ಬೆಂಗಳೂರು: ಪದೇ ಪದೇ ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿ ಸಧ್ಯ ಜೈಲಿನಲ್ಲಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ (Ranya Rao) ಅವರ ಜಾಮೀನು ಅರ್ಜಿಯ ಆದೇಶವನ್ನು ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯ ಕಾಯ್ದಿರಿಸಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪರ ವಕೀಲ ಮಧು ರಾವ್ ಅವರು ವಾದ ಮಂಡನೆ ಮಾಡಿದರು. ರನ್ಯಾ ರಾವ್ ಪರವಾಗಿ ವಕೀಲ ಕಿರಣ್ ಜವಳಿ ಪ್ರತಿವಾದ ಮಂಡಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಇದೇ 27ರಂದು ಜಾಮೀನು ಆದೇಶ ಪ್ರಕಟಿಸುವುದಾಗಿ ಪ್ರಕಟಿಸಿದರು.
ಇದು ಜಾಮೀನು ರಹಿತ ಪ್ರಕರಣವಾಗಿದೆ. ರನ್ಯಾ ರಾವ್ ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದಾರೆ. ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂದು ಸಂಜೆ 6.30ರ ಸುಮಾರಿಗೆ ಇಳಿದಿದ್ದರು. ಅದೇ ವೇಳೆಗೆ ಶಿಷ್ಟಾಚಾರ ಅಧಿಕಾರಿಯೊಬ್ಬರು ಅಲ್ಲಿಗೆ ತೆರಳಿದ್ದರು. ಅವರ ನೆರವು ಪಡೆದು ವಿಐಪಿ ದ್ವಾರದ ಮೂಲಕ ರನ್ಯಾ ಅವರು ಹೊರಕ್ಕೆ ಬಂದಿದ್ದರು. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಡಿಆರ್ಐ ಪರ ವಕೀಲರು ಮನವಿ ಮಾಡಿದರು.