ಬೆಂಗಳೂರು: ‘ರಾಮ ಮಂದಿರ ಏಕೆ ಬೇಡ’ ಎಂಬ ತಮ್ಮ ಪುಸ್ತಕದಲ್ಲಿ ಲೇಖಕ ಕೆ.ಎಸ್.ಭಗವಾನ್ ಅವಹೇಳನಕಾರಿ ಪದಗಳ ಮೂಲಕ ಶ್ರೀರಾಮಚಂದ್ರನನ್ನು ಹೀಯಾಳಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ವಕೀಲೆ ಮೀರಾ ರಾಘವೇಂದ್ರ ಅವರು ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಈ ಪ್ರಕರಣದಲ್ಲಿ ಮೀರಾ ರಾಘವೇಂದ್ರ ಅವರು, ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 37ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶ ಎಂ.ಸೈಯದ್ ಅರಾಫತ್ ಇಬ್ರಾಹಿಂ ಅವರು ಸೋಮವಾರ ಭಗವಾನ್ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇಂತಹುದೇ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯ ಇತ್ತೀಚೆಗೆಷ್ಟೇ ಕೆ.ಎಸ್.ಭಗವಾನ್ ಅವರನ್ನು ಖುಲಾಸೆಗೊಳಿಸಿತ್ತು. ಭಗವಾನ್ ಪರ ಎರಡೂ ಪ್ರಕರಣಗಳಲ್ಲಿ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ವಾದ ಮಂಡಿಸಿದ್ದರು.
ನ್ಯಾಯಾಲಯದ ಆವರಣದಲ್ಲಿ ಸಾಹಿತಿ ಭಗವಾನ್ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಧಕ್ಕೆ ತಂದಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ಕೋರ್ಟ್ಗಳಲ್ಲಿ ವಕೀಲಿಕೆ ನಡೆಸಬಾರದು ಎಂದು ರಾಜ್ಯ ವಕೀಲರ ಪರಿಷತ್ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು.
ಲೇಖಕ ಭಗವಾನ್ ಅವರು ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲಿ ಕೋರ್ಟ್ ಆವರಣದಲ್ಲಿ ತಮ್ಮ ಮುಖಕ್ಕೆ ಮೀರಾ ಮಸಿ ಬಳಿದಿದ್ದಾರೆ ಎಂಬ ಆರೋಪದಡಿಯಲ್ಲಿ ಕೆ.ಎಸ್.ಭಗವಾನ್ ದಾಖಲಿಸಿದ್ದ ದೂರನ್ನು ರಾಜ್ಯ ವಕೀಲರ ಪರಿಷತ್ತಿನ, ‘ಶಿಸ್ತುಪಾಲನಾ ಸಮಿತಿ’ ಅಧ್ಯಕ್ಷ ಎಸ್.ಮಹೇಶ್ ಮತ್ತು ಪರಿಷತ್ ಸದಸ್ಯ ಎಸ್.ಹರೀಶ್ ನೇತೃತ್ವದ ಸಮಿತಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿತ್ತು.