ಸಣ್ಣ ಸಣ್ಣ ಭಾಷೆಗಳ ರಕ್ಷಣೆಗೆ ವರದಿ ಸಲ್ಲಿಸಲು ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

Most read

ಕರ್ನಾಟಕ ರಾಜ್ಯದಲ್ಲಿರುವ ಉರ್ದು, ಕೊರಗ, ಕೊಡವ, ಬಡಗ, ಸಿದ್ಧಿ, ಕುರುಬ, ವರ್ಲಿ, ಚೆಂಚು,
ಇರುಳ, ಗೌಳಿ, ಯರವ, ಸೋಲಿಗ, ಬ್ಯಾರಿ ಮೊದಲಾದ ಸಣ್ಣ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಕರ್ನಾಟಕಕ್ಕೊಂದು ಸಶಕ್ತವಾದ ಭಾಷಾ ನೀತಿಯನ್ನು ರಚಿಸಿ, ವರದಿಯನ್ನು ಸಿದ್ಧಪಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು
ರಚಿಸಿದೆ.

ಪ್ರೊ.ಜಿ.ಎನ್. ದೇವಿ, ಡಾ. ಇಂದಿರಾ ಹೆಗಡೆ , ಡಾ. ಸವಿತಾ ಕೊರಗ, ಡಾ.ಕಾಳೇಗೌಡ ನಾಗವಾರ, ಡಾ. ಬಸವರಾಜ ಕೋಡಗುಂಟಿ, ಡಾ. ಸಣ್ಣೀರಪ್ಪ ದೊಡ್ಡಮನಿ ಮತ್ತು ಪ್ರೊ.ಅಬ್ದುಲ್ ಬಷೀರ್ ಸದಸ್ಯರಾಗಿರುತ್ತಾರೆ. ಡಾ.ಬಿ.ವಿ ನಿರಂಜನಾರಾಧ್ಯ ಅವರು ಈ ಸಮಿತಿಯ ಸಂಚಾಲಕರಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಕನ್ನಡದ ಸಹೋದರ ಭಾಷೆಗಳ ಸಬಲೀಕರಣಕ್ಕೆ ಸಶಕ್ತ ಭಾಷಾ ನೀತಿ ನಿರೂಪಣೆ ಸಹಕಾರಿಯಾಗಲಿದೆ. ಈ ಉದ್ದೇಶಿತ ನೀತಿ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದೊಂದಿಗೆ ಕರ್ನಾಟಕದಲ್ಲಿ ಉರ್ದು ಭಾಷೆಯೂ ಸೇರಿದಂತೆ ಅನೇಕ ಉಪ ಭಾಷೆಗಳು ಬೆಳೆದಿವೆ. ಈ ಉಪ ಭಾಷೆಗಳು ಕನ್ನಡವನ್ನು ಹೆಚ್ಚು ಶ್ರೀಮಂತಗೊಳಿಸುವುದರ ಜೊತೆಗೆ ಅದರ ಪ್ರಾದೇಶಿಕ ವೈವಿಧ್ಯತೆಗೂ, ಅದರ ಅನನ್ಯ ಗುಣಕ್ಕೂ ಕಾರಣವಾಗಿವೆ. ಈ ವೈವಿಧ್ಯಗಳನ್ನು ಮೊದಲು ಗುರುತಿಸಿದವನು ಕ್ರಿಸ್ತಶಕ 950 ರಲ್ಲಿ ಕವಿರಾಜ ಮಾರ್ಗವನ್ನು ಬರೆದ ಶ್ರೀವಿಜಯ ಎಂದಿರುವ ಡಾ.ಬಿಳಿಮಲೆ, ʼಕನ್ನಡದ ವೈವಿಧ್ಯಗಳನ್ನು ಆದಿಶೇಷನೂ ಅರಿಯಲಾರʼ ಎಂಬರ್ಥದ ಮಾತುಗಳನ್ನು ಬರೆದ ಶ್ರೀವಿಜಯನು ʼಕನ್ನಡಂಗಳ್ʼ ಎಂಬ ಪ್ರಯೋಗವನ್ನು ಮಾಡುತ್ತಾನೆ ಎಂದು ನೆನಪಿಸಿಕೊಂಡಿದ್ದಾರೆ.

ಕನ್ನಡದ ಉಪ ಭಾಷೆಗಳೊಂದಿಗೆ ಹಲವು ಸ್ವತಂತ್ರ ಭಾಷೆಗಳೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಹಿರಿಯ ಬರೆಹಗಾರರಾದ ದ.ರಾ.ಬೇಂದ್ರೆ, ಗೋವಿಂದಪೈ, ದೇವನೂರು ಮಹಾದೇವ, ಶಿವರಾಮ ಕಾರಂತ, ಚನ್ನಣ್ಣ ವಾಲೀಕಾರ, ಚಂದ್ರಶೇಖರ ಪಾಟೀಲ, ವೈದೇಹಿ, ಎಂ.ಎಂ.ಕಲಬುರ್ಗಿ, ಬಿ.ಎ.ವಿವೇಕ ರೈ ಮೊದಲಾದ ಶ್ರೇಷ್ಠ ಲೇಖಕ-ಲೇಖಕಿಯರು ಪ್ರಾದೇಶಿಕ ಕನ್ನಡವನ್ನು ಬಳಸಿ, ಬರೆದು ಪ್ರಖ್ಯಾತರಾಗಿದ್ದಾರೆ. ಕನ್ನಡದ ಶ್ರೀಮಂತಿಕೆಯನ್ನು ತುಳು, ಕೊಡವ, ಹವ್ಯಕ, ಅರೆಭಾಷೆ, ಉರ್ದು ಮೊದಲಾದ ಭಾಷೆಗಳ ಸಂಯೋಜನೆಯ ಮೂಲಕ ಬಳಸಿ ಬರೆದವರೂ ಇದ್ದಾರೆ. ಕರ್ನಾಟಕದ ದಲಿತರ ಭಾಷಾ ವೈವಿಧ್ಯವಂತೂ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯವೂ ಶ್ರೀಮಂತವೂ ಆಗಿದೆ ಎಂದು ಡಾ.ಬಿಳಿಮಲೆ ಹೇಳಿದ್ದಾರೆ.

ಕರ್ನಾಟಕವು ಭಾಷಾ ದೃಷ್ಠಿಯಿಂದ ಸಮೃದ್ಧವಾಗಿದ್ದರೂ ಯುನೆಸ್ಕೊ ಹೇಳಿರುವಂತೆ ಕರ್ನಾಟಕದ ಸಂಸ್ಕೃತಿಯ ಭಾಗವಾದ 72 ಭಾಷೆಗಳು ಪತನಮುಖಿಯಾಗುತ್ತಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಮೃದ್ಧಿಗಾಗಿ ಸಹಕರಿಸಿದ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದೆ. ಕನ್ನಡವನ್ನು ಬೆಳೆಸಿದ ಇತರ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಇಡೀ ದೇಶಕ್ಕೆ ಮಾದರಿಯಾಗಲಿರುವ ಭಾಷಾ ನೀತಿಯನ್ನು ರೂಪಿಸಲು ಮುಂದಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಖ್ಯಾತ ಭಾಷಾ ಶಾಸ್ತ್ರಜ್ಞರಾದ ಪ್ರೊ.ಜಿ.ಎನ್.ದೇವಿರವರ ನೇತೃತ್ವದಲ್ಲಿ ಭಾಷಾ ನೀತಿ ರಚನೆಗೆ ಪ್ರಾಧಿಕಾರವು ಮುಂದಾಗಿದ್ದು, ಶೀಘ್ರದಲ್ಲಿಯೇ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದೂ ಅವರು ಹೇಳಿದ್ದಾರೆ.

More articles

Latest article