ಬೆಂಗಳೂರು: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರು, ಕೇಂದ್ರ ಸ ರ್ಕಾರ ಮತ್ತು ರಾಜ್ಯ ಸರ್ಕಾರ ಪಾವತಿಸಿರುವ ಕಂತಿನ ಹಣ ಎಷ್ಟು? ಮತ್ತು ಈವರೆಗೆ ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂಬ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸವಾಲು ಹಾಕಿದ್ದಾರೆ.
ಸದನದಲ್ಲಿ ತಾವು ಫಸಲು ಬಿಮಾ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ವಿಮೆ ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಖಾಸಗಿ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೇಗೆ ಲಾಭ ಮಾಡಿಕೊಡುತ್ತಿದೆ ಎಂಬುದು ಬಟಾ ಬಯಲಾಗಲಿದೆ. ದೇಶಾದ್ಯಂತ ಬೆಳೆ ವಿಮೆ ಯೋಜನೆ ಜಾರಿಯಾದ ದಿನದಿಂದ ಈವರೆಗೆ ವಿಮಾ ಕಂಪನಿಗಳು ಉದ್ದಾರ ಆಗಿದೆಯೇ ಹೊರತು ರೈತರಲ್ಲ. ಇದೊಂದು ಬಿಜೆಪಿ ಪ್ರಾಯೋಜಿತ ಪಕ್ಕಾ ಗೋಲ್ಮಾಲ್ ಯೋಜನೆ ಎಂದು ಈಶ್ವರ ಖಂಡ್ರೆ ಪುನರುಚ್ಚರಿಸಿದರು.
ಕೋವಿಡ್ ಸಮಯದಲ್ಲಿ ಜನರು ಆಕ್ಸಿಜನ್ ಸಿಗದೇ ರೆಮಿಡಿ ಸಿವೀರ್ ಚುಚ್ಚುಮದ್ದು ಸಿಗದೇ, ಉದ್ಯೋಗವೂ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾಗ ಮನೆಯಲ್ಲಿ ಬಾಗಿಲು ಮುಚ್ಚಿ ಕುಳಿತಿದ್ದ ಖೂಬಾ ಈಗ ಬೀದಿಯಲ್ಲಿ ನಿಂತು ವೀರಾವೇಷದಿಂದ ಮಾತನಾಡಿದರೆ ಜನ ನಂಬುವುದಿಲ್ಲ ಅವರಿಗೆ ಸತ್ಯದ ಅರಿವಿದೆ. ಖೂಬಾಗೆ ಮಾಡಲು ಕೆಲಸವಿಲ್ಲ; ಈಗ ನಿರುದ್ಯೋಗಿಯಾಗಿದ್ದಾರೆ. ಹೀಗಾಗಿ ಮಾಧ್ಯಮ ಹೇಳಿಕೆ ನೀಡುತ್ತಾ, ಕಾಲ ತಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

