ಪಹಲ್ಗಾಮ್‌ ದಾಳಿ, ಆಪರೇಷನ್ ಸಿಂಧೂರ ಚರ್ಚೆಗೆ ವಿಶೇಷ ಅಧಿವೇಶನಕ್ಕೆ ವಿಪಕ್ಷಗಳ ಆಗ್ರಹ

Most read

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ ಹಾಗೂ ನಂತರದ ಬೆಳವಣಿಗೆಗಳನ್ನು ಕುರಿತು ಚರ್ಚಿಸಲು ಕೂಡಲೇ ಸಂಸತ್ ವಿಶೇಷ ಅಧಿವೇಶನ ಕರೆಯಬೇಕೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಮೈತ್ರಿ ಕೂಟದ (I.N.D.I.A.) 16 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ಪ್ರತಿ ಪಕ್ಷದ ನಾಯಕ ರಾಹುಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಶಿವಸೇನಾದ (ಯುಬಿಟಿ)ಯ ಅರವಿಂದ್ ಸಾವಂತ್ ಮತ್ತು ಡಿಎಂಕೆಯ ಟಿ.ಆರ್ ಬಾಲು ಸೇರಿದಂತೆ ಇತರ ಮುಖಂಡರು ಪತ್ರಕ್ಕೆ ಸಹಿ ಹಾಕಿದ್ದಾರೆ. ಆರ್‌ಜೆಡಿ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ(ಎಂ), ಸಿಪಿಐ, ಆರ್‌ಎಸ್‌ಪಿ, ಮುಸ್ಲಿಂ ಲೀಗ್, ಜೆಎಂಎಂ, ವಿಸಿಕೆ, ಎಂಡಿಎಂಕೆ, ಸಿಪಿಐ(ಎಂಎಲ್)ಎಲ್ ಮತ್ತು ಕೇರಳ ಕಾಂಗ್ರೆಸ್ ನಾಯಕರು ಕೂಡ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪತ್ರ ಬರೆಯುವುದಕ್ಕೂ ಮುನ್ನ ಇಂದು ಪ್ರಮುಖ ಐದು ವಿರೋಧ ಪಕ್ಷಗಳು ಸಭೆ ನಡೆಸಿದ್ದವು. ಆದರೆ ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಎಎಪಿ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಜತೆಗೆ ಎನ್‌ಸಿಪಿ (ಶರದ್ ಪವಾರ್) ಈ ಸೂಕ್ಷ್ಮ ವಿಷಯದ ಕುರಿತು ವಿಶೇಷ ಅಧಿವೇಶನ ನಡೆಸಲು ಆಕ್ಷೇಪ ವ್ಯಕ್ತಪಡಿಸಿದ್ದು, ಸಭೆಯಿಂದ ದೂರ ಉಳಿದಿದೆ ಎಂದು ತಿಳಿದುಬಂದಿದೆ.

ಆಮ್ ಆದ್ಮಿ ಪಕ್ಷ(ಎಎಪಿ) ಸಭೆಗೆ ಗೈರಾಗಿದ್ದರೂ ಇದೇ ಬೇಡಿಕೆಯನ್ನು ಮುಂದಿಟ್ಟು ಪ್ರಧಾನಿಗೆ ಪ್ರತ್ಯೇಕ ಪತ್ರ ಬರೆಯಲಿದೆ ಎಂದು ತಿಳಿದು ಬಂದಿದೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಮತ್ತೆ ಸಂಪರ್ಕಿಸಿ ಮನವೊಲಿಸುವುದಾಗಿ ಇಂಡಿಯಾ ನಾಯಕರು ತಿಳಿಸಿದ್ದಾರೆ. ಭಯೋತ್ಪಾದಕ ದಾಳಿ, ಪೂಂಚ್, ಉರಿ ಮತ್ತು ರಜೌರಿಯಲ್ಲಿ ನಾಗರಿಕರ ಹತ್ಯೆ, ಕದನ ವಿರಾಮ ಘೋಷಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

More articles

Latest article