ಚೆನ್ನೈ : ಪ್ರಧಾನಿ ನರೇಂದ್ರ ಮೋದಿ “ಭಯೋತ್ಪಾದಕ” , ಎಐಎಡಿಎಂಕೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ವಿವಾದಕ್ಕೆ ಸಿಲುಕಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಜೊತೆ ಕೈಜೋಡಿಸುವ ಎಐಎಡಿಎಂಕೆ ನಿರ್ಧಾರವನ್ನು ಪ್ರಶ್ನಿಸಿದರು. “ಅಣ್ಣಾದೊರೈ ಅವರ ಫೋಟೋ ಹಾಕಿರುವ ಈ ಎಐಎಡಿಎಂಕೆ ಜನರು ಮೋದಿ ಜೊತೆ ಹೇಗೆ ಸೇರಬಹುದು? ಅವರು ಭಯೋತ್ಪಾದಕ. ಅವರ ಪಕ್ಷ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆ ಇಡುವುದಿಲ್ಲ. ಈ ಜನರು ಅವರೊಂದಿಗೆ ಸೇರುತ್ತಿದ್ದಾರೆ. ಅಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರು.
ಬಿಜೆಪಿ ಮುಂದೆ ತಲೆಬಾಗದ ಮತ್ತು ಎದ್ದುನಿಂತು ಹೋರಾಡುವ ನಾಯಕರು ನಿಮಗೆ ಬೇಕು, ಅದು ಎಂಕೆ ಸ್ಟಾಲಿನ್. ಇಂದು, ಎಐಎಡಿಎಂಕೆ ತನ್ನ ಗುರುತನ್ನು ಕಳೆದುಕೊಂಡಿದೆ. ಅದು ಬಿಜೆಪಿಯ ಮೂಕ-ಗುಲಾಮ ಪಾಲುದಾರ. ಅದು ತಮಿಳುನಾಡಿನ ಹಿತಾಸಕ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಪ್ರಧಾನಿ ಮೋದಿಯ ಗುಲಾಮವಾಗಿದೆ” ಎಂದು ಅವರು ಹೇಳಿದರು.
ನಂತರ ಅವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದರು, ಪ್ರಧಾನಿಯನ್ನು “ಭಯೋತ್ಪಾದಕ” ಎಂದು ಕರೆಯುವ ಉದ್ದೇಶ ನನಗಿಲ್ಲ, ಆದರೆ ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ, ಪ್ರಧಾನಿ ಮೋದಿ ಯಾವಾಗಲೂ ನಮಗೆ ಬೆದರಿಕೆ ಹಾಕುತ್ತಾರೆ ಎಂದು ನಾನು ಹೇಳಿದ್ದೇನೆ. ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಇತರ ಸಂಸ್ಥೆಗಳು ಅವರ ಕೈಯಲ್ಲಿವೆ ಎಂದು ನಾನು ಹೇಳಿದ್ದೆ. ಅವರು ಭಯೋತ್ಪಾದಕ ಎಂದು ನಾನು ಖಂಡಿತವಾಗಿಯೂ ಹೇಳಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.


