ಕೋಲ್ಕತ್ತ: ಚುನಾವಣಾ ಆಯೋಗದ ನೆರವಿನೊಂದಿಗೆ ನೆರೆಯ ರಾಜ್ಯಗಳ ನಿವಾಸಿಗಳು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಆಯೋಗದ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕೇಂದ್ರ ಸರ್ಕಾರ, ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗದ ಕೃಪೆಯೊಂದಿಗೆ ಮತದಾರರ ಪಟ್ಟಿಯನ್ನು ಬಿಜೆಪಿ ಹೇಗೆ ತಿರುಚುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
2006ರಲ್ಲಿ ಜಮೀನು ಸ್ವಾಧೀನ ಕ್ರಮದ ವಿರುದ್ಧ 26 ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಚುನಾವಣಾ ಆಯೋಗದ ವಿರುದ್ಧವೂ ಚಳವಳಿ ನಡೆಸಲಾಗಿತ್ತು. ಮತದಾರರ ಪಟ್ಟಿ ಸರಿಪಡಿಸುವ ನಮ್ಮ ಬೇಡಿಕೆ ಈಡೇರಿಕೆಗೆ ಅಗತ್ಯವಿದ್ದಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ದೆಹಲಿ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಹರಿಯಾಣ ಮತ್ತು ಗುಜರಾತ್ನ ಮತದಾರರು ಭಾಗಿಯಾಗುವಂತೆ ಬಿಜೆಪಿ ತಂತ್ರ ರೂಪಿಸಿತ್ತು. ನಕಲಿ ಮತದಾರರನ್ನೇ ಬಳಸಿಕೊಂಡು ಅಕ್ರಮ ಎಸಗಿದ ಬಿಜೆಪಿ, ಈ ರಾಜ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಇತರ ರಾಜ್ಯಗಳ ನಕಲಿ ಮತದಾರರನ್ನು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಳಸುವ ತಂತ್ರ ರೂಪಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಅದು ಎಂದಿಗೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ ಎಂದು ಮಮತಾ ಕಿಡಿಯಾಡಿದ್ದಾರೆ.
ಬಿಜೆಪಿಯ ನೆರವಿನೊಂದಿಗೇ ಅವರು ಕರೆತರುವ ನಕಲಿ ಮತದಾರರನ್ನು ನಾವು ಪತ್ತೆ ಮಾಡುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಎಂದಿಗೂ ಹೊರಗಿನವರಿಗೆ (ಬಿಜೆಪಿ) ಅವಕಾಶ ನೀಡುವುದಿಲ್ಲ. ದೆಹಲಿ ಮಾಡಿದ ಕೃತ್ಯವು ಪಶ್ಚಿಮ ಬಂಗಾಳದಲ್ಲಿ ಪುನರಾವರ್ತಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.