ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ; ಮೇ 21 ಹಾಗೂ 22ಕ್ಕೆ ವಿಚಾರಣೆ ಮುಂದೂಡಿಕೆ

Most read

ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ ಎನ್ನಲಾದ ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಮೇ 21 ಹಾಗೂ 22ಕ್ಕೆ ಮುಂದೂಡಿದೆ.

ಜಾರಿ ನಿರ್ದೇಶನಾಲಯದ ವಾದವನ್ನು ಆಲಿಸಿದ ವಿಶೇಷ ನ್ಯಾಯಧೀಶರಾದ ವಿಶಾಲ್ ಗೊಗ್ನೆ ಅವರು, ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಯಾಮ್ ಪಿತ್ರೋಡಾಗೆ ಗುರುವಾರವಷ್ಟೇ ಇ–ಮೇಲ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಆದ್ದರಿಂದ ಆರೋಪ ಪಟ್ಟಿಯನ್ನು ಪರಿಗಣಿಸುವ ಬಗ್ಗೆ ಮುಂದಿನ ದಿನಾಂಕದಂದು ವಾದವನ್ನು ಆಲಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಪ್ರಕರಣದ ಸಂಬಂಧ ಮೇ 2ರಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಇವರಿಬ್ಬರ ಜೊತೆಗೆ ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿತ್ರೊಡಾ ಹಾಗೂ ಸುಮನ್ ದುಬೆ, ಯಂಗ್ ಇಂಡಿಯನ್, ಡೊಟೆಕ್ಸ್ ಮರ್ಚೆಂಡೈಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಸುನಿಲ್ ಭಂಡಾಾರಿ ಅವರಿಗೂ ನೋಟಿಸ್ ನೀಡಿತ್ತು. ವಾದವನ್ನು ಆಲಿಸುವ ಅವರ ಹಕ್ಕನ್ನು ದೋಷಾರೋಪ ಪಟ್ಟಿಯ ಪರಿಗಣನೆಯ ವೇಳೆ ನೀಡಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹಣ ಅಕ್ರಮ ವರ್ಗಾವಣೆ, ಹಣ ಅಕ್ರಮ ವರ್ಗಾವಣೆಗೆ ಶಿಕ್ಷೆ ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಹೀಗೆ ಮೂರು ವಿಭಾಗಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು 2014ರ ಜೂನ್ 26ರಂದು ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ದಾಖಲಿಸಿದ್ದರು. 2021ರಲ್ಲಿ ತನಿಖೆ ಆರಂಭಿಸಿದ್ದ ಜಾರಿ ನಿರ್ದೇಶನಾಲಯ ಇತ್ತೀಚೆಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

More articles

Latest article