ನವದೆಹಲಿ: ರೈಲು ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ರೈಲು ಹೊರಡುವ 24 ಗಂಟೆ ಮುಂಚಿತವಾಗಿ ಸೀಟು ಹಂಚಿಕೆ ಮಾಡಿ, ಖಾತ್ರಿಪಡಿಸುವ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಪ್ರಸ್ತುತ ರೈಲು ಹೊರಡುವ 4 ಗಂಟೆ ಮುಂಚಿತವಾಗಿ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತಿದೆ. ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಸೀಟುಗಳನ್ನು ಮುಂಚಿತವಾಗಿ ಖಚಿತಪಡಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಈ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕರೆ ಈ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತರಲಾಗುತ್ತದೆ. ಬಿಕಾನೇರ್ ವಿಭಾಗದಲ್ಲಿ ಈ ಪ್ರಾಯೋಗಿಕ ಯೋಜನೆಯು ಆರಂಭಗೊಂಡಿದೆ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಸೀಟು ಕಾಯ್ದಿರಿಸಿ ಟಿಕೆಟ್ ಪಡೆದಿದ್ದರೂ, ಆಸನ ಹಂಚಿಕೆಯಾಗಿ, ಖಚಿತಪಡಿಸದೇ ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣದ ಬಗ್ಗೆ ಗೊಂದಲ ಉಂಟಾಗುತ್ತದೆ. ಆದ್ದರಿಂದ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಿರುವುದಾಗಿ ಅವರು ಹೇಳಿದ್ದಾರೆ. ಒಂದು ವೇಳೆ ಪ್ರಯಾಣದ ಟಿಕೆಟ್ ಖಚಿತಗೊಂಡ ನಂತರ ಪ್ರಯಾಣಿಕರು ಟಿಕೆಟ್ ಅನ್ನು ರದ್ದುಗೊಳಿಸಿದರೆ, ಟಿಕೆಟ್ ಮೊತ್ತದಲ್ಲಿ ಹೆಚ್ಚಿನ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಟಿಕೆಟ್ ರದ್ದು ನೀತಿಯ ಪ್ರಕಾರ ರೈಲು ಹೊರಡುವ 12ರಿಂದ 48 ಗಂಟೆಗೂ ಮುನ್ನ ಟಿಕೆಟ್ ರದ್ದುಗೊಳಿಸಿದರೆ ಶೇ. 50ರಷ್ಟು ಹಣವನ್ನಷ್ಟೇ ಪ್ರಯಾಣಿಕರು ಪಡೆಯಲಿದ್ದಾರೆ. ನಾಲ್ಕರಿಂದ 12 ಗಂಟೆ ಮುಂಚೆ ರದ್ದುಗೊಳಿಸಿದರೆ ಶೇ. 25ರಷ್ಟನ್ನು ಮಾತ್ರ ಪಡೆಯಲಿದ್ದಾರೆ. ಖಾಲಿಯಾಗುವ ಆಸನಗಳನ್ನು ಬುಕಿಂಗ್ ವ್ಯವಸ್ಥೆಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.