ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಸತತವಾಗಿ ಪ್ರತಿಭಟನೆ ನಡೆಸಿದ ಕಾರಣ ಲೋಕಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಸದನ ಆರಂಭವಾಗುತ್ತಿದ್ದಂತೆ ಎಸ್ ಐಆರ್ ಕೆಲಸದ ಒತ್ತಡದಿಂದಾಗಿ ಬೂತ್ ಮಟ್ಟದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯೂ ಸೇರಿದಂತೆ ಜನಸಮಾನ್ಯರ ವಿಷಯಗಳನ್ನು ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿದವು.
ಇಂದು ಬೆಳಗ್ಗೆ ಮತ್ತು ಮಧ್ಯಾಹ್ನದ ನಂತರ ಪ್ರಶ್ನೋತ್ತರ ಅವಧಿಯಲ್ಲಿ ಎರಡು ಬಾರಿ ಸದನವನ್ನು ಮುಂದೂಡಲಾಯಿತು. ನಂತರ ಮಧ್ಯಾಹ್ನ ಲೋಕಸಭೆ ಕಲಾಪ ನಾಳೆಗೆ ಮುಂದೂಡಲಾಯಿತು. ಪ್ರತಿಪಕ್ಷಗಳ ಸದಸ್ಯರು ಎಸ್ ಐಆರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ವಿಪಕ್ಷಗಳ ಗದ್ದಲದ ನಡುವೆಯೇ ಮಣಿಪುರದಲ್ಲಿ ಜಿಎಸ್ಟಿ ಕಾನೂನಿಗೆ ತಿದ್ದುಪಡಿ ಜಾರಿಗೆ ತರುವ ಮಸೂದೆಯನ್ನು ಅಂಗೀಕರಿಸಲಾಯಿತು. ಈ ವಿಷಯದ ಕುರಿತು ಸುಗ್ರೀವಾಜ್ಞೆಯನ್ನು ಬದಲಾಯಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಸೂದೆಯನ್ನು ಮಂಡಿಸಿದರು.
ವಿತ್ತ ಸಚಿವರು ಶೂನ್ಯ ವೇಳೆಯಲ್ಲಿ 12 ನಿಮಿಷಗಳ ಅವಧಿಯಲ್ಲಿ, 2025-2026 ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಮಂಡಿಸುವುದರ ಜೊತೆಗೆ ಮೂರು ಮಸೂದೆಗಳನ್ನು ಮಂಡಿಸಿದರು. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುವ ಎರಡು ಮಸೂದೆಗಳು ಮತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ ಅನ್ನು ಪರಿಚಯಿಸುವ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆಗಳಾದ 2025 ಮತ್ತು ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025 ಮಂಡನೆ ಮಾಡಲಾಯಿತು.
ಇನ್ನು ರಾಜ್ಯಸಭೆಯ ಕಲಾಪಕ್ಕೂ ವಿರೋಧ ಪಕ್ಷಗಳು ಅಡ್ಡಿಪಡಿಸಿವೆ. ರಾಜ್ಯಸಭೆ ಸಭಾಪತಿಯಾಗಿ ನೂತನವಾಗಿ ಆಯ್ಕೆಯಾದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಗೆ ಇದು ಚೊಚ್ಚಲ ಅಧಿವೇಶನವಾಗಿದೆ.

