Sunday, September 8, 2024

ಮುಡಾ ಹಗರಣದಲ್ಲಿ ಕೀಳು ರಾಜಕಾರಣ: ದಾಖಲೆಗಳೊಂದಿಗೆ ಪ್ರತಿ ಪ್ರಶ್ನೆಗಳಿಗೆ‌ ಉತ್ತರಿಸಿದ ಮುಖ್ಯಮಂತ್ರಿ

Most read

ಬೆಂಗಳೂರು: ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಷರಶಃ ಸಿಡಿದು ನಿಂತರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ  MUDA ದಲ್ಲಿ ನಿವೇಶನ ಪಡೆದ ವಿಷಯದ ಕುರಿತು ದಾಖಲೆಗಳ ಸಮೇತ‌ ಮಾಹಿತಿಗಳನ್ನು ಮುಂದಿಟ್ಟರು.

ಬಿಜೆಪಿ ಜೆಡಿಎಸ್‌ಗಳೆರಡೂ ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಹಿಟ್ಲರ್‌ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಗುಡುಗಿದರು.

ಹಿಂದೆ ದೇವರಾಜ ಅರಸರ ವಿಚಾರದಲ್ಲೂ ಹೀಗೆ ಆಯಿತು. ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಯಿತು. ಅದಕ್ಕೂ ಮೊದಲು ಕಲ್ಯಾಣದ ಬಿಜ್ಜಳನನ್ನು ಇದೆ ಪೇಶ್ವೆ ಮನಸ್ಥಿತಿಯ ಜನರೆ ಕೊಲೆ ಮಾಡಿದರು. ಈಗ ನನ್ನ ವಿಚಾರಕ್ಕೂ ಬಂದಿದ್ದೀರಿ. ಅಡ್ಡಿಯಿಲ್ಲ ಬನ್ನಿ, ಬಂದದ್ದು ಒಳ್ಳೆಯದೆ ಆಯಿತು. ರಾಜ್ಯದ ಜನ ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೆ ಮಾಡಬಾರದೆಂಬ ನಿಲುವು ಇವರದು. ಆದ್ದರಿಂದಲೆ ಈ ರೀತಿ ಮುಡಾ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನ್ಯತೆಯಿಲ್ಲದಿದ್ದರೂ ದೊಡ್ಡ ಸುದ್ದಿ ಮಾಡಿಕೊಂಡು ಕೂತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ನಿಮ್ಮ ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನಸ್ಥಿತಿ ಅರ್ಥವಾಗುತ್ತಿದೆ. ಜನ ನಮ್ಮಿಂದ ದೂರ ಸರಿಯುತ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ.  ಆದ್ದರಿಂದಲೆ ಕಾಗಕ್ಕ-ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ- ಜೆಡಿಎಸ್‌ನವರ ಮೆದುಳು ಖಾಲಿಯಾಗಿದೆ. ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಹಾಲಿನ ರೇಟು ಹೆಚ್ಚು ಮಾಡಲಿಲ್ಲ ಎಂದು ತಿಳಿಸಿ ಹೇಳಿದರೂ ಹಾಲಿನ ರೇಟು ಹೆಚ್ಚು ಮಾಡಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಪಾತ್ರ ನಯಾಪೈಸೆಯಷ್ಟು ಇರುವುದಿಲ್ಲವೆಂದು ಬಿಡಿಸಿ ಹೇಳಿದರೂ, ದಾಖಲೆಗಳನ್ನು ಕೊಟ್ಟರೂ ನಂಬಲು ತಯಾರಿಲ್ಲ. ಮೈಸೂರು ಮುಡಾದ ವಿಚಾರದಲ್ಲಿಯೂ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆ ನೀಡದೆ, ಏನಾದರೂ ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವುದು, ಅವರು ಭಾಷಣ ಮಾಡುವುದನ್ನು ನೀವು ವರದಿ ಮಾಡುವುದನ್ನು ಬಿಟ್ಟರೆ  ಬೇರೆ ಏನಾದರೂ ನಡೆಯಿತಾ? ಎಂದು ಅವರು ಪ್ರಶ್ನಿಸಿದರು.

ನಾನೂ ಕೂಡ ವಿರೋಧ ಪಕ್ಷದ ನಾಯಕನಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೇನೆ. ದಾಖಲೆಗಳಿಲ್ಲದೆ ಒಂದೇ ಒಂದು ಮಾತನ್ನು ನಾನು ಆಡಿಲ್ಲ.  ಆದರೆ ಬಿಜೆಪಿ ಜೆಡಿಎಸ್‌ನವರು ಯಾವುದೇ ದಾಖಲೆಗಳಿಲ್ಲದೆ ಎರಡು ವಾರಗಳ ಕಾಲ ಸದನವನ್ನು ದಿಕ್ಕುತಪ್ಪಿಸಿದರು. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೊ ಅದಕ್ಕೆ ಬಿಜೆಪಿಯವರು ಮಾದರಿಯಾದರು. ಇಂಥ ಬೇಜವಾಬ್ಧಾರಿ ಮತ್ತು ಚೈಲ್ಡಿಷ್ ವರ್ತನೆಯ ವಿರೋಧ ಪಕ್ಷವನ್ನು ನಾನು ನೋಡಿಯೇ ಇಲ್ಲ‌ ಎಂದು ಅವರು ಟೀಕಿಸಿದರು.

ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ನಿಮಗೂ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಇವರ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿಯೆ ಮುಖ್ಯಮಂತ್ರಿಯವರನ್ನು ಕೇಂದ್ರದಲ್ಲಿಟ್ಟುಕೊಂಡು ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ. ಒಳ್ಳೆಯದೆ, ಯಾವುದೂ ಗಾಯದ ರೂಪದಲ್ಲೆ ಉಳಿಯಬಾರದು. ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರ ಬರಬೇಕು. ಆಗಲೇ ಮನುಷ್ಯ ಆರೋಗ್ಯವಂತನಾಗುವುದು.  ಹಾಗೆಯೆ ಬಿಜೆಪಿ-ಜೆಡಿಎಸ್‌ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರ ಬರಬೇಕು‌ ಎಂದು ಅವರು ಮಾರ್ಮಿಕವಾಗಿ ನುಡಿದರು.

ಈಗಾಗಲೆ ಸರ್ಕಾರವು 14-7-2024 ರಂದು ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಪಿ.ಬಿ ದೇಸಾಯಿಯವರ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ಆಯೋಗವು ತನ್ನ ಕೆಲಸವನ್ನು ಪ್ರಾರಂಭಿಸಿದೆ. ಆಯೋಗ ತೀರ್ಪು ನೀಡಲಿದೆ ಎಂದು ಅವರು ಹೇಳಿದರು.

ಮುಡಾ ಕುರಿತಂತೆ ವಿರೋಧಪಕ್ಷಗಳ ಆರೋಪಕ್ಕೆ ಸಿದ್ಧರಾಮಯ್ಯ ನೀಡಿದ ಪ್ರತಿಕ್ರಿಯೆ ಈ ಕೆಳಗಿನಂತಿದೆ.

  1. ಸದನದಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ದಲಿತರ ಜಮೀನುಗಳನ್ನು ಕಬಳಿಸಿದ್ದಾರೆ ಎಂದು ಕೂಗುತ್ತಿದ್ದರು. ಇದು ನಿಜವೆ?

2. ನನ್ನ ಇಡೀ ಜೀವಿತಾವಧಿಪೂರ್ತಿ ದಲಿತ- ದಮನಿತ, ಹಿಂದುಳಿದವರು, ಅಲ್ಪಸಂಖ್ಯಾತರು ಮುಂತಾದ ನೊಂದ ಜನರ ಪರವಾಗಿ ಬದುಕಿದ್ದೇನೆ, ಮುಂದೆಯೂ ಬದುಕುತ್ತೇನೆ.

3. ನಮ್ಮ ಕುಟುಂಬಕ್ಕೆ ಈ ಜಮೀನುಗಳು 2010 ರಿಂದ ಈಚೆಗೆ ಬಂದಿವೆ.  ಅದಕ್ಕೂ ಮೊದಲು ನಮಗೆ ಸಂಬಂಧ ಪಟ್ಟಿಲ್ಲ.  ಆದರೂ ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ದಾರೆ ಎಂಬುದರಿAದ ಕೆಲವು ಮಾಹಿತಿಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ನಾನು ಕಂದಾಯ ಭೂಮಿಗಳ ವಿಚಾರದಲ್ಲಿ, ಕಂದಾಯ ದಾಖಲೆಗಳ ವಿಚಾರದಲ್ಲಿ ಅನುಭವಿಯಲ್ಲ. ಆದರೂ  ಬಿಜೆಪಿ ಜೆಡಿಎಸ್‌ನವರು ಸುಳ್ಳು ಆರೋಪ ಮಾಡುತ್ತಿರುವುದರಿಂದ ಕೆಲವು ವಿಚಾರಗಳನ್ನು  ಪ್ರಸ್ತಾಪಿಸುತ್ತೇನೆ.

4. ಕೆಸರೆ ಗ್ರಾಮದ ಸರ್ವೆ ನಂ 464 ರ ಜಮೀನು ನಿಂಗ ಬಿನ್ ಜವರ ಎನ್ನುವವರಿಗೆ ಹರಾಜಿನ ಮೂಲಕ ಬಂದಿದೆ.

5. ಈ ಕುರಿತ ಕ್ರಮಾವಳಿಗಳು ಈ ರೀತಿ ಇವೆ. ದಿನಾಂಕ 2-8 -1935 ರಲ್ಲಿ ಜವರನ ಮಗ ನಿಂಗ ಎನ್ನವವರು ಜಮೀನುಗಳಿಗಾಗಿ ಅರ್ಜಿ ಕೊಟ್ಟಿದ್ದಾರೆ.

6. ಅವರ ಅರ್ಜಿಯನ್ನು ಪರಿಗಣಿಸಿ ಆಗಿನ ಜಿಲ್ಲಾಡಳಿತವು ಹರಾಜಿನ ಮೂಲಕ ಜಮೀನು ನೀಡಲು ತೀರ್ಮಾನಿಸಿ 26-9-1935 ರಲ್ಲಿ ಹರಾಜು ನೋಟೀಸು ಹೊರಡಿಸಿ 13-10- 1935 ರಂದು ಹರಾಜು ಮಾಡಲು ತೀರ್ಮಾನಿಸಿದ್ದಾರೆ. ಅದರಂತೆ ಹರಾಜು ನಡೆದಿದೆ.

7. ದಿನಾಂಕ 31-10-1935 ರಂದು ಹಣ ಕಟ್ಟಿಸಿಕೊಂಡು  ಹಕ್ಕಿನ ಪತ್ರ ಕೊಟ್ಟಿದ್ದಾರೆ. 1 ರೂಪಾಯಿ 3-16 ಎಕರೆ ಜಮೀನು ಹರಾಜಾಗಿದೆ. “Sale is confirmed” ಎಂದು ಕಡತದಲ್ಲಿ ದಾಖಲಿಸಿದ್ದಾರೆ.

8. ಟ್ರೆಜರಿಗೆ ಎಲ್‌ಆರ್ 10 ರಂತೆ ಹರಾಜಿನ ಹಣ ಸಂದಾಯ ಮಾಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ.

9. ಅಂದಿನ ಮೈಸೂರು ಅಮಲ್ದಾರರು [ ತಹಶೀಲ್ದಾರರು] ಹೀಗೆ ದಾಖಲಿಸಿದ್ದಾರೆ. “ನಿಂಗ ಎನ್ನುವವರು ಕ್ರಯದಾರನೆಂದು ಕ್ರಮವಾಗಿ ಪ್ರಕಟಿಸಲ್ಪಟ್ಟಿರುವುದರಿಂದಲೂ ಮತ್ತು ಸದರಿ ನಿಂಗ ಎಂಬುವವರು 1 ರೂಪಾಯಿಗಳ ಕ್ರಯದ ಮೊಬಲಗಿನ ಪೂರಾ [ಕಾಣಿಸುವುದಿಲ್ಲ]     —- ಸರ್ಕಾರಿ ಖಜಾನೆಗೆ ಪಾವತಿ ಮಾಡಿರುವುದರಿಂದ ಮೈಸೂರು ತಾಲ್ಲೂಕಿನ ಅಮಲ್ದಾರನಾದ ನಾನು ನಿಂಗ ಎಂಬುವವರಿಗೆ ಜಮೀನಿನ ಹಿಡುವಳಿಯನ್ನು ಹೊಂದಲು ಈ ಮೂಲಕ ಅಪ್ಪಣೆಯನ್ನು ಕೊಟ್ಟಿರುತ್ತೇನೆ. ಆ ಜಮೀನನ್ನು ಸದರಿ ನಿಂಗ ಎಂಬುವರಿಗೂ ಅವರ ವಾರಸುದಾರರಿಗೂ ಅವರ ಪ್ರತಿನಿಧಿಗಳಿಗೂ ಮತ್ತು ಹವಾಲ್ತೆದಾರರಿಗೂ ಸರ್ವೆ ಖಾತರಿ [ ಸರ್ವೆ ಗ್ಯಾರಂಟಿ] ನಿಬಂಧನೆಯ ಷರತ್ತುಗಳ ಮೇರೆಗೆ  ಈ ಮೂಲಕ ಕೊಟ್ಟು ಕಾಯಂ ಮಾಡಿರುತ್ತೇನೆ… ಎಂದು  ನಮೂದಿಸಿದ್ದಾರೆ.

10. ಜಮೀನುಗಳು ಹರಾಜಿನ ಮೂಲಕ ಬಂದ ಕಾರಣ  ಜಮೀನುಗಳು ಪಿಟಿಸಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಸ್ವಯಾರ್ಜಿತ ಜಮೀನುಗಳಾಗುತ್ತವೆ ಎಂಬುದು ಈ ರಾಜ್ಯದ ಪ್ರತಿ ರೈತನಿಗೂ ಗೊತ್ತಿದೆ. ಭೂಮಿ ನುಂಗುವುದರಲ್ಲಿ ಪರಿಣತರಾಗಿರುವ ಬಿಜೆಪಿ-ಜೆಡಿಎಸ್‌ನವರು ಎಲ್ಲ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ. ಗೊತ್ತಿದ್ದು ಸುಳ್ಳು ಹೇಳುವುದು ಕ್ರಿಮಿನಲ್ ಅಪರಾಧವಲ್ಲವೆ?

11. ಅಲ್ಲಿಂದಾಚೆಗೆ ನಿಂಗ ಬಿನ್ ಜವರ ಎಂಬುವವರ ಕುಟುಂಬದಲ್ಲಿಯೆ ಜಮೀನುಗಳು ಇರುತ್ತವೆ. ಐಎಲ್-ಆರ್‌ಆರ್ ಸೇರಿದಂತೆ ಎಲ್ಲಾ ದಾಖಲಾತಿಗಳು ಅವರ ಹೆಸರಿನಲ್ಲಿಯೆ ಇರುವುದು ಕಂಡು ಬರುತ್ತದೆ.

12. ಆ ನಂತರ ಈ ಜಮೀನುಗಳ ಮೇಲೆ ಭೋಗ್ಯ, ಆಧಾರ ಇತ್ಯಾದಿಗಳಾಗಿ ಅವುಗಳು ಖುಲಾಸೆಯಾಗಿರುವುದೂ ದಾಖಲೆಗಳ ಮೂಲಕ ಕಂಡು ಬರುತ್ತವೆ.

13. ದಿನಾಂಕ:20-6-93 ರಲ್ಲಿ ದೇವರಾಜು ಎನ್ನುವವರ ಹೆಸರಿಗೆ ಖಾತೆ [ಮ್ಯುಟೇಶನ್] ಮಾಡಿದ್ದಾರೆ.  ಮ್ಯುಟೇಶನ್ ರಿಜಿಸ್ಟರಿನಲ್ಲಿ ಹೀಗೆ ನಮೂದಿಸಿದ್ದಾರೆ. “ಖಾತೆದಾರರಾದ  ನಿಂಗ ಬಿನ್ ಜವರರವರು ಪೌತಿಯಾಗಿರುತ್ತಾರೆ ಮತ್ತು ಗ್ರಾಮದಲ್ಲಿ ನಮೂನೆ-21 ರಲ್ಲಿ ಪ್ರಚುರಪಡಿಸಲಾಗಿ ನಿಗದಿತ ಅವಧಿಯವರೆಗೆ ಯಾವುದೇ ತಂಟೆ ತಕರಾರುಗಳು ಬಂದಿರುವುದಿಲ್ಲ. ಅದಾಗಿ ಲೇಟ್ ನಿಂಗ ಬಿನ್ ಜವರರವರಿಗೆ ಮೂರು ಜನ ಗಂಡು ಮಕ್ಕಳಿದ್ದು ಮೂರನೆ ಮಗನಾದ ಜೆ.ದೇವರಾಜುರವರ ಹೆಸರಿನ ಖಾತೆ ಮಾಡಬಹುದಾಗಿ ಇವರ ಮೊದಲನೆ ಅಣ್ಣ ಮಲ್ಲಯ್ಯ ಮತ್ತು ಎರಡನೆ ಅಣ್ಣನಾದ ಮೈಲಾರಯ್ಯ ಇವರ ಪತ್ನಿ ಪುಟ್ಟ ಗೌರಮ್ಮ ವೈಫ್ ಆಫ್  ಮೈಲಾರಯ್ಯ ಇವರ ಮಗ ಎಂ.ಮAಜುನಾಥಸ್ವಾಮಿ ಇವರುಗಳು ಒಪ್ಪಿ ಹೇಳಿಕೆ ನೀಡಿರುವುದರ ಪ್ರಕಾರವಾಗಿ ಸದರಿ ಅರ್ಜಿದಾರರಾದ ಜೆ. ದೇವರಾಜುರವರ ಹೆಸರಿಗೆ ಪೌತಿ ಬದಲಾವಣೆ ಪ್ರಕಾರ ಖಾತೆ ಅಂಗೀಕರಿಸಬಹುದಾಗಿ ಎಂದು ವರದಿಯಾಗಿದೆ. ಅದರ ಆಧಾರದ ಮೇಲೆ ರಾಜಸ್ವ ನಿರೀಕ್ಷಕರು ಮೈಸೂರು ನಗರ ನಿವಾಸಿಯಾದ ಲೇಟ್ ನಿಂಗ ಬಿನ್ ಜವರವರ ಮೂರನೆ ಮಗ ದೇವರಾಜುರವರ ಹೆಸರಿಗೆ ಪೌತಿ ಬದಲಾವಣೆ ಮೇಲೆ ಖಾತೆ ದಾಖಲ್ಮಾಡಿದೆ ಎಂದು ದಾಖಲಿಸಿದ್ದಾರೆ.

14. ಕಂದಾಯ ಭೂಮಿಗಳ ವಿಚಾರಗಳಲ್ಲಿ ನನಗೆ ಹೆಚ್ಚು ಆಸಕ್ತಿ ಇಲ್ಲದ ಕಾರಣ ನಾನು ಆ ವಿಚಾರದಲ್ಲಿ ಪರಿಣತನಲ್ಲ. ವಿರೋಧ ಪಕ್ಷದ ಅನೇಕರು ಈ ಭೂಮಿ ವ್ಯವಹಾರಗಳಲ್ಲಿ ಭಾರಿ ಪರಿಣತರಿದ್ದಾರೆ. ಯಾವ ಯಾವ ರೀತಿಯಲ್ಲಿ ಪರಿಣಿತರಿದ್ದಾರೆಂದರೆ ಈಗ ವಿರೋಧ ಪಕ್ಷದ ನಾಯಕರಾಗಿರುವಾರ್ ಅಶೋಕ್ ಅವರು ರಿಯಲ್‌ಎಸ್ಟೇಟ್‌ನವರಿಗೆ ಬೇಕಾದ ಹಾಗೆ ಕಾಯದೆ, ಕಟ್ಟಳೆಗಳನ್ನು ತಿದ್ದುಪಡಿ ಮಾಡಿಕೊಟ್ಟರು.

15. ಕರ್ನಾಟಕ ಲ್ಯಾಂಡ್ ರಿಫಾರ್ಮ್ಸ್ ಕಾಯ್ದೆಯ 79 ಎ ಮತ್ತು ಬಿ ಯನ್ನು ರದ್ದು ಪಡಿಸಿದವರು ಯಾರು? 79 ಎ ಮತ್ತು ಬಿ ಯನ್ನು ರದ್ದು ಮಾಡಿದ್ದರಿಂದ ಸಾವಿರಾರು ರೈತರು ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಬೆಲೆಗಳು ಗಗನಕ್ಕೆ ಮುಟ್ಟಿರುವುದರಿಂದ ಸಣ್ಣ ರೈತರಿರಲಿ ದೊಡ್ಡ ರೈತರೂ ಕೂಡ ಕೃಷಿ ಭೂಮಿ ಕೊಂಡುಕೊಳ್ಳಲಾಗದAತೆ ಮಾಡಲಾಗಿದೆ. 79 ಮತ್ತು 79 ಬಿ ಯನ್ನು ರದ್ದು ಮಾಡುವ ಮೊದಲು ಸರಾಸರಿ 1 ಎಕರೆ ಭೂಮಿಯ ಬೆಲೆ 7-8 ಲಕ್ಷ ರೂ ಇದ್ದದ್ದು ಈಗ 40-50 ಲಕ್ಷ ರೂ ಆಗಿದೆ ಎಂದು ಹೇಳುತ್ತಿದ್ದಾರೆ. ಬೆಲೆಗಳು ಹೀಗೆ ಏರಿಕೆಯಾದರೆ ಯಾವ ರೈತ ತಾನೆ ಭೂಮಿ ಕೊಂಡುಕೊಂಡು ಬೆಳೆ ಬೆಳೆಯಲು ಸಾಧ್ಯ?

16. 79 ಎ ಮತ್ತು ಬಿ ರದ್ದು ಮಾಡಿದ್ದರಿಂದ ಹಣ ಇರುವವರು ಜಮೀನು ಖರೀದಿಸಿ ಫಾರ್ಮ್ಹೌಸ್, ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿದ್ದಾರೆ. ಆದರೆ ಈ ಜಮೀನುಗಳಲ್ಲಿ ರಾಗಿ, ಭತ್ತ, ಜೋಳ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಈ ಜಮೀನುಗಳೆಲ್ಲ ಈಗ ಉಳ್ಳವರ ಪಾಲಾಗಿವೆ. ಅಲ್ಲಿ ಯಾವ ಬೆಳೆಗಳನ್ನೂ ಬೆಳೆಯುತ್ತಿಲ್ಲ. ಇದು ಫುಡ್ ಸೆಕ್ಯುರಿಟಿಗೆ ಬಹಳ ದೊಡ್ಡ ಥ್ರೆಟ್ ಅಲ್ಲವೆ?

17. ಹಾಗೆಯೆ ಪಿಟಿಸಿಎಲ್ ಪ್ರಕರಣವೊಂದನ್ನು ಆಧರಿಸಿ ನ್ಯಾಯಾಲಯದಲ್ಲಿ ಒಂದು ತೀರ್ಪು ಬಂತು. ಅದನ್ನು ಆಧರಿಸಿ ಎಸಿ, ಡಿಸಿ ಕೋರ್ಟುಗಳು, ನ್ಯಾಯಾಲಯಗಳು ಪರಿಶಿಷ್ಟ ಜಾತಿ/ ಪಂಗಡಗಳ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶಗಳು ಬಂದರೂ ಅದರ ಕುರಿತು ಬಿಜೆಪಿಯವರಾಗಲಿ, ಜೆಡಿಎಸ್‌ನವರಾಗಲಿ ತುಟಿ ಪಿಟಕ್ಕೆನ್ನದೆ ಕೂತಿದ್ದರು. ಈಗ ಈ ಸಮುದಾಯಗಳ ಬಗ್ಗೆ ಬಹಳ ದೊಡ್ಡ ಭಾಷಣ ಮಾಡುತ್ತಾರೆ.

18. ಬಿಜೆಪಿಯವರಿಗೆ ಪ.ಜಾತಿ/ಪ.ಪಂಗಡಗಳ ಕಾಳಜಿ ಇದ್ದರೆ ಪಿಟಿಸಿಎಲ್ ಕಾಯ್ದೆಯನ್ನು ಯಾಕೆ ತಿದ್ದುಪಡಿ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಕೂಡಲೆ ಇದನ್ನು ತಿದ್ದುಪಡಿ ಮಾಡಿದೆವು. ಪಿಟಿಸಿಎಲ್ ಜಮೀನುಗಳಿಗೂ ಲಿಮಿಟೇಶನ್ ಕಾಯ್ದೆ ಅನ್ವಯವಾಗುತ್ತದೆ ಎಂಬ ಸುಪ್ರೀಂಕೋರ್ಟಿನ ಆದೇಶಕ್ಕೆ ಪರ್ಯಾಯವಾಗಿ ಕಾಯ್ದೆಯಲ್ಲಿದ್ದ ಸಣ್ಣ ಲೋಪವನ್ನು ತಿದ್ದುಪಡಿ ಮಾಡಿದೆವು.

19. ನನ್ನ ಪತ್ನಿಗೆ ರಿಜಿಸ್ಟರ್ಡ್ ದಾನಪತ್ರದ ಮೂಲಕ 20-10-2010 ರಲ್ಲಿ ಕೆಸರೆ ಗ್ರಾಮದ ಸ. ನಂ. 464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಶ್ರೀ.ಬಿ.ಎಂ ಮಲ್ಲಿಕಾರ್ಜುನಸ್ವಾಮಿರವರು ನನ್ನ ಪತ್ನಿಯಾದ  ಶ್ರೀಮತಿ ಬಿ. ಎಂ. ಪಾರ್ವತಿರವರಿಗೆ ದಾನಪತ್ರದ ಮೂಲಕ ಮೈಸೂರು ಉತ್ತರ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಣಿಯಾಗಿರುತ್ತದೆ. ಇಲ್ಲಿಂದ ಆಚೆಗೆ  ಈ  3.16 ಎಕರೆ  ಭೂಮಿಯ ಮೇಲೆ  ನನ್ನ ಪತ್ನಿಗೆ ಅಧಿಕಾರ ಬಂದಿದೆ.  ಏನಿದ್ದರೂ ಇಲ್ಲಿಂದ ಆಚೆಗಿನ ವಿವರಗಳನ್ನು ಮಾತ್ರ ನಾವು ಮಾತನಾಡಬೇಕು. 

20. ಶ್ರೀ.ಬಿ.ಎಂ ಮಲ್ಲಿಕಾರ್ಜುನಸ್ವಾಮಿ ನನ್ನ ಭಾವಮೈದುನ. ಅವರು ಶ್ರೀಯುತ ದೇವರಾಜು  ಎನ್ನುವವರಿಂದ ದಿನಾಂಕ 25.08.2004 ರಂದು ಕ್ರಯಕ್ಕೆ ಪಡೆದಿರುತ್ತಾರೆ. ಅವರು ಕ್ರಯಕ್ಕೆ ಪಡೆದ ನಂತರವೆ ನನ್ನ ಪತ್ನಿಗೆ ದಾನ ಪತ್ರ ನೀಡಿರುತ್ತಾರೆ. ಇದರಲ್ಲಿ ಏನಾದರೂ ತಪ್ಪಾಗಿದೆಯೆ?

21. ನನ್ನ ಪತ್ನಿಗೆ ದಾನ ಬಂದಾದ ಮೇಲೆ ನಾನು ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದೇನೆ. [2013ರ ಚುನಾವಣೆಯ ಅಫಿಡವಿಟ್‌ಗಳಲ್ಲಿ ನಮೂದಿಸಿಲ್ಲ ಎಂದು ಕೇಳುತ್ತಾರೆ. ಕಣ್ತಪ್ಪಿನಿಂದ ನಮೂದಿಸಿಲ್ಲ. ಆದರೆ ಸಕ್ಷಮ ಪ್ರಾಧಿಕಾರವಾದ ಲೋಕಾಯುಕ್ತಕ್ಕೆ ಆಸ್ತಿ ಮತ್ತು ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸಿದ್ದೇನೆ. ಆದರೆ ಆ ನಂತರದ ಎಲ್ಲ ಚುನಾವಣೆಗಳಲ್ಲೂ ನಮೂದಿಸಿದ್ದೇನೆ. ನಾನು ಮೋದಿಯವರಂತಲ್ಲ. ಹೆಂಡತಿಯ ಬಗೆಗಿನ ಮಾಹಿತಿಯನ್ನೆ ಅವರು ಅಫಿಡವಿಟ್‌ಗಳಲ್ಲಿ ನಮೂದಿಸಿಲ್ಲ. ಗೊತ್ತಿಲ್ಲ ಎಂದು ಬರೆದಿದ್ದಾರೆ.]

22. ಸಾಮಾನ್ಯವಾಗಿ ನೀವುಗಳು ಮಾಧ್ಯಮದ ಮುಂದೆ ಹೇಳುತ್ತಾ ಬಂದ ಮತ್ತು ಮಾಧ್ಯಮಗಳು ತಪ್ಪು ತಪ್ಪಾಗಿ ತಮ್ಮ ಮೂಗಿನ ನೇರಕ್ಕೆ ಹೇಳುತ್ತಾ ಬಂದ ವಿಚಾರಗಳಲ್ಲಿ ಏನಾದರೂ ಸತ್ಯ ಇದೆಯೆ? ಒಂದೂ ಸತ್ಯವಿಲ್ಲ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದಲೆ ಹೀಗೆಲ್ಲ ಬಿಹೇವ್ ಮಾಡಲಾಗುತ್ತಿದೆ. ಅಶೋಕ್ ಅವರು ಕಂದಾಯ ಮಂತ್ರಿಯಾಗಿದ್ದವರು, ಇಲ್ಲಿ ಅನೇಕ ಜನರಿಗೆ ಕಂದಾಯ ದಾಖಲೆಗಳ ಬಗ್ಗೆ ನನಗಿಂತ ಹೆಚ್ಚು ತಿಳುವಳಿಕೆ ಇದೆ. ಯಾಕೆಂದರೆ ಅನೇಕರು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಕೊಂಡವರಿದ್ದಾರೆ.

23. ನಾನು ಸಮಾಜವಾದದ ಹಿನ್ನೆಲೆಯಿಂದ ಬಂದವನು. ನನಗೆ ತಿಳುವಳಿಕೆ ನೀಡಿದವರು ಜನರು. ಹಾಗೂ ನಂಜುಂಡಸ್ವಾಮಿ, ರಾಮದಾಸ್ ಮುಂತಾದವರು. ನನಗೆ ಜನರೆ ವಿಶ್ವವಿದ್ಯಾಲಯ. ಈ  ಜನತಾ ವಿಶ್ವವಿದ್ಯಾಲಯ ಮತ್ತು ನನಗೆ ತಿಳುವಳಿಕೆ ನೀಡಿದವರಿಂದ ನಾನು ಕಲಿತದ್ದು ಮನೆಯಲ್ಲಿ ನಾವು ಹೆಚ್ಚು ಡೆಮೊಕ್ರಾಟಿಕ್ ಆಗಿರಬೇಕು. ಅನೇಕರು ಕೇಳುತ್ತಾರೆ, ನಿಮ್ಮ ಪತ್ನಿಗೆ ಅವರ ಅಣ್ಣ ನೀಡಿದ ದಾನವನ್ನು ತಿರಸ್ಕರಿಸಬೇಕಿತ್ತು. ಅಕ್ಸೆಪ್ಟ್ ಮಾಡಬಾರದಿತ್ತು ಎಂಬುದು ಕೆಲವರ ವಾದ. ನಾವೆಷ್ಟೆ ಪ್ರಗತಿಪರವಾಗಿ ಯೋಚನೆ ಮಾಡಿದರೂ, ಊಟ ಬಟ್ಟೆಗೆ ಯಾವ ಸಮಸ್ಯೆ ಇಲ್ಲದಿದ್ದರೂ ಸಹ ತವರುಮನೆ ಎನ್ನುವುದು ಎಂದೂ ತೀರದ ಮೋಹವಾಗಿರುತ್ತದೆ. ಪ್ರತಿ ವರ್ಷ ತವರುಮನೆಯವರು ಕೊಡುವ ಅರಿಶಿನ ಕುಂಕುಮವೆ ಹೆಣ್ಣುಮಕ್ಕಳಿಗೆ ಅತಿ ದೊಡ್ಡ ಭಾವನಾತ್ಮಕ ಸಂಗತಿಯಾಗಿರುತ್ತದೆ.  ಹಾಗಾಗಿ ತವರು ಮನೆಯವರು ಕೊಟ್ಟ ಉಡುಗೊರೆಯನ್ನು ತಿರಸ್ಕರಿಸು ಎಂದು ಜಬರ್ದಸ್ತು ಮಾಡಿ ಹೇಳುವಷ್ಟು ಅಸೂಕ್ಷ್ಮತೆ ಇರಲಿಲ್ಲ ನನಗೆ. ಅಣ್ಣ-ತಮ್ಮಂದಿರು, ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ದಾನಪತ್ರದ ಮೂಲಕ ಆಸ್ತಿ ಕೊಡುವುದು ತಪ್ಪು ಎಂದು ದೇಶದ ಯಾವ ಕಾನೂನು ಹೇಳಿದೆ? ಕಾನೂನು ಹೋಗಲಿ, ಕರ್ನಾಟಕದ ಸಂಸ್ಕೃತಿಯಾದರೂ ಇದನ್ನು ತಪ್ಪು ಎಂದು ಭಾವಿಸಿದೆಯೆ? ತಪ್ಪು ಎಂದು ನಾಡಿನ ಹೆಣ್ಣು ಮಕ್ಕಳು, ಜನರು ಹೇಳಿದರೆ ನಾನು ಒಪ್ಪುತ್ತೇನೆ. ಸಂಸ್ಕೃತಿಯ ಬಗ್ಗೆ ಬಹಳ ಮಾತನಾಡುವ ಬಿಜೆಪಿಯವರು ಮಾತ್ರ ಇದನ್ನು ತಪ್ಪು ಎನ್ನುತ್ತಾರೆ. ಇದು ದುರಂತ.

24. ಈಗ ಈ ಭೂಮಿಗಳಿಗೆ ಬೆಲೆ ಬಂದಿದೆ. ಹಿಂದೆ ಯಾವ ಬೆಲೆಯೂ ಇರಲಿಲ್ಲ. ನಾನು ಬಿಜೆಪಿಯವರು ಇದನ್ನೊಂದು ವಿವಾದ ಎಂದು ಮಾಡಿದ ಮೇಲೆ ನಾನು 25-8-2004 ರಲ್ಲಿ ದೇವರಾಜು ಎಂಬುವವರಿಂದ ಬಿ.ಎಂ ಮಲ್ಲಿಕಾರ್ಜುನ ಸ್ವಾಮಿ ಕ್ರಯಪತ್ರವನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ 5,95,000 ರೂಪಾಯಿಗಳಿಗೆ ಕ್ರಯವಾಗಿದೆ. ಅದಕ್ಕೂ ಮೊದಲು 15-02-1999 ರಲ್ಲಿ ಮೂಡಾದ ಭೂ ಸ್ವಾಧೀನಾಧಿಕಾರಿ 3,24,700 ರೂಪಾಯಿಗಳಿಗೆ ಅವಾರ್ಡು ಪಾಸು ಮಾಡಿದ್ದಾರೆ.

25. ದಾಖಲೆಗಳನ್ನು ಪರಿಶೀಲಿಸಿದ ನಂತರ ನನಗೆ ತಿಳಿದದ್ದಿಷ್ಟು. ಅವಾರ್ಡು ಪಾಸು ಮಾಡಿ ಕೋರ್ಟಿಗೆ ತುಂಬಲು ಹೋಗಿದ್ದಾರೆ. ಆದರೆ ಕೋರ್ಟಿನವರು ಈ ಅವಾರ್ಡು ಕ್ರಮಬದ್ಧವಾಗಿಲ್ಲವೆಂದು ವಾಪಸ್ಸು ಮಾಡಿದ್ದಾರೆ. ಆದರೆ ಅದರ ನಂತರ ಮೂಡಾದವರು ಯಾವ ಕ್ರಮವನ್ನೂ ವಹಿಸಲಿಲ್ಲ.

26. ಕೆಲವು ನಾಯಕರುಗಳು ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದರು ಅವರೆ ಇದನ್ನೆಲ್ಲ ಮಾಡಿಸಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. 3,24,700 ರೂಪಾಯಿಗಳ ಮೌಲ್ಯದ 3-16 ಗುಂಟೆ ಜಮೀನಿಗೆ ಉಪಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾಚಿಕೆ-ಸೂಕ್ಷ್ಮತೆ ಇರುವವರು ಯಾರೂ ಕೂಡ ಈ ರೀತಿ ವರ್ತಿಸುವುದಿಲ್ಲ.

27. ಈ ಜಮೀನನ್ನು ಕೆಸರೆ-ದೇವನೂರು ಬಡಾವಣೆ ನಿರ್ಮಿಸಲು ಭೂ ಸ್ವಾಧೀನ ಮಾಡಲು 18-9-1992 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಮತ್ತು 20-08-1997 ರಲ್ಲಿ ಅಂತಿಮ ಅಧಿಸೂಚನೆಯನ್ನು ಮಾಡಲಾಗಿದೆ.

28. ದಾಖಲೆಗಳನ್ನು ಪರಿಶೀಲಿಸಿದಾಗ, ಶ್ರೀ ಜವರಯ್ಯನ ಮಗ ಜಿ.ದೇವರಾಜು ರೋಡ್ ನಂ.3406 4 ನೇ ಮುಖ್ಯರಸ್ತೆ, ಲಷ್ಕರ್ ಮೊಹಲ್ಲಾ, ಉರ್ದು ನಗರ, ಮೈಸೂರು ರವರು ದಿನಾಂಕ:13-8-96 ರ ದಿನಾಂಕದಲ್ಲಿ ತಮ್ಮ ಭೂಮಿಗಳನ್ನು ಭೂ ಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ. ಅಂದರೆ ಅಂತಿಮ ಅಧಿಸೂಚನೆ ಆಗುವುದಕ್ಕೆ ಮೊದಲೆ [ಫೈನಲ್ ನೋಟಿಫಿಕೇಶನ್] ದೇವರಾಜು ಎನ್ನುವವರು ಅರ್ಜಿ ಕೊಟ್ಟಿದ್ದಾರೆ.

29. ಸದರಿ ಅರ್ಜಿಯಲ್ಲಿ ಹೀಗೆ ಬರೆಯಲಾಗಿದೆ, “ನನಗೆ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 462 ರಲ್ಲಿ 0.37 ಎಕರೆ ಮತ್ತು ಸ. ನಂ 464ರಲ್ಲಿ 3.16 ಎಕರೆ  ಖುಷ್ಕಿ  4.13 ಎಕರೆ ಜಮೀನು ನನ್ನ ತಂದೆಯವರಿಂದ ಪಿತ್ರಾರ್ಜಿತವಾಗಿ ಬಂದಿದ್ದು ಹಾಲಿ ನನ್ನ ಸ್ವಾಧೀನಾನುಭವದಲ್ಲಿದ್ದು, ನಾನು ಸದರೀ ಜಮೀನನ್ನು ನಂಬಿ ಕೃಷಿ ಮಾಡುತ್ತಿದ್ದೇನೆ.………….. ಸದರಿ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಟ್ಟು  ನಾವುಗಳು ಕೃಷಿ ಜೀವನವನ್ನು  ಮುಂದುವರೆಸಲು ಅವಕಾಶ ಮಾಡಿಕೊಡಿ ಎಂದು  ಬರೆದಿದ್ದಾರೆ.

30. ಆ ಅರ್ಜಿಯ ಮೇಲೆ ಅಂದಿನ ಮಾನ್ಯ ನಗರಾಭಿವೃದ್ಧಿ ಸಚಿವರಾಗಿದ್ದ ಶ್ರೀಯುತ ಬಿ.ಎನ್.ಬಚ್ಚೇಗೌಡ ಅವರು ದಿನಾಂಕ 14-8-96 ರಂದು ‘ಮನವಿಯನ್ನು ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸುವುದು’ಎಂದು ಕಾರ್ಯದರ್ಶಿ-2 ರವರಿಗೆ  ಬರೆದಿದ್ದಾರೆ.

31. ಸಚಿವರ ಟಿಪ್ಪಣಿಯನ್ನು ಆಧರಿಸಿ ದಿನಾಂಕ: 03-09-1996 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದಾರೆ.

32. ದಿನಾಂಕ: 30-08-1997 ರ ದಿನಾಂಕದಲ್ಲಿ ಮುಡಾ ಆಯುಕ್ತರು  ಭೂ ಸ್ವಾಧೀನದಿಂದ  ಕೈ ಬಿಡುವ ಕುರಿತು ಪಾಸಿಟಿವ್ ಮಾಹಿತಿಯೊಂದಿಗೆ ಸರ್ಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ.

33. ಸರ್ಕಾರದಿಂದ ಪತ್ರ ಬರೆದು ಸರಿ ಸುಮಾರು ಒಂದು ವರ್ಷದ ನಂತರ ಮುಡಾ ಆಯುಕ್ತರು ಮಾರುತ್ತರ ಪತ್ರ ಕಳಿಸಿದ್ದಾರೆ. ವಿರೋಧ ಪಕ್ಷದವರು ಮಾತೆತ್ತಿದರೆ ಸಿದ್ದರಾಮಯ್ಯನವರೆ ಉಪಮುಖ್ಯಮಂತ್ರಿಗಳಿದ್ದರು, ಅವರೆ ಇನ್‌ಫ್ಲುಯೆನ್ಸ್ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿ ಇನ್‌ಫ್ಲುಯೆನ್ಸ್ ಮಾಡಿದ್ದರೆ ಮುಡಾದಿಂದ ಒಂದು ವರದಿಯನ್ನು ಸರ್ಕಾರಕ್ಕೆ ಕಳಿಸಲು 1 ವರ್ಷ ಬೇಕಾಗುತ್ತಿತ್ತಾ?

34.  ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ. ವಿ ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿ.ಗೋವಿಂದರಾಜು ಸೆಕ್ರೆಟರಿ-2, ನಗರಾಭಿವೃದ್ಧಿ ಇಲಾಖೆ ಮತ್ತು ಕೆ. ಎಂ. ತಿಮ್ಮಯ್ಯ, ಕಾನೂನು ಇಲಾಖೆಯ ಅಡಿಶನಲ್ ಸೆಕ್ರೆಟರಿ ಒಳಗೊಂಡ ತ್ರಿಸದಸ್ಯ ಸಮಿತಿಯು  ಪರಿಶೀಲಿಸಿ ಡಿ ನೋಟಿಫೈ ಮಾಡಿದೆ.

35. ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು- ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುವಂತೆ ಕಾಣುತ್ತಿದೆ.  ಈ ಸಮಿತಿಯು “ The Committee noted that the Mysore UDA in its meeting held on 24-7-97  has resolved to recommend to government to drop the acquisition proceedings in respect of land mentioned above since this land is situated at one end of the scheme. Further it noted that in this land, the Karnataka urban water supply and drainage Board has not prepared any major plan for their scheme. No plans have been prepared for Melapura water supply scheme also.

The final notification was issued during April — and August 1997 for acquisition of the land by MUDA for its scheme. No award has been passed yet. In view of the fact that if the land is denotified the scheme will not get affected and no award has been passed and also the KUWS and dB has not prepared any major plan in the land, the committee accepted the resolution of the MUDA and recommended for denotification”.. ಎಂದು ದಾಖಲಿಸಿದ್ದಾರೆ.  ಈ ಪ್ಯಾರಾದಲ್ಲಿ ಅರ್ಥವಾಗುವ ಅಂಶಗಳೆAದರೆ ಈ ಭೂಮಿ ಬಡಾವಣೆಯ ಕೊನೆಯಲ್ಲಿದೆ ಎಂಬುದು  ಕಂಡು ಬರುತ್ತದೆ. ಇಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯವರು  ಈ ಜಮೀನನಲ್ಲಿ ಯಾವುದೇ ಪ್ಲಾನ್ ಸಿದ್ಧಪಡಿಸಿಲ್ಲ. ಈ ಜಮೀನುಗಳನ್ನು ಡಿ ನೋಟಿಫೈ  ಮಾಡುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಕುರಿತು ಮುಡಾದಲ್ಲೂ ನಿರ್ಣಯವಾಗಿದೆ ಎಂದು ಹೇಳಿ ಡಿನೋಟಿಫೈ ಮಾಡಲು ತೀರ್ಮಾನಿಸಿದ್ದಾರೆ. ಇದರ ಅಧಾರದ ಮೇಲೆ ಈ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಕಂಡುಬರುತ್ತದೆ.

36. ಇದಿಷ್ಟು ಡಿ-ನೋಟಿಫಿಕೇಶನ್ ಕತೆ. ವಿರೋಧ ಪಕ್ಷದವರು ಇದನ್ನೂ ರಾಜಕೀಯಕ್ಕೆ ಬಳಸುತ್ತಾರೆ.

37.  ಇಲ್ಲಿ ಕಾಮನ್ ಸೆನ್ಸಿನ ಪ್ರಶ್ನೆಯೊಂದಿದೆ. ದೇವರಾಜು ಎನ್ನುವವರು 13-8-1996 ರಲ್ಲಿ ಅರ್ಜಿ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆಯವರು 3-9-1996 ರಂದು  ಮೂಡಾ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳುತ್ತಾರೆ.  ಅದಾಗಿ 30-8-1997 ಕ್ಕೆ ಮೂಡಾದವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕೇವಲ ವರದಿ ನೀಡುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ವಿ.ಬಾಲಸುಬ್ರಮಣ್ಯನ್ ಎಂಬ ಟಫ್ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ  ಈ ಜಮೀನುಗಳೂ ಸೇರಿದಂತೆ ರಾಜ್ಯದ ಸುಮಾರು 19 ಕಡೆ ಭೂ ಸ್ವಾಧೀನದಿಂದ ಕೈ ಬಿಡಲು ತೀರ್ಮಾನಿಸಿದ್ದಾರೆ. ಅಂತಿಮವಾಗಿ 18-5-1998 ರಂದು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ.  ಈಗ ನಿಮ್ಮನ್ನು ಕೇಳಬಯಸುತ್ತೇನೆ.  ಮುಖ್ಯಮಂತ್ರಿಯೊ, ಉಪಮುಖ್ಯಮಂತ್ರಿಯೊ ಅಥವಾ ಮಂತ್ರಿಯೊ, ಎಮ್ ಎಲ್ ಎಯೊ ಇದ್ದರೆ  ಈ ಪ್ರಕ್ರಿಯೆ ಮುಗಿಸಲು ಎರಡು ವರ್ಷ ತೆಗೆದುಕೊಳ್ಳುತ್ತಿದ್ದರೆ? 

38. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.

ನನ್ನ ಪತ್ನಿಗೆ ಪರ್ಯಾಯ ನಿವೇಶನ ಹೇಗೆ ಕೊಟ್ಟರು?  ಬೇರೆ ಯರ‍್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದಾರೆ ? ಅದನ್ನೆಲ್ಲ  ದಾಖಲೆ ಆಧರಿಸಿ ಹೇಳುತ್ತೇನೆ.

ಅವುಗಳಲ್ಲಿ ಕೆಲವು ಉದಾಹರಣೆಗಳಿವು.

39. ದಟ್ಟಗಳ್ಳಿ ಗ್ರಾಮದ ಸ. ನಂ 130/3 ರಲ್ಲಿ 397.61 ಚ. ಮೀಟರ್ [ 4280 ಚದರ ಅಡಿ] ಗಳನ್ನು  ವಶಪಡಿಸಿಕೊಂಡಿತ್ತು. ಅದಕ್ಕೆ ಬದಲಿಯಾಗಿ ಅಷ್ಟೆ ಪ್ರಮಾಣದ ಭೂಮಿಯನ್ನುಮುಡಾ ಪರಿಹಾರವಾಗಿ ಕೊಟ್ಟಿದೆ.

40. ತಾಂತ್ರಿಕ ಶಿಕ್ಷಣ ಕಾಲೇಜು ನಿರ್ಮಾಣಕ್ಕೆ ದೇವನೂರು ಗ್ರಾಮದ ಸ.ನಂ. 29/2 ರಲ್ಲಿ     0-31 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳದೆ ಉಪಯೋಗಿಸಿಕೊಳ್ಳಲಾಗಿತ್ತು. ದಿನಾಂಕ: 02.03.2020ರಂದು ಅದಕ್ಕೆ ಬದಲಿಯಾಗಿ ಅಷ್ಟೆ ಪ್ರಮಾಣದ ಭೂಮಿಯನ್ನು ಮುಡಾ ಪರಿಹಾರವಾಗಿ ಕೊಟ್ಟಿದೆ.

41. ನಾಡನಹಳ್ಳಿ ಗ್ರಾಮದ ಸ.ನಂ. 9/2 ರಲ್ಲಿ 0-11 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳದೆ ವಸಂತನಗರ ಬಡಾವಣೆ ನಿರ್ಮಾಣಕ್ಕಾಗಿ ಉಪಯೋಗಿಸಿಕೊಳ್ಳಲಾಗಿತ್ತು. ದಿನಾಂಕ: 06.03.2019ರಂದು ಸದರಿ ಜಮೀನಿಗೆ ಬದಲಾಗಿ ಆಲನಹಳ್ಳಿ ಗ್ರಾಮದ ಸ.ನಂ.75/2 ರಲ್ಲಿ 0-09 ಗುಂಟೆ ಜಮೀನನ್ನು ಭೂಮಾಲೀಕರಿಗೆ ಮುಡಾ ಪರಿಹಾರವಾಗಿ ಕೊಟ್ಟಿದೆ.

42. ಆಲನಹಳ್ಳಿ ಗ್ರಾಮದ ಸ.ನಂ. 74/1 ರಲ್ಲಿ 1-15 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳದೆ ಹೊರವರ್ತುಲ ರಸ್ತೆ ನಿರ್ಮಾಣಕ್ಕಾಗಿ ಉಪಯೋಗಿಸಿಕೊಳ್ಳಲಾಗಿತ್ತು. ದಿನಾಂಕ: 27.08.2015ರಂದು ಅದಕ್ಕೆ ಬದಲಿಯಾಗಿ ಅಷ್ಟೆ ಪ್ರಮಾಣದ ಭೂಮಿಯನ್ನು ಮುಡಾ ಪರಿಹಾರವಾಗಿ ಕೊಟ್ಟಿದೆ.

43.          ಹಿನಕಲ್ ಗ್ರಾಮದ ಸ.ನಂ.73/2 ರಲ್ಲಿ 1-00 ಎಕರೆ ಜಮೀನನ್ನು ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಉಪಯೋಗಿಸಿಕೊಳ್ಳಲಾಗಿತ್ತು. ದಿನಾಂಕ: 19.09.2008ರಂದು ಅದಕ್ಕೆ ಬದಲಿಯಾಗಿ ಅಷ್ಟೆ ಪ್ರಮಾಣದ ಭೂಮಿಯನ್ನು ಮುಡಾ ಪರಿಹಾರವಾಗಿ ಕೊಟ್ಟಿದೆ.

44. ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ ದಿನಾಂಕ: 15-7-2005 ರಲ್ಲಿ ಭೂಪರಿವರ್ತನೆಯಾಗಿವೆ. ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ.

45. ಇದಾದ ಮೇಲೆ ದಿನಾಂಕ: 23-6-2014 ರಲ್ಲಿ ಮತ್ತು 25-10-2021 ರಲ್ಲಿ  ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ.

46. ನನ್ನ ಪತ್ನಿ ತನ್ನ ನಿವೇಶನ/ ಜಾಗ ಕೊಡಿ ಎಂದು ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ. ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು  ಕೊಟ್ಟಿದ್ದಾರೆ.

47. ಭೂ ಸ್ವಾಧೀನ ಪಡಿಸದೆ  ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ. 50:50 ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು MUDA ದವರು 14-9-2020 ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು  ಸರ್ಕಾರ ರದ್ದು ಮಾಡಿದೆ.

48. ಅಷ್ಟಕ್ಕೆ ಸುಮ್ಮನಿರದೆ 7-12-2020 ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದ್ದಾರೆ.  ಆ ಸಭೆಯಲ್ಲಿ  ಜಿ. ಟಿ. ದೇವೇಗೌಡ ಅವರು “ ಶೇ. 50:50ರ ಅನುಪಾತದಲ್ಲಿ ಒಪ್ಪಿಕೊಳ್ಳುವ ರೈತರಿಗೆ ಅದೇ ರೀತಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಶೇ.50;50 ರ ಅನುಪಾತಕ್ಕೆ ಒಪ್ಪಿಕೊಳ್ಳದ ಹಾಗೂ ಸಹಮತಿ ಸೂಚಿಸದ ಪ್ರಕರಣಗಳಲ್ಲಿ  ಪ್ರತ್ಯೇಕ ಸಭೆ ಕರೆಯಲು ಸೂಚಿಸಿದರು” ಎಂದು ದಾಖಲಾಗಿದೆ.

ಮರಿತಿಬ್ಬೇಗೌಡ ಅವರು, “ಶೇ.50:50 ಅನುಪಾತದಲ್ಲಿ ರೈತರನ್ನು ಬಲವಂತಪಡಿಸಲು ಬರುವುದಿಲ್ಲವೆಂದು ಈ ಕಾರಣ ರೈತರ ಕೋರಿಕೆಯನ್ನು ಪರಿಗಣಿಸಬೇಕು, ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಸ್ವತ್ತುಗಳಿಗೆ ಅಷ್ಟೇ ವಿಸ್ತೀರ್ಣದ ಸ್ವತ್ತುಗಳನ್ನು ನೀಡುವುದು ಸೂಕ್ತವೆಂದು” ಹೇಳಿದ್ದಾರೆ. ಸಭೆಯಲ್ಲಿ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್ ಮುಂತಾದವರು ಮಾತನಾಡಿದ್ದಾರೆ.

ಅಂತಿಮವಾಗಿ ಈ ರೀತಿ ನಿರ್ಣಯಿಸಿದ್ದಾರೆ, “ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಧೀನಪಡಿಸದೇ ಉಪಯೋಗಿಸಿಕೊಂಡಿರುವAತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು” ನಿರ್ಣಯಿಸಲಾಗಿದೆ.

49. ಇದೆಲ್ಲ ಆದ ಮೇಲೆ ನನ್ನ ಪತ್ನಿ ದಿನಾಂಕ; 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ.  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು ದಿನಾಂಕ 30-12-2021 ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ.

50. ವಿರೋಧ ಪಕ್ಷದವರು ಶ್ರೀಮತಿ ಪಾರ್ವತಿಯವರಿಗೆ ಮಾತ್ರ ಈ ರೀತಿ ಶೇ.50;50 ಅನುಪಾತದಲ್ಲಿ ನಿವೇಶನಗಳನ್ನು ನೀಡಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ.  ಇದುವರೆಗಿನ ಲೆಕ್ಕದ ಪ್ರಕಾರ ಅಂದಾಜು 1300 ಕ್ಕೂ ಹೆಚ್ಚು ನಿವೇಶನಗಳವರೆಗೆ ಹಂಚಿಕೆ ಮಾಡಿದ್ದಾರೆ. ಅಂದಾಜು ಏಕೆಂದರೆ ಮುಡಾದಲ್ಲಿ ದಾಖಲೆಗಳನ್ನೆ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕೇಳಿದ್ದೇನೆ.

51. 3-5-2020 ರಿಂದ ಈಚೆಗೆ ಸುಮಾರು 909 ನಿವೇಶನಗಳನ್ನು 50;50 ಆಧಾರದಲ್ಲಿ ಕೊಟ್ಟಿದ್ದಾರೆ. ಸುಮಾರು 310 ನಿವೇಶನಗಳನ್ನು ಇನ್ಸೆಂಟೀವ್ ರೂಪದಲ್ಲಿ ಕೊಟ್ಟಿದ್ದಾರೆ. 109 ನಿವೇಶನಗಳನ್ನು ಆಲ್ಟರ್ ನೇಟಿವ್ ನಿವೇಶನ/ ಜಾಗದ ರೂಪದಲ್ಲಿ ಕೊಟ್ಟಿದ್ದಾರೆ.

52. ಮುಡಾದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಣಯ ಪಾಸು ಮಾಡಿರುವ ಬಹುತೇಕರು ವಿರೋಧ ಪಕ್ಷದಲ್ಲೆ ಇದ್ದಾರೆ. ಅವರೇ ಮಾತನಾಡಿ ನಿರ್ಣಯ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಇದರಲ್ಲಿ ನನ್ನನ್ನು ಯಾಕೆ ಮಧ್ಯದಲ್ಲಿ ಎಳೆದು ತರಲಾಗುತ್ತಿದೆ? ನಿವೇಶನ ಕೊಟ್ಟಿದ್ದು 2021 ರಲ್ಲಿ.  ಆದರೆ ಬಿಜೆಪಿಯವರು ಬಾವಿಗೆ ಇಳಿದು  ನಿವೇಶನ ಕೊಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗುತ್ತಾರೆ. ನಿವೇಶನ ಕೊಟ್ಟದ್ದು ಬಿಜೆಪಿ ಸರ್ಕಾರವೆ ಆಗ ಯಡಿಯೂರಪ್ಪ ಬೊಮ್ಮಾಯಿಯವರೆ ಸಿಎಂ ಆಗಿದ್ದರು.

53. ದಿನ ಬೆಳಗಾದರೆ ಮುಡಾ ಕಛೇರಿ ಮೇಲೆ ಕಣ್ಣಿಟ್ಟಿರುವ ಅನೇಕರು ಈ ಸದನದಲ್ಲೆ ಇದ್ದಾರೆ.  ಹತ್ತಾರು, ಕೆಲವೊಮ್ಮೆ ನೂರಾರು ನಿವೇಶನಗಳನ್ನು ಪಡೆದಿರುವವರು ಕೂಡ ಇದ್ದಾರೆ. ಯರ‍್ಯಾರು ಎಷ್ಟೆಷ್ಟು ನಿವೇಶನಗಳನ್ನು ಬದಲಿಯಾಗಿ ಪಡೆದಿದ್ದಾರೆ? ಯಾರು ಲೇಔಟ್ ಮಾಡಿ ಪಾರ್ಕಿಗೆಂದು ಬಿಟ್ಟು ಅದನ್ನೂ ಮಾರಿದವರ ವಿವರಗಳೂ ನನ್ನ ಮುಂದೆ ಬಂದಿವೆ.  ಈಗ ಅದೆಲ್ಲವನ್ನು ಆಯೋಗವು ತನಿಖೆ ಮಾಡಲಿದೆ.

54. ಮುಖ್ಯಮಂತ್ರಿಗಳದ್ದೇನೊ ತಪ್ಪಿದೆ ಅದಕ್ಕೆ ಇದನ್ನೆಲ್ಲ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಬಿಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ನನ್ನದು ನಯಾಪೈಸೆಯಷ್ಟು ತಪ್ಪಿಲ್ಲ.

55.  ಮೊನ್ನೆ ದಿನ ನಿಂಗ ಬಿನ್ ಜವರ ಅವರ ವಾರಸುದಾರರನ್ನು ಹುಡುಕಿ ಕಿತಾಪತಿ ಮಾಡಲು ಪ್ರಯತ್ನಿಸಿದ್ದಾರೆ. ಮೀಡಿಯಾಗಳಲ್ಲಿ ಸುದ್ದಿಯಾಗುವಂತೆ ನೋಡಿಕೊಂಡಿದ್ದಾರೆ. ನನ್ನ ಪತ್ನಿಗೆ 2010 ರಲ್ಲಿ ದಾನವಾಗಿ ಬಂದ ಕಾರಣ ಹಿಂದಿನದ್ದರ ಬಗ್ಗೆ ಹೆಚ್ಚು ಗಮನಿಸರಲಿಲ್ಲ. ಆದರೆ ವಿರೋಧ ಪಕ್ಷದವರು ನೀಚ ಮತ್ತು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದರಿಂದ ಸತ್ಯ ಏನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ.

56. ಅದರಲ್ಲಿ ನನಗೆ ತಿಳಿದು ಬಂದ ಸಂಗತಿಯೇನೆಂದರೆ, 10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು.  ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ  ಮಂಜುನಾಥ್‌ಸ್ವಾಮಿ  ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ.  3 ನೆಯವರು ದೇವರಾಜು ಎನ್ನುವವರು. [ಈ ದೇವರಾಜು ಎನ್ನುವವರೆ  ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು  ಮಾರಾಟ ಮಾಡಿರುವುದು]. ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.

57. ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು  ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹೆಳಿಕೆಯಲ್ಲಿ ಹೀಗೆ ಬರೆಯಲಾಗಿದೆ. “ ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ರೂಬು ರೂಬು. ಡಿಟೊ ಮೈಸೂರು ಸಿಟಿ ಗಾಂಧಿನಗರ 8 ನೇ ಕ್ರಾಸ್ , ಮನೆ ನಂ 4038 ರ ನಿವಾಸಿಗಳಾದ  ಲೇಟ್ ನಿಂಗಯ್ಯ ಬಿನ್ ಜವರ ರವರ ಮೊದಲನೆ ಮಗ ಮಲ್ಲಯ್ಯ ಮತ್ತು ಲೇಟ್ ಮೈಲಾರಯ್ಯನವರ ಹೆಂಡತಿ ಪುಟ್ಟಗೌರಮ್ಮ ಹಾಗೂ ಮಗ  ಎಂ. ಮಂಜುನಾಥಸ್ವಾಮಿ ಆದ ನಾವುಗಳು ಹೇಳಿ ಬರೆಸಿದ ಹೇಳಿಕೆ.

58. ಅದಾಗಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 464 ರ 3-16  ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ರವರ ಮೂರನೆ ಮಗ ಜೆ.ದೇವರಾಜು ನಮೂನೆ 19 ರ ಮೂಲಕ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ . ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು ಅವರು ಫವತಿಯಾಗಿ ನಮ್ಮಗಳಿಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲವೆಂದು ಹೇಳಿ ಬರೆಯಿಸಿದ ಹೇಳಿಕೆ. ಓದಿಸಿ ಕೇಳಿ ಸರಿ ಎಂದು ಒಪ್ಪಿ ರುಜು ಮಾಡಿರುತ್ತೇವೆ. ಮಲ್ಲಯ್ಯ, ಪುಟ್ಟಗೌರಮ್ಮ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುತ್ತಾರೆ. ಎಂ.ಮಂಜುನಾಥಸ್ವಾಮಿ ಇಂಗ್ಲಿಷಿನಲ್ಲಿ ಸಹಿ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ.

59. ಮುಡಾ ವು ನನ್ನ ಪತ್ನಿಗೆ 3-16 ಎಕರೆಗೆ ಬದಲಿಯಾಗಿ ಶೇ.50 ರಷ್ಟು ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು  ನೀಡಿದೆ. 3-16 ಗುಂಟೆ ಜಮೀನುಗಳೆಂದರೆ 1,48,104 ಚದರ ಅಡಿಗಳನ್ನು ಮುಡಾ ಬಳಸಿಕೊಂಡಿದೆ. ಅದರಲ್ಲಿ 38,284 ಚದರ ಅಡಿಗಳನ್ನು ಭೂ ಪರಿಹಾರವಾಗಿ ಪರ್ಯಾಯ ನಿವೇಶನಗಳನ್ನು ನೀಡಿದೆ.

60. ಮುಡಾ ಭೂಸ್ವಾಧೀನಪಡಿಸಿಕೊಳ್ಳದೆ ಉಪಯೋಗಿಸಿಕೊಂಡಿರುವ ಹಲವು ಪ್ರಕರಣಗಳಲ್ಲಿ  ವಶಪಡಿಸಿಕೊಂಡಷ್ಟೆ ಭೂಮಿಯನ್ನು ಬದಲಿಯಾಗಿ ನೀಡಿದೆ.

  • ಕುಮಾರಸ್ವಾಮಿಯವರ ಭೂ ಹಗರಣಗಳು,  ಅವರ ಕುಟುಂಬದ ಆಸ್ತಿಪಾಸ್ತಿಗಳ ಬಗ್ಗೆ ಮಾತನಾಡಲಾಗುವುದಿಲ್ಲ. ನನಗೆ ಏನು ಇಲ್ಲಿರುವ ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಅವುಗಳ ಸಂಖ್ಯೆ ಎಷ್ಟೊ, ಆಳವೆಷ್ಟೊ, ಉದ್ದವೆಷ್ಟೊ ತಿಳಿಯದು.
  • ಕುಮಾರಸ್ವಾಮಿಯವರು ಇತ್ತೀಚೆಗೆ ನನ್ನನ್ನು ಗುರಿಮಾಡಿಕೊಂಡಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯನವರದು ಕಳಂಕರಹಿತವಾದ ವ್ಯಕ್ತಿತ್ವ ಎಂಬ ಮಾತು ಅವರ ನಿದ್ದೆಗೆಡಿಸುತ್ತಿದೆ. ಹಾಗಾಗಿ ಅವರು ಇಲ್ಲಸಲ್ಲದ ಕಿತಾಪತಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಹಿಟ್ಲರ್‌ವಾದಿಗಳ ಜೊತೆಗೆ ಫ್ಯೂಡಲ್‌ವಾದಿಗಳು ಸೇರಿಕೊಂಡಿದ್ದಾರೆ. ಇಬ್ಬರೂ ಸೇರಿ ಟಾರ್ಗೆಟ್ ಮಾಡಿಕೊಂಡು ಓಡಾಡುತ್ತಿದ್ದಾರೆ.  ಮಾಡಲಿ ನನ್ನ ಜೀವಿತಾವಧಿಯಲ್ಲಿ ಇಂಥ ಹಲವಾರು ಪಿತೂರಿಗಳನ್ನು ಎದುರಿಸಿದ್ದೇನೆ.

ಅಂದಿನ ಎಸಿಯಾಗಿದ್ದ  ಶ್ರೀ. ಸಿದ್ಧಪ್ಪನವರು ಈ ರೀತಿ ಬರೆದಿದ್ದಾರೆ.

• ಬೆಂಗಳೂರಿಗೆ ಹೊಂದಿಕೊಂಡಂತೆ ಬಿಡದಿಯ ಬಳಿ ಇರುವ ಕೇತಗಾನಹಳ್ಳಿಯ ಸರ್ವೆನಂಬರ್ 7,8,9,10,16 ಮತ್ತು 17ರಲ್ಲಿ  ಒಟ್ಟು 110.32 ಎಕರೆ ಸರ್ಕಾರಿ ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಶ್ರೀ. ಎಚ್. ಡಿ ಕುಮಾರಸ್ವಾಮಿ ಮತ್ತವರ ಕುಟುಂಬದವರು  ಹಾಗೂ ಮದ್ದೂರು ಶಾಸಕರಾದ  ಶ್ರೀ. ಡಿ ಸಿ ತಮ್ಮಣ್ಣ ಮತ್ತವರ ಕುಟುಂಬದವರು ಈ ಕೆಳಕಂಡ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಭೂ ಕಬಳಿಸಿರುವುದಾಗಿ ಆರೋಪಿಸಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ  200 ಎಕರೆ ಸರ್ಕಾರಿ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿ ದಿನಾಂಕ; 25-08-2014 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುತ್ತಾರೆ. ಅದಕ್ಕೂ ಮೊದಲು ಸಿದ್ದಪ್ಪ ಅವರು 2011 ರಲ್ಲಿ ಜಿ. ಮಾದೇಗೌಡ ಅವರು ಲೋಕಾಯುಕ್ತದಲ್ಲಿ ದಾಖಲಿಸಿದ್ದ ದೂರು ಪ್ರಕರಣದಲ್ಲಿ ವಿಚಾರಣೆ ನಡೆಸಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿರುತ್ತಾರೆ.  ಅವರ ಪ್ರಕಾರ

• ಈ 200 ಭೂಮಿಗಳಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು,

• ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79 ಎ ಮತ್ತು ಬಿ ಹಾಗೂ 66

• ಪಿಟಿಸಿಎಲ್ ಕಾಯ್ದೆ

• ಮುದ್ರಾಂಕ ಪಾವತಿಸದೆ ಮೋಸ ಮಾಡಿರುವುದು

• ಸರ್ಕಾರಿ ಜಮೀನುಗಳನ್ನು ಕಬಳಿಸಿರುವುದು ಕಂಡುಬAದಿರುತ್ತದೆ ಎಂದು  ವರದಿ ಮಾಡಿದ್ದಾರೆ.

• ಕಂದಾಯ ಇಲಾಖೆಯ ಮಾಹಿತಿಗಳ ಪ್ರಕಾರ ಕೇತಗಾನಹಳ್ಳಿಯ ಸ. ನಂ60 ಮತ್ತು 62 ರಲ್ಲಿ ವ್ಯಾಪಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ದ್ರೋಹ ಮಾಡಿರುವುದು ಕಂಡುಬರುತ್ತಿದೆ.

ಇದಷ್ಟೆ ಅಲ್ಲ

17-3-2011 ರಲ್ಲಿ ಮೈಸೂರು ಮುಡಾದಲ್ಲಿ 60000 ಅಡಿ ಭೂಮಿ ಹಂಚಿಕೆಯ ಕುರಿತು ವಿಧಾನಪರಿಷತ್ತಿನಲ್ಲಿ ಯಡಿಯೂರಪ್ಪನವರು ದಾಖಲೆಗಳನ್ನು ಅಂದಿನ ಸಭಾಪತಿಗಳಿಗೆ ನೀಡಿರುವುದು ದಾಖಲಾಗಿದೆ.  ಯಡಿಯೂರಪ್ಪನವರು ನೇರವಾಗಿ ಎಚ್ ಡಿ ದೇವೇಗೌಡರು ನಿಯಮಗಳನ್ನು ಗಾಳಿಗೆ ತೂರಿ 48 ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಹಂಚಿಕೆ ಮಾಡಿರುವ ದಾಖಲೆ ಒದಗಿಸಿದ್ದಾರೆ.

ಹಾಗೂ

ಎಚ್. ಡಿ ಕುಮಾರಸ್ವಾಮಿಯವರಿಗೆ 7-11-1984 ರಲ್ಲಿ 75*280 ಅಡಿ  ಒಟ್ಟು 21000 ಅಡಿಗಳ ಕೈಗಾರಿಕಾ ನಿವೇಶನ ಸಿಐಟಿಬಿ ಮೈಸೂರು ಇಲ್ಲಿಂದ ಮಂಜೂರಾಗಿದೆ. ಚದರ ಗಜಕ್ಕೆ 16 ರೂಪಾಯಿಯಂತೆ 37334 ರೂಪಾಯಿಗಳಿಗೆ ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನವನ್ನು ಇಂಡಸ್ಟ್ರಿಯಲ್ ಸರ‍್ಬ್ 3ನೆ ಹಂತ ಇಲ್ಲಿ ಮಂಜೂರು ಮಾಡಿದ್ದಾರೆ. ಮಂಜೂರಾತಿ ಪತ್ರದಲ್ಲಿ ಎರಡು ವರ್ಷದೊಳಗೆ ಅಲ್ಲಿ ಕೈಗಾರಿಕೆ ಪ್ರಾರಂಭಿಸಬೇಕು ಎಂದು ಷರತ್ತು ವಿಧಿಸಿದ್ದಾರೆ. 1985 ರಲ್ಲಿ ಸ್ವಾಧೀನ ಪತ್ರ ಕೊಟ್ಟಿದ್ದಾರೆ. ಆದರೂ ಕುಮಾರಸ್ವಾಮಿ ಕೈಗಾರಿಕೆ ನಿರ್ಮಿಸಿಲ್ಲ. ಇಂಡಸ್ಟ್ರಿಯಲ್ ನಿವೇಶನ ಬೇರೆ ಯಾರಿಗಾದರೂ ಕೊಟ್ಟಿದ್ದರೆ ಅಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದವು. ಸರ್ಕಾರಕ್ಕೆ ಆದಾಯವೂ ಬರುತ್ತಿತ್ತು.  ಕುಮಾರಸ್ವಾಮಿ ಅದನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ. ಅಲ್ಲದೆ ದಿನಾಂಕ 18-2-2017 ರಲ್ಲಿ ಮುಡಾ ಆಯುಕ್ತರಿಗೆ ಬದಲಿ ನಿವೇಶನ ಕೊಡುವಂತೆ ಮನವಿ ಕೊಟ್ಟಿದ್ದಾರೆ. ಅವರಿಗೆ ಬದಲಿ ನಿವೇಶನ ಕೊಡಲು 7-1-2023 ರಂದು  ಮುಡಾ ನಿರ್ಣಯ ಮಾಡಿದೆ. ಅದೇ ಜಾಗದಲ್ಲಿ ಅಕ್ರಮವಾಗಿದ್ದ ಇನ್ನೊಬ್ಬರು ವ್ಯಕ್ತಿ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಇದು ನಿಂತಿದೆ. ಇಷ್ಟೆಲ್ಲ ಅಕ್ರಮ ಮಾಡಿ ಕುಮಾರಸ್ವಾಮಿ ವೇದಾಂತ ಮಾತಾಡುತ್ತಿದ್ದಾರೆ.

ಶಿವಮೊಗ್ಗದ  ಸುಡಾ[ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಬಿವಿಪಿ ಲೇಔಟ್‌ನಲ್ಲಿ  1305 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಿದ್ದಾರೆ. ಅವುಗಳಲ್ಲಿ 807 ನಿವೇಶನಗಳು ಅಕ್ರಮವಾಗಿ ಹಂಚಿಕೆ ಮಾಡಿ ವ್ಯಾಪಕ ಹಗರಣ ಮಾಡಿರುವ ಕುರಿತು ಸರ್ಕಾರಕ್ಕೆ 2020 ರಲ್ಲಿ ಲೋಕಾಯುಕ್ತ ವರದಿ ಸಲ್ಲಿಸಿದೆ ಎಂಬುದು ತಿಳಿದು ಬಂದಿದೆ. ಅದರ ಕುರಿತೂ ಕೂಡ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು.

ಅಂತಿಮವಾಗಿ

  1. ಮುಡಾ ಸೇರಿದಂತೆ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ಅಕ್ರಮಗಳ ಕುರಿತು  ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
  • ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷೆ ಕೊಡಿಸಲು ಕ್ರಮವಹಿಸಲಾಗುವುದು.
  • ಮೈಸೂರು ಮುಡಾ ಕುರಿತಂತೆ ಈಗಾಗಲೆ ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ದೇಸಾಯಿಯವರನ್ನು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ. ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ಆಯೋಗ ಕೆಲಸ ಪ್ರಾರಂಭಿಸಿದೆ. ಆಯೋಗದ ವರದಿ ಬರಲಿ ಮುಂದೆ ಯಾರ್ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ.

More articles

Latest article