ಆರ್ ಸಿಬಿ ಸಂಭ್ರಮಾಚರಣೆ: ಸಂತ್ರಸ್ತ ಕುಟುಂಬಗಳಿಗೆ ಬಿಸಿಸಿಐ ತಲಾ ರೂ. 1 ಕೋಟಿ ನೀಡಲು ಬಿ.ಕೆ.ಹರಿಪ್ರಸಾದ್ ಒತ್ತಾಯ

Most read

ಮಂಗಳೂರು: ಆರ್‌ ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಒಡೆತನ ಹೊಂದಿರುವ ಬಿಸಿಸಿಐ ತಲಾ ರೂ. 1 ಕೋಟಿ ಕೊಡಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಆರ್‌ಸಿಬಿ ರಾಜ್ಯದ ಅಥವಾ ರಾಷ್ಟ್ರದ ಕ್ರಿಕೆಟ್ ತಂಡ ಅಲ್ಲ. ವಿಜಯೋತ್ಸವದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಎಲ್ಲರೂ ದುಃಖದಲ್ಲಿದ್ದಾರೆ. ಹಾಗಾಗಿ ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದರು.

ಸರ್ಕಾರದ ಏನು ಮಾಡಿದೆ ಅಥಾವಾ ಏನು ಮಾಡಿಲ್ಲ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ನಾನು ಹೇಳಲು ಆಗುವುದಿಲ್ಲ.  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ಮಾಹಿತಿ ನೀಡಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗರಿಷ್ಠ 35 ಸಾವಿರ ಜನ ಮಂದಿ ಸೇರುವಷ್ಟು ಮಾತ್ರ ಸಾಮರ್ಥ್ಯವಿದ್ದು, ಉಚಿತ ಪ್ರವೇಶ ಎಂದು ತಿಳಿದು ಅಲ್ಲಿಗೆ 3 ಲಕ್ಷ ಜನ ತೆರಳಿದ್ದಾರೆ. ನಮ್ಮಲ್ಲಿ ಸಾವಿರಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ಇದ್ದಾರೆ. ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ ಎಂದರು.

11 ಮಂದಿಯ ಸಾವಿಗೆ ಯಾರು ಹೊಣೆ ಎಂದು ಸರ್ಕಾರ ತಿಳಿಸಬೇಕು. ದುರ್ಘಟನೆ ಸಂಭವಿಸಿದ್ದು ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಲ್ಲ. ವಿಧಾನಸೌಧದ ಬಳಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಸ್ವಲ್ಪ ಯೋಚನೆ ಮಾಡಬೇಕಿತ್ತು. ಕ್ರಿಕೆಟ್ ಅಭಿಮಾನಿಗಳು ಕೂಡಾ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಆಯೋಚಿಸಬೇಕಿತ್ತು. ಸಾವು ಸಂಭವಿಸಿದ್ದು ಗೊತ್ತಾದ ಬಳಿಕ ವಿಜೋತ್ಸವವನ್ನು ನಿಲ್ಲಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳುವ ಅಧಿಕಾರ ಹೈಕೋರ್ಟ್‌ಗೆ ಇದೆ. ಎಲ್ಲ ವಿಚಾರಗಳಲ್ಲೂ ಇದೇ ತರಹ ಮಾಡಿದರೆ ಉತ್ತಮ ಎಂದು ಹರಿಪ್ರಸಾದ್‌ ಹೇಳಿದರು.

More articles

Latest article