ಕೊಟ್ಟಾಯಂ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೊಂದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಶೈನಿ ಕುರಿಯಾಕೋಸ್ (43) ಮತ್ತು ಅವರ ಹೆಣ್ಣುಮಕ್ಕಳಾದ ಅಲೀನಾ (11) ಮತ್ತು ಇವಾನಾ (10) ಮೃತಪಟ್ಟ ದುರ್ದೈವಿ ತಾಯಿ ಮಕ್ಕಳು. ನಿನ್ನೆ ಪರೋಲಿಕಲ್ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ.
ಈಕೆಯ ಪತಿ ನೋಬಿ ಇರಾಕ್ನಲ್ಲಿ ತೈಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಇವರ ಕುಟುಂಬ ನೆಮ್ಮದಿಯಿಂದ ಇರಲಿಲ್ಲ. ಪತಿ ಪತ್ನಿ ಇಬ್ಬರೂ ಜಗಳವಾಡುತ್ತಿದ್ದರು. ಪತಿ ರಜೆಗೆ ಮನೆಗೆ ಬಂದಾಗ, ಅವನು ಕುಡಿದು ಶೈನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಶೈನಿ ಕಳೆದ 9 ತಿಂಗಳಿನಿಂದ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಚರ್ಚ್ಗೆ ಹೋಗುವುದಾಗಿ ಹೇಳಿ ಹೊರಟ ಶೈನಿ ತನ್ನ ಮಕ್ಕಳೊಂದಿಗೆ ಮನೆಯಿಂದ ಹೊರಟು ರೈಲ್ವೇ ಹಳಿಗೆಯ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ನಿಂತಿದ್ದಾರೆ.
ನೀಲಂಬೂರ್ ಎಕ್ಸ್ಪ್ರೆಸ್ನ ಲೋಕೋ ಪೈಲಟ್ ಎಷ್ಟೇ ಹಾರ್ನ್ ಮಾಡಿದರೂ ಅವರು ಹಿಂದೆ ಸರಿಯಲಿಲ್ಲ, ಆ ವೇಳೆಗಾಗಲೇ ರೈಲು ಮೂವರ ಮೇಲೆ ಹರಿದು ಹೋಗಿತ್ತು. ಆರಂಭದಲ್ಲಿ ಅವರ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕೆಲ ಸಮಯದ ನಂತರ ಬಟ್ಟೆಗಳ ಮೇಲಿನ ಗುರುತುಗಳಿಂದ ಪತ್ತೆ ಹಚ್ಚಲಾಗಿದೆ.
ಶೈನಿ ಅವರು ಈಗಾಗಲೇ ನೋಬಿ ವಿರುದ್ಧ ಕುಟುಂಬ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರದ ದೂರು ಮತ್ತು ವಿಚ್ಛೇದನ ಅರ್ಜಿಯನ್ನು ಸಲ್ಲಿಸಲಾಗಿದೆ. ಬಿ.ಎಸ್ಸಿ. ನರ್ಸಿಂಗ್ ಪದವೀಧರೆಯಾದ ಶೈನಿ ಮದುವೆಯ ನಂತರ ಕೆಲಸಕ್ಕೆ ಹೋಗಲು ನೋಬಿ ಅನುಮತಿಸಲಿಲ್ಲ. ಆಕೆಯ ಜೀವನ ವೆಚ್ಚ ಮತ್ತು ಮಕ್ಕಳ ಶಿಕ್ಷಣವನ್ನು ಭರಿಸಲು ಆಕೆಯ ಸಹೋದರರು ಮತ್ತು ಪೋಷಕರು ಬೆಂಬಲ ನೀಡುತ್ತಿದ್ದರು.