ನವದೆಹಲಿ: ‘ಆಪರೇಷನ್ ಸಿಂಧೂರ’ ಕುರಿತು ಮಾಹಿತಿ ನೀಡಲು ವಿವಿಧ ದೇಶಗಳಿಗೆ ಕಳುಹಿಸುವ ನಿಯೋಗಗಳಿಗೆ ಪಕ್ಷ ಸೂಚಿಸಿದ ಸಂಸದರ ಹೆಸರುಗಳನ್ನು ಕೈಬಿಟ್ಟು, ಕೇಂದ್ರ ಸರ್ಕಾರವು ತನಗೆ ಬೇಕಾದವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಕುಚೇಷ್ಠೆ ಮಾಡುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ.
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ, ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮೇಲೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತು ಮಾಹಿತಿ ನೀಡಲು ಮತ್ತು ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿದೆ ಎಂಬುದನ್ನು ಜಾಗತಿಕ ವೇದಿಕೆಯಲ್ಲಿ ಸಾರಲು ಭಾರತ ಮುಂದಾಗಿದೆ. ಅದರ ಅಂಗವಾಗಿ, ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗಗಳನ್ನು ರಚಿಸಲಾಗಿದೆ.
ಸಂಸದರ ನಿಯೋಗಗಳಿಗೆ ಪಕ್ಷ ಸೂಚಿಸದಿದ್ದರೂ, ಶಶಿ ತರೂರ್ ಅವರ ಹೆಸರನ್ನು ಸೇರಿಸಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಜತೆಗೆ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರನ್ನೂ ಸಂಪರ್ಕಿಸಿದೆ. ಆದರೆ, ಅವರು ನಿಯೋಗದ ವಿಚಾರವಾಗಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದರಿಂದ ಅವರ ಹೆಸರನ್ನು ಕೈಬಿಟ್ಟಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಪಾದಿಸಿದ್ದಾರೆ.
ಸರ್ವಪಕ್ಷಗಳ ನಿಯೋಗವನ್ನು ಕಳುಹಿಸುವ ನಿಟ್ಟಿನಲ್ಲಿ ನಾಲ್ವರು ಸಂಸದರ ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ಸರ್ಕಾರ ಕೇಳಿಕೊಂಡಿತು. ಅದರಂತೆ, ಆನಂದ್ ಶರ್ಮಾ, ಗೌರವ್ ಗೊಗಯಿ, ಸಯ್ಯದ್ ನಾಸೀರ್ ಹುಸ್ಸೇನ್ ಮತ್ತು ಅಮರಿಂದರ್ ಸಿಂಗ್ ರಾಜಾ ಅವರ ಹೆಸರುಗಳನ್ನು ಕಾಂಗ್ರೆಸ್ ಸೂಚಿಸಿತ್ತು. ಆದರೆ ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಕಾಂಗ್ರೆಸ್ ಸಂಸದ ಶಶಿ ತರೂರ್, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಈ ನಿಯೋಗಗಳನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಪಕ್ಷವನ್ನು ಸಂಪರ್ಕಿಸದೆ ನಮ್ಮ ಸಂಸದರ ಹೆಸರುಗಳನ್ನು ನಿಯೋಗದಲ್ಲಿ ಸೇರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂಸದರನ್ನು ಅಧಿಕೃತ ನಿಯೋಗದಲ್ಲಿ ಕಳುಹಿಸುವಾಗ, ಸಂಸದರೂ ಪಕ್ಷದ ಸಮ್ಮತಿ ಪಡೆಯಬೇಕು ಎನ್ನುವುದು ಸಂಪ್ರದಾಯವಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ನಾರದ ಮುನಿ ರಾಜಕಾರಣ ಮಾಡುತ್ತಿದೆ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಿಯೋಗ ರಚನೆಯ ಇಡೀ ತಂತ್ರವೇ ದಾರಿ ತಪ್ಪಿಸುವ ರೀರಿತಯಲ್ಲಿದೆ. ತಮ್ಮ ಪಕ್ಷ ಸೂಚಿಸಿರುವ ಹೆಸರುಗಳನ್ನು ಮರುಪರಿಶೀಲಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ನಾಲ್ಕು ಹೆಸರುಗಳನ್ನು ಕೇಳಲಾಗಿತ್ತು. ಶಿಫಾರಸ್ಸು ಮಾಡಿದ್ದೇವೆ. ಅವುಗಳನ್ನು ಪರಿಗಣಿಸದಿರುವುದು ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ನಾವು ಸೂಚಿಸಿರುವ ಹೆಸರುಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಮೊದಲು ಹೆಸರುಗಳನ್ನು ಕೇಳಿ, ನಂತರ ತನ್ನಿಚ್ಛೆಯಂತೆ ಹೆಸರು ಘೋಷಿಸುವುದು ಪ್ರಾಮಾಣಿಕತೆಯಲ್ಲ. ಸರ್ಕಾರ ಆಟವಾಡುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಜೈರಾಂ ರಮೇಶ್ ಕಿಡಿ ಕಾರಿದ್ದಾರೆ.