ದಿನ ಕೊಡಿಗೆಹಳ್ಳಿ ವ್ಯಾಪ್ತಿಯ ಬಾಲಾಜಿ ಲೇ ಔಟ್ನಲ್ಲಿ 2 ಮನೆ,ಪಾರ್ವತಮ್ಮ ಲೇಔಟ್ನಲ್ಲಿ ಒಂದು ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ನಂತರ ಮೈಸೂರಿಗೆ ತೆರಳಿ ಖಾಸಗಿ ಪಿಜಿಯಲ್ಲಿ ತಂಗಿದ್ದ ಆರೋಪಿ ಶ್ರೀನಿವಾಸ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನವಾಗಿದೆ. ಆರೋಪಿಯಿಂದ 9 ಲಕ್ಷ ಮೌಲ್ಯದ 145 ಗ್ರಾಂ ಚಿನ್ನಾಭರಣ 200 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಸಹೋದರರು ಆಸ್ಟ್ರೇಲಿಯಾ, ಅಮೆರಿಕದಲ್ಲಿ ಇಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.