ನವದೆಹಲಿ: ಭಾರತದಲ್ಲಿ ಯಾವುದೇ ಭೂಮಿ, ಮನೆ ಅಥವಾ ಷೇರುಗಳನ್ನು ಹೊಂದಿಲ್ಲ ಎಂದು ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ 12.35 ಎಕರೆ ಸರ್ಕಾರಿ ಭೂಮಿಯನ್ನು ಪಿತ್ರೋಡಾ ಅವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ ಬೆನ್ನಲ್ಲೇ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅವರು, ದೂರದರ್ಶನ ಮತ್ತು ಮುದ್ರಣ ಮಾಧ್ಯಮಗಳು ಸೇರಿದಂತೆ ಇತ್ತೀಚೆಗೆ ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಪರಿಗಣಿಸಿ, ನಾನು ಬಾರತದಲಿ ಯಾವುದೇ ಭೂಮಿ. ಮನೆ ಅಥವಾ ಷೇರುಗಳನ್ನು ಹೊಂದಿಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಇದಲ್ಲದೆ, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮತ್ತು 2004 ರಿಂದ 2014ರವರೆಗೆ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಸರ್ಕಾರದೊಂದಿಗೆ ಕೆಲಸ ಮಾಡಿದ ನನ್ನ ಅಧಿಕಾರಾವಧಿಯಲ್ಲಿ ನಾನು ಯಾವತ್ತೂ ಯಾವುದೇ ಸಂಬಳವನ್ನು ತೆಗೆದುಕೊಂಡಿಲ್ಲ ಎಂದೂ ಪಿತ್ರೋಡಾ ಹೇಳಿದ್ದಾರೆ.
ನನ್ನ 83 ವರ್ಷಗಳ ಜೀವನದಲ್ಲಿ ಭಾರತ ಅಥವಾ ಬೇರೆ ಯಾವುದೇ ದೇಶದಲ್ಲಿ ನಾನು ಎಂದಿಗೂ ಲಂಚ ನೀಡಿಲ್ಲ ಅಥವಾ ಸ್ವೀಕರಿಸಿಲ್ಲ ಎಂಬುದನ್ನುಧೈರ್ಯವಾಗಿ ಹೇಳಲು ಬಯಸುತ್ತೇನೆ. ಇದು ಸಂಪೂರ್ಣ ಮತ್ತು ನಿರಾಕರಿಸಲಾಗದ ಸತ್ಯ ಎಂದು ಪಿತ್ರೋಡಾ ಪ್ರತಿಪಾದಿಸಿದ್ದಾರೆ.
ಮೂರು ದಿನಗಳ ಹಿಂದೆ ಬಿಜೆಪಿ ನಾಯಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಸ್ಯಾಮ್ ಪಿತ್ರೋಡಾ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಐದು ಹಿರಿಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಕರ್ನಾಟಕದ ಬೆಂಗಳೂರಿನ ಯಲಹಂಕದಲ್ಲಿ ರೂ. 150 ಕೋಟಿ ಮೌಲ್ಯದ 12.35 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಜಾರಿ ನಿರ್ದೇಶನಾಲಯ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ಅವರು ದೂರು ನೀಡಿದ್ದಾರೆ.