ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಂಘ ಪರಿವಾರಕ್ಕೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ರಾಷ್ಟ್ರಧ್ವಜಕ್ಕೆ ಹೇಗೆ ಅವಮಾನ ಮಾಡಲಾಗಿದೆ ಎನ್ನುವುದಕ್ಕೆ ದಾಖಳೆಯನ್ನು ಹಂಚಿಕೊಂಡಿದ್ದಾರೆ. 1948ರ ಫೆಬ್ರುವರಿ 24ರಂದು ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಹೇಗೆ ಅವಮಾನಿಸಿತ್ತು ಎಂಬುದನ್ನು ತೋರಿಸುವ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ನ ಕಾರ್ಯದರ್ಶಿಗೆ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
ಸಂಘ ಪರಿವಾರ ಅಥವಾ ಆರ್ಎಎಸ್ ದೇಶದ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿ 100 ವರ್ಷಗಳಾಗಿವೆ. ಸ್ವಾತಂತ್ರ್ಯ ಚಳವಳಿಗೆ ವಂಚನೆ ಎಸಗಿ 100 ವರ್ಷಗಳಾಗಿವೆ. ಭಾರತದ ಸಂವಿಧಾನವನ್ನು ವಿರೋಧಿಸಿಯೂ 100 ವರ್ಷವಾಗಿದೆ. ಒಟ್ಟಾರೆ ಆರ್ಎಎಸ್ ನ ದೇಶ ವಿರೋಧಿ ಮನೋಭಾವಕ್ಕೆ 100 ವರ್ಷಗಳಾಗಿವೆ ಎಂದು ಟೀಕಿಸಿದ್ದಾರೆ.
ಆರ್ಎಸ್ಎಸ್ ಹೇಗೆ ದೇಶಕ್ಕೆ ದ್ರೋಹ ಬಗೆದಿದೆ ಎನ್ನವುದಕ್ಕೆ ಇತಿಹಾಸದ್ಲಲಿ ಸಾಕಷ್ಟು ನಿದರ್ಶನಗಳಿವೆ. ಬಿಜೆಪಿ ಎಷ್ಟೇ ಪ್ರಯತ್ನ ನಡೆಸಿದರೂ ಆರ್ಎಸ್ಎಸ್ನ ಸಂವಿಧಾನ ವಿರೋಧಿ ಚರಿತ್ರೆಯನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ನಿಜವಾದ ಆರ್ಎಸ್ಎಸ್ ಇತಿಹಾಸವನ್ನು ತಿಳಿದುಕೊಳ್ಳುವ ಸಕಲಾ ಒದಗಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

