ಮೈಸೂರು: ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂ. ಮಂಗಮಾಯವಾಗಿರುವ ಪ್ರಕರಣ ಮೈಸೂರು ಜಿಲ್ಲೆಯ ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ನಡೆದಿದೆ. ಈ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂ. ದುರುಪಯೋಗ ಆಗಿರುವುದು ತನಿಖೆಯಿಂದ ಕಂಡು ಬಂದಿದ್ದು, ಸಾವಿರಾರು ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ಸುಮಾರು 27 ಸಾವಿರ ಗ್ರಾಹಕರು ತಮ್ಮ ಹಣವನ್ನು ಠೇವಣಿ ಇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣ ಮೇ 22ರಂದು ಪ್ರಕರಣ ಬಯಲಾಗಿತ್ತು. ಕೆಲವು ಗ್ರಾಹಕರು ತಮ್ಮ ಠೇವಣಿ ಕುರಿತು ಮಾಹಿತಿ ಪಡೆಯಲು ಬಂದಿದ್ದಾಗ, ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ. ಅಂಚೆ ಸಹಾಯಕ ದೀಪಕ್ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಆತನ ಜತೆ ಇನ್ನೂ ಕಲೆವರು ಕೈಜೋಡಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಲಾಖೆಯ ಮೈಸೂರು ವಿಭಾಗದ ಹಿರಿಯ ಪೋಸ್ಟಲ್ ಸೂಪರಿಂಟೆಂಡೆಂಟ್ ಹರೀಶ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ದೀಪಕ್ ಹಲವು ದಿನಗಳಿಂದಲೂ ಕೆಲಸಕ್ಕೆ ಗೈರುಹಾಜರಾಗಿದ್ದು, ಮೂರು ದಿನಗಳಿಂದ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಅವರನ್ನು ವಿಚಾರಣೆ ನಡೆಸಿದ ನಂತರ ಸತ್ಯ ಹೊರಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದುವರೆಗಿನ ಮಾಹಿತಿ ಪ್ರಕಾರ ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ದುರುಪಯೋಗ ಆಗಿರುವುದು ಖಚಿತವಾಗಿದೆ. ಹಿರಿಯ ನಾಗರಿಕರು ಇಟ್ಟಿರುವ ಠೇವಣಿ, ಎಂಐಎಸ್ (ಮಂಥ್ಲಿ ಇನ್ಕಮ್ ಸ್ಕೀಂ), ಎಸ್ಬಿ ಖಾತೆ ಮೊದಲಾದವುಗಳಲ್ಲಿನ ಹಣ ದುರುಪಯೋಗವಾಗಿದೆ. ಈ ಹಣ ಮರಳಿ ಬರಲಿದೆಯೇ ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ.