ರಾಜಭವನದಲ್ಲಿ ಭಾರತ ಮಾತೆಗೆ ಪೂಜೆ: ಕೇರಳ ರಾಜ್ಯಪಾಲರ ನಡೆಗೆ ಸಿಪಿಐಎಂ ಆಕ್ರೋಶ

Most read

ತಿರುವನಂತಪುರ: ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಬೇಕು ಎಂದು  ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್‌ ಅವರ ಆಗ್ರಹವನ್ನು ಸಿಪಿಐ (ಎಂ) ಕಟುವಾಗಿ ಟೀಕಿಸಿದೆ. ಪಕ್ಷದ ಮುಖವಾಣಿ ದೇಶಾಭಿಮಾನಿ ಪತ್ರಿಕೆಯಲ್ಲಿ ರಾಜಭವನವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್‌) ಶಾಖೆ ಅಲ್ಲ ಎಂದು ತಿರುಗೇಟು ನೀಡಿದೆ.

ಕೇರಳದ ರಾಜಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಕಾರ್ಯಕ್ರಮ ಪಟ್ಟಿಗೆ ಸೇರಿಸಲು ರಾಜಭವನ ಒತ್ತಾಯಿಸಿತ್ತು. ಆದರೆ ಅದನ್ನು ನಿರಾಕರಿಸಿ, ಕಾರ್ಯಕ್ರಮವನ್ನು ರಾಜ್ಯ ಕೃಷಿ ಇಲಾಖೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿತ್ತು.

ಈ ಘಟನೆಯು ರಾಜ್ಯಪಾಲ ಅರ್ಲೇಕರ್ ಮತ್ತು ಮಾರ್ಕ್ಸಿಸ್ಟ್‌ ಪಕ್ಷ ನೇತೃತ್ವದ ಎಲ್‌ ಡಿ ಎಫ್ ಸರ್ಕಾರದ ನಡುವಿನ ಕಲಹಕ್ಕೆ ಕಾರಣವಾಗಿದೆ.  ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರ್ಲೇಕರ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಆರ್‌ ಎಸ್‌ ಎಸ್‌ ಸಿದ್ಧಾಂತವನ್ನು ಪ್ರಚಾರ ಮಾಡಲು ರಾಜಭವನವನ್ನು ಬಳಕೆ ಮಾಡುವ ಮೂಲಕ ಅರ್ಲೇಕರ್ ಅವರು ದೇಶದ ಸಂವಿಧಾನಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಈ ರೀತಿಯ ವರ್ತನೆ ಸಾಂವಿಧಾನಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜಭವನದಲ್ಲಿ ಭಾರತ ಮಾತಾ ಭಾವಚಿತ್ರವಿಟ್ಟ ಕಾರ್ಯಕ್ರಮದಿಂದ ಹೊರನಡೆದ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಅವರ ನಿರ್ಧಾರವನ್ನು ದೇಶಾಭಿಮಾನಿ ಪತ್ರಿಕೆ ಕೊಂಡಾಡಿದೆ.

ಸಂವಿಧಾನವೇ ಈ ದೇಶದ ಬೆನ್ನೆಲುಬು. ಇದಕ್ಕಿಂತ ಮೇಲಿನದ್ದು ಇನ್ನಾವುದೂ ಇಲ್ಲ. ರಾಜಭವನದ ನಡೆಯನ್ನು ಜಾತ್ಯತೀತ ಮನಸ್ಸುಗಳು ಒಪ್ಪಲು ಸಾಧ್ಯವೇ ಇಲ್ಲ. ಆರ್‌ ಎಸ್‌ ಎಸ್‌ ನ ರಾಷ್ಟ್ರವಾದವನ್ನು ರಾಜ್ಯಗಳು ಒಪ್ಪಲು ಸಾಧ್ಯವಿಲ್ಲ. ರಾಜಭವನದ ಈ ಕ್ರಮವನ್ನು ಪ್ರಜಾಪ್ರಭುತ್ವ ಪ್ರೇಮಿಗಳು ಇಷ್ಟಪಡುವುದಿಲ್ಲ. ದೇಶಪ್ರೇಮಿಗಳು ರಾಜ್ಯಪಾಲ ಅರ್ಲೇಕರ್ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಂಪಾದಕೀಯದಲ್ಲಿ ವಿವರಣೆ ನೀಡಲಾಗಿದೆ.

ರಾಜಭವನದ ನಿರ್ಧಾರವನ್ನು ಕೃಷಿ ಸಚಿವ ಪಿ. ಪ್ರಸಾದ್ ಅವರೂ ಧಿಕ್ಕರಿಸಿ ಸಭಾತ್ಯಾಗ ಮಾಡಿದ್ದರು. ರಾಜಕೀಯದಲ್ಲಿ ಧರ್ಮ ಮತ್ತು ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಕೇಸರಿ ಧ್ವಜ ಹಿಡಿದ ಮಹಿಳೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದು ಆರ್‌ ಎಸ್‌ ಎಸ್‌ ನ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹೇರುವ ಹುನ್ನಾರವೇ ಆಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ರಾಜ್ಯಪಾಲ ಅರ್ಲೇಕರ್ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಐ ಕೂಡಾ ಆಕ್ರೋಶ ಹೊರಹಾಕಿವೆ. ಅರ್ಲೇಕರ್ ಅವರು ಸಂಘದ ಸ್ವಯಂಸೇವಕರಂತೆ ವರ್ತಿಸುತ್ತಿದ್ದು, ರಾಜಭವನವನ್ನು ಅವರ ಖಾಸಗಿ ಗೃಹ ಕಚೇರಿ ಮತ್ತು ಆರ್‌ ಎಸ್‌ಎಸ್‌ ಘಟಕವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿವೆ.

ರಾಜ್ಯಪಾಲರ ನಿರ್ಧಾರವನ್ನು ಖಂಡಿಸಿ ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾದ ಸದಸ್ಯರು ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ಕಾಲೇಜಿನ ಎದುರು ಶನಿವಾರ ಪ್ರತಿಭಟನೆ ನಡೆಸಿ, ರಾಜಭವನ ಆರ್‌ ಎಸ್‌ ಎಸ್‌ ನ ಖಾಸಗಿ ಆಸ್ತಿಯಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

More articles

Latest article