ಮೈಸೂರು: ರಾಜ್ಯದಲ್ಲಿ ಹಾಲಿ ಯಾವುದೇ ಜಿಲ್ಲೆಯಲ್ಲೂ ರಸಗೊಬ್ಬರದ ಕೊರತೆ ಇಲ್ಲ. ಆದರೆ ಕೇಂದ್ರದ ಸಕಾರಾತ್ಮಕ ನಿರ್ಧಾರದಂತೆ ಮುಂದಿನ ದಿನಗಳಲ್ಲಿ ಯೂರಿಯಾ ಪೂರೈಕೆ ಶೇ. 50 ರಷ್ಟು ಕಡಿತಗೊಳ್ಳಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮೈಸೂರಿನ ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ವಿಭಾಗ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಅವರು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ಉದ್ದೇಶದಿಂದ ಯೂರಿಯಾ ಬಳಕೆ ಕಡೆಮೆ ಮಾಡಲು ಕರೆ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಎರೆಡು ವರ್ಷಗಳಿಂದ ರಾಸಾಯನಿಕಗಳು ಹಾಗೂ ಕೀಟನಾಶಕಗಳ ಬಳಕೆ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸಾವಯವ ಕೃಷಿ, ಸಮಗ್ರ ಬೇಸಾಯದ ಲಾಭಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಮಳೆ ಉತ್ತಮವಾಗಿದ್ದು ಬಿತ್ತನೆ ಚುರುಕುಗೊಂಡಿದೆ. ಪೂರ್ವ ಮುಂಗಾರು ಅಧಿಕವಾಗಿ ಸುರಿದು ಕೆಲವೆಡೆ ಹಾನಿ ಮಾಡಿದೆ. ರೈತರು ಪ್ರತಿ ವರ್ಷ ಬೆಳೆವಿಮೆ ಮಾಡಿಸಿ ಸಂಭವನೀಯ ನಷ್ಟ ಕಡಿತ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು.
2023-24 ರಲ್ಲಿ ಬರ ಪರಿಸ್ಥಿತಿ ಕಾಡಿತ್ತು. ರೈತರ ಸಂಕಷ್ಟಕ್ಕೆ ಸ್ಪಂದಿಸಿ 3454 ಕೋಟಿ ರೂ ಬರಪರಿಹಾರ ನೀಡಲಾಗಿತ್ತು. 2024 -25 ನೇ ಸಾಲಿನಲ್ಲಿ ಗುರಿಗಿಂತ ಹೆಚ್ಚು ಅಂದರೆ 153 ಲಕ್ಷ ಟನ್ ಆಹಾರ ಉತ್ಪಾದನೆಯಾಗಿತ್ತು .ಈ ವರ್ಷ148.48 ಲಕ್ಷ ಮೆ.ಟನ್ ಆಹಾರ ಧಾನ್ಯ ಗಳು ಮತ್ತು 12.20 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.
ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಆಧ್ಯತೆ ನೀಡಲಾಗಿದೆ . ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಯಂತ್ರೋಪಕರಣಗಳು, ಸೂಕ್ಷ್ಮ ನೀರಾವರಿ ಸಲಕರಣೆಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೃಷಿ ಭಾಗ್ಯ ಯೋಜನೆ ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಲಾಗಿದ್ದು 24000 ಕೃಷಿ ಹೊಂಡ ನಿರ್ಮಾಣ ಗುರಿ ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಕೃಷಿ ಯೋಜನೆಗಳ ಅನುಷ್ಠಾನ ಹಾಗೂ ಕೃಷಿ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಎಲ್ಲಾ ವಿಭಾಗಗಳಲ್ಲೂ ಅಧಿಕಾರಿಗಳ ಸಭೆ ಮಾಡಿ ಸಲಹೆ ,ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಆಯುಕ್ತ ವೈ.ಎಸ್ ಪಾಟೀಲ್ ನಿರ್ದೇಶಕ ಡಾ ಜಿ.ಟಿ ಪುತ್ರ,ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಮದ್ ಪರ್ವೇಜ್ ಬಂಥನಾಳ,ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನುಪ್,ಬೀಜ ಪ್ರಮಾಣೀಕರಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಸದಾಶಿವ ಮತ್ತಿತರರು ಹಾಜರಿದ್ದರು.