ಹಾಸನ: ಮೈಕ್ರೋ ಫೈನ್ಸಾನ್ ಸಿಬ್ಬಂದಿ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕು ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಕೆಂಚಮ್ಮ (50) ಮೃತ ಮಹಿಳೆ. ಇವರು ಬಿ ಎಸ್ ಎಸ್, ಇ ಐ ಎಫ್ ಫೈನನ್ಸ್ ನಲ್ಲಿ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಕೆಂಚಮ ಪ್ರತಿ ತಿಂಗಳು ತಪ್ಪದೇ ಕಂತು ಪಾವತಿಸುತ್ತಿದ್ದರು. ಹಣ ಇಲ್ಲದ ಕಾರಣಕ್ಕೆ ಈ ತಿಂಗಳಿನ ಕಂತು ಪಾವತಿಸಿರಲಿಲ್ಲ. ಆದರೆ ಈ ದಿನವೇ ಹಣ ಕಟ್ಟಬೇಕೆಂದು ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಲ್ಲಿ ಕುಳಿತಿದ್ದರಿಂದ ಜಿಗುಪ್ಸೆಗೊಂಡ ಮಹಿಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.