ಬೆಂಗಳೂರು : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸಿಬಿಐ ಮತ್ತು ಚೆನ್ನೈ ಮೂಲದ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಕ್ಕೆ ನೋಟಿಸ್ ಜಾರಿ ಮಾಡಿದೆ.
ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜೂನ್ 16 ,2023 ರಂದು ನೀಡಿದ ತೀರ್ಪಿನಲ್ಲಿ ನೀಡಿರುವ ನಿರ್ದೇಶನಗಳ ಜಾರಿಯನ್ನು ಖಚಿತ ಪಡಿಸಿಕೊಳ್ಳುವಂತೆ ನ್ಯಾಯಾಲಯವನ್ನು ಕೋರಿದ್ದರು. ಅಂದಿನ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯ “ಈ ಪ್ರಕರಣದ ತನಿಖೆ ದೋಷಪೂರಿತವಾಗಿದೆ, ತನಿಖಾಧಿಕಾರಿಗಳ ಲೋಪಗಳನ್ನು ಮತ್ತು ತಪ್ಪುಗಳನ್ನು ಪರಿಶೀಲಿಸಲು ಖುಲಾಸೆ ಸಮಿತಿ (ಅಕ್ವಿಟಲ್ ಕಮಿಟಿ) ರಚನೆಗೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅರ್ಜಿಯ ವಿಚಾರಣೆ ನಡೆಸಿದ ಮಾನ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮ್ ಪ್ರಸಾದ್, ರಾಜ್ಯ ಗೃಹ ಇಲಾಖೆ, ಪೋಲೀಸ್ ಮಹಾ ನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ( ಅಪರಾಧ ಮತ್ತು ತಾಂತ್ರಿಕ ಸೇವೆಗಳು), ಪಶ್ಚಿಮ ವಲಯ ಪೋಲೀಸ್ ಮಹಾ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ, ದೆಹಲಿ ಮತ್ತು ಚೆನ್ನೈನ ಸಿಬಿಐ ಘಟಕಗಳು ಸೇರಿದಂತೆ ಹಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಹೆಚ್ಚಿನ ವಿಚಾರಣೆಯನ್ನು ಫೆಬ್ರವರಿ 23 ಕ್ಕೆ ಮುಂದೂಡಲಾಗಿದೆ.


