ಹಿಟ್ಲರ್ ಗಿಂತ ಪ್ರಹ್ಲಾದ್ ಜೋಶಿ ಡೇಂಜರ್: ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಾಗ್ದಾಳಿ

Most read

ಹುಬ್ಬಳ್ಳಿ: ಯಾವುದೇ ವ್ಯಕ್ತಿಗಳಿಂದ ನಮ್ಮನ್ನ ಹತ್ತಿಕ್ಕಲು ಸಾಧ್ಯವಿಲ್ಲ. ನನ್ನ ಸ್ಪರ್ಧೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜೋಶಿಯವರು ಎಲ್ಲಾ ಜಾತಿಯ ಜನರನ್ನ ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಹಿಟ್ಲರ್ ತನಗೆ ಬೇಡವಾದವರನ್ನು ತುಳಿಯುತ್ತಿದ್ದ. ಆದ್ರೆ ಜೋಶಿಯವರು ತಮಗೆ ಬೇಕಾದವರನ್ನೂ ತುಳಿಯುತ್ತಿದ್ದಾರೆ. ಹಿಟ್ಲರ್ ಜೋಶಿಯವರಿಂದ ಟ್ರೇನಿಂಗ್ ತೆಗೆದುಕೊಳ್ಳಬೇಕಿತ್ತು. ಜೋಶಿ ಹಿಟ್ಲರ್ ಗಿಂತಲೂ ಒಂದು ಕೈ ಮೇಲೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.

ಪ್ರಹ್ಲಾದ ಜೋಶಿ ನಮ್ಮ ಜನಾಂಗವನ್ನ ಒಡೆಯುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಜೋಶಿಯವರ ಈ ಷಡ್ಯಂತ್ರದ ವಿರುದ್ಧವೇ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಅವಶ್ಯಕತೆ ಬಂದಿದೆ. ಜೋಶಿ ಸಾಕಷ್ಟು ಜನರಿಗೆ ಆಸೆ ತೋರಿಸಿ ತುಳಿದಿದ್ದಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ನಿಂದ ದಿಂಗಾಲೇಶ್ವರ ಸ್ವಾಮೀಜಿಗೆ ಬಾಹ್ಯ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಆ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದಾಗ ನೋಡೋಣ. ನಾನು ನನ್ನ ನಿರ್ಧಾರದ ಮೂಲಕ ಕಾರ್ಯೋನ್ಮುಖನಾಗಿದ್ದೇನೆ. ನನ್ನನ್ನ ತೇಜೋವದೆ ಮಾಡುವ ಪ್ರಯತ್ನಗಳಾಗುತ್ತಿವೆ. ಪ್ರಹ್ಲಾದ್ ಜೋಶಿಯವರು ಮೇಲಿಂದ ಮೇಲೆ ತಪ್ಪುಗಳನ್ನ ಮಾಡುತ್ತಾ ಹೊರಟಿದ್ದಾರೆ. ಈ ಜಿಲ್ಲೆ ಹಾಗೂ ರಾಜ್ಯಕ್ಕೆ ಜೋಶಿಯವರ ಕೊಡುಗೆ ಏನೂ ಇಲ್ಲ. ದೊಡ್ಡವರ ಹೆಸರಿನಲ್ಲಿ ಜೋಶಿ ದುರಾಡಳಿತ ಮಾಡುತ್ತಿದ್ದಾರೆ ಎಂದು ನುಡಿದರು.

ಪ್ರಹ್ಲಾದ ಜೋಶಿ ಅವರು ಪಕ್ಷ ಬಿಟ್ಟು ಪಕ್ಷೇತರವಾಗಿ ಸ್ಪರ್ಧೆ ಮಾಡಿ ತೋರಿಸಲಿ. ಮೋದಿಯವರಿಗೆ ಇವರ ನಡೆ ಬಗ್ಗೆ ಗೊತ್ತಾಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಜೋಶಿಯವರ ಕಿರಿಕಿರಿಯಿಂದಾಗಿ ಅನೇಕ ಜನ ಹಿರಿಯ ನಾಯಕರು ಅನ್ಯಾಯಕ್ಕೊಳಗಾಗಿದ್ದಾರೆ. ಕರಡಿ ಸಂಗಣ್ಣ, ಸಿ.ಎಂ. ಉದಾಸಿ, ಜಿ.ಎಮ್. ಸಿದ್ದೇಶ್ವರ ಅವರು ಜೋಶಿಯವರ ಕಿರಿಕಿರಿಗೆ ಬೇಸತ್ತಿದ್ದಾರೆ.

ಅನೇಕ ಜನ ನಾಯಕರನ್ನ ಮಾನಸಿಕ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡಿದ್ದಾರೆ. ಚುನಾವಣೆಯ ಆಸೆ ತೋರಿಸಿ ಸಾಕಷ್ಟು ಜನರನ್ನ ಆರ್ಥಿಕವಾಗಿ ಮೂಲೆಗುಂಪು ಮಾಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕಂಟಕ ಪ್ರಾಯರಾಗಿದ್ದಾರೆ. ಬಹುಶಃ ವಿನಯ ಕುಲಕರ್ಣಿಯವರೂ ಸಹ ಅದೇ ಅರ್ಥದಲ್ಲಿ ಹೇಳಿದ್ದಾರೆ. ಜೋಶಿ ದುಡಿದು ತಿನ್ನುವವರಲ್ಲ ಕೇವಲ ಹೊಡೆದು ತಿನ್ನುವವರು ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮನೆಗೆ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಉಳ್ಳಾಗಡ್ಡಿಮಠರು ಪರಂಪರಾಗತ ಶಿರಹಟ್ಟಿ ಮಠದ ಭಕ್ತರು. ಅವರ ಮನೆಯ ಗುರುಗಳಾಗಿ ನಾನು ಬಂದಿದ್ದೇನೆ. ರಜತ್ ಅವರು ಮಗುವಿನ ತೊಟ್ಟಿಲು ಕಾರ್ಯಕ್ಕಾಗಿ ಬಂದಿದ್ದೇನೆ. ರಜತ್ ಉಳ್ಳಾಗಡ್ಡಿಮಠ ಅವರ ಕೊಡುಗೆ ಅವರ ಪಕ್ಷಕ್ಕೆ ಬಹಳ ಇದೆ. ಅವರು ಪಕ್ಷಕ್ಕೆ ದುಡಿದರೂ ಅವರನ್ನ ಗುರುತಿಸಲಿಲ್ಲ ಅನ್ನೋ ನೋವು ಇದೆ. ಸಧ್ಯದ ಪರಿಸ್ಥಿತಿಯಲ್ಲಿ ನಾನು ಸ್ವಾಮೀಜಿಯೂ ಹೌದು ರಾಜಕಾರಣಿಯೂ ಹೌದು ಎಂದಿದ್ದಾರೆ.

More articles

Latest article