ಪಿ.ಸಿ.ಮೋಹನ್ ಅವರಿಗೆ ಮನೆಗೆ ಕಳಿಸಿ, ವಿಶ್ರಾಂತಿ ಕೊಡಿ: ಸಿ.ಎಂ.ಸಿದ್ದರಾಮಯ್ಯ ಕರೆ

Most read

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಿ.ಸಿ.ಮೋಹನ್ ಮೂರು ಬಾರಿ ಗೆದ್ದರೂ ಕ್ಷೇತ್ರಕ್ಕೆ, ಬೆಂಗಳೂರಿಗೆ ಮೂರು ಕಾಸಿನ ಕೆಲಸ ಮಾಡಿಲ್ಲ. ಹೀಗಾಗಿ ಇವರಿಗೆ ಈ ಬಾರಿ ಮನೆಗೆ ಕಳಿಸಿ ವಿಶ್ರಾಂತಿ ಕೊಡಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರ ಪರವಾಗಿ ರಾಜಾಜಿನಗರ, ತಿಮ್ಮಯ್ಯ ರಸ್ತೆ ಸೇರಿ ಹಲವು ಕಡೆ ಬಿರುಸಿನ ಪ್ರಚಾರ ಮಾಡಿ ಮಾತನಾಡಿದರು.

ಪಿ.ಸಿ.ಮೋಹನ್ ಮೂರು ಬಾರಿ ಇಲ್ಲಿಂದ ಗೆದ್ದಿದ್ದಾರೆ. ಪಾರ್ಲಿಮೆಂಟಿನಲ್ಲಿ ಮೂರು ದಿನವಾದರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಒಂದು ದಿನವೂ ಪ್ರಶ್ನಿಸಿಲ್ಲ. ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಅಭಿವೃದ್ಧಿಯ ಬಗ್ಗೆ ಪಿ.ಸಿ.ಮೋಹನ್ ಒಂದೇ ಒಂದು ದಿನವಾದರೂ ಮಾತಾಡಿದ್ದಾರಾ ಎಂದು ಪ್ರಶ್ನಿಸಿದರು, ನೆರೆದಿದ್ದ ಜನ ಸಮುದಾಯ ಇಲ್ಲ ಇಲ್ಲ ಎಂದು ಕೂಗಿತು.

ರಾಜ್ಯದ ಎಲ್ಲಾ ಕಡೆ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಮೋದಿ ಗಾಳಿ ಎಲ್ಲೂ ಇಲ್ಲ. ಹೀಗಾಗಿ ಈ ಬಾರಿ ಮನ್ಸೂರ್ ಅಲಿ ಖಾನ್ ಅವರು ಗೆಲ್ಲುತ್ತಾರೆ. ನಿಮ್ಮ ಆಶೀರ್ವಾದ ಇರಲಿ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಸೇರಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

More articles

Latest article