ಪಿಎಂಎಲ್‌ಎ ಕಾಯ್ದೆ ದುರ್ಬಳಕೆ; ಇಡಿಗೆ ಸುಪ್ರೀಂಕೋರ್ಟ್‌ ತರಾಟೆ

Most read

ನವದೆಹಲಿ: ಆರೋಪಿಯನ್ನು ಜೈಲಿನಲ್ಲಿಯೇ ಇಡಲು ಹಣ ಅಕ್ರಮ ವಹಿವಾಟು ತಡೆ ಕಾಯ್ದೆಯನ್ನು (ಪಿಎಂಎಲ್‌ಎ) ಬಳಸಿಕೊಂಡಿದ್ದಕ್ಕೆ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ವರದಕ್ಷಿಣೆ ಕಾನೂನಿನಂತೆ ಈ ಕಾಯಿದೆಯೂ ದುರ್ಬಳಕೆಯಾಗುತ್ತಿದೆಯೇ ಎಂದು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು ಬುಧವಾರ, ಛತ್ತೀಸಗಢದ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿ ಅರುಣ್‌ ಪಾಟಿ ತ್ರಿಪಾಠಿ ಅವರಿಗೆ ಜಾಮೀನು ಮಂಜೂರು ಮಾಡಿ ಇಡಿಯನ್ನು ತರಾಟೆಗೆ ತೆಗೆದುಕೊಂಡಿತು. 

ದೂರನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಆದೇಶವನ್ನು ಛತ್ತೀಸಗಢ ಹೈಕೋರ್ಟ್‌ ವಜಾ ಮಾಡಿದ್ದರೂ ಆರೋಪಿಯನ್ನು ಜೈಲಿನಲ್ಲಿ ಇರಿಸಿರುವುದೇಕೆ ಎಂದು ಸುಪ್ರೀಂ ಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿತು. ವ್ಯಕ್ತಿಯು ಜೈಲಿನಲ್ಲಿಯೇ ಇರಬೇಕು ಎನ್ನುವುದು ಪಿಎಂಎಲ್‌ಎ ಕಾಯಿದೆಯ ಪರಿಕಲ್ಪನೆ ಅಲ್ಲ. ವಿಚಾರಣಾ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದ ನಂತರವೂ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸುವ ಪ್ರವೃತ್ತಿ ಮುಂದುವರಿದರೆ ಏನು ಹೇಳಲು ಸಾಧ್ಯ? ಸೆಕ್ಷನ್ 498ಎ ಪ್ರಕರಣಗಳು ಏನಾಗುತ್ತಿವೆ ನೋಡಿ. ಪಿಎಂಎಲ್ಎ ಸಹ ಇದೇ ರೀತಿ ದುರ್ಬಳಕೆ ಆಗುತ್ತಿದೆಯೇ ಎಂದು ಪ್ರಶ್ನಿಸಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಭಾರತೀಯ ಟೆಲಿಕಾಂ ಸೇವೆ ಅಧಿಕಾರಿ ತ್ರಿ‍ಪಾಠಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಛತ್ತೀಸಗಢ ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 

More articles

Latest article