ಈಗಲೂ ಹೇಳ್ತೆನೆ ಅಲ್ಲಿ 100% ಪಾಕ್ ಪರ ಘೋಷಣೆ ಕೂಗಿಲ್ಲ; ಸುಳ್ಳು ಸುದ್ದಿಗಳನ್ನು ಎದುರಿಸುವ ರೀತಿಯೇ ಕಾಂಗ್ರೆಸ್ ಗೆ ಗೊತ್ತಿಲ್ಲ- ಮಹಮದ್ ಜುಬೇರ್

Most read

ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಕೋಲಾಹಲ ಶುರುವಾದಾಗ ಅದು ‘ಪಾಕಿಸ್ತಾನ ಪರ ಘೋಷಣೆ ಅಲ್ಲ, ನಾಸಿರ್ ಹುಸೇನ್ ಪರ ಘೋಷಣೆ’ ಎಂದು ಮೊದಲು ಹೇಳಿದ್ದು ಫ್ಯಾಕ್ಟ್ ಚಕ್ಕರ್ ಮಹಮದ್ ಜುಬೇರ್. ‘ಈಗಲೂ ನನ್ನ ಮಾತಿಗೆ ಬದ್ಧ’ ಎಂದಿರುವ ಜುಬೇರ್ ಆ ಒಟ್ಟು ವಿಷಯವನ್ನು ಪ್ರಸ್ತಾಪಿಸುವ ಜತೆಗೆ, ಕಳೆದ ಹತ್ತು ತಿಂಗಳಲ್ಲಿ ಬಲಪಂಥೀಯರ ಫೇಕ್ ನ್ಯೂಸ್ ಎದುರಿಸುವಲ್ಲಿ ಕರ್ನಾಟಕ ಸರಕಾರ ಹೇಗೆ ವಿಫಲವಾಗಿದೆ, ಇದರಿಂದ ಬಲಪಂಥೀಯರು ಹರಿಬಿಡುತ್ತಿರುವ ನೆರೇಟಿವ್ ಹೇಗೆ ಗೆಲ್ಲುತ್ತಿದೆ ಎಂಬುದನ್ನೂ ವಿವರಿಸಿದ್ದಾರೆ. ಅವರ ಬರೆಹ ಈ ಕೆಳಗಿನಂತಿದೆ-

“ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಗೃಹಮಂತ್ರಿಗಳೂ ಹೇಳಿಕೆ ಕೊಟ್ಟು ದೃಢಪಡಿಸಿದ್ದಾರೆ. ಈಗ ಮೊನ್ನೆಯ ನನ್ನ ಟ್ವೀಟ್ ಗಳಿಗಾಗಿ ನನ್ನನ್ನು ಬಂಧಿಸಬೇಕು ಎಂದು ಅನೇಕರು ಈಗ ಆಗ್ರಹಿಸುತ್ತಿದ್ದಾರೆ. ಆದರೆ ನನ್ನ ಟ್ವೀಟ್ ಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಕೂಗಿದ್ದು ನಾಸಿರ್ ಸಾಬ್ ಜಿಂದಾಬಾದ್ ಎಂಬ ಬಗ್ಗೆ ನನ್ನಲ್ಲಿ ಈಗಲೂ 100% ಖಾತ್ರಿಯಿದೆ.

ಅನೇಕ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ವಿರೋಧಿಗಳು ಮತ್ತು ಅವರ ಬೆಂಬಲಿಗರ ಮೇಲೆ ಹೇಗೆ ಬಲಪಂಥೀಯರು ಮಾಡುತ್ತಿರುವ ಆರೋಪಗಳಲ್ಲಿ ಒಂದು ನಿರ್ದಿಷ್ಟ ಪ್ಯಾಟರ್ನ್ (ನಮೂನೆ) ಇರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈಗಿನ ಪ್ರಕರಣದಲ್ಲಿ ಕೂಡಾ ಸುಳ್ಳು ಸುದ್ದಿ ಆರಂಭವಾದುದು ಕನ್ನಡ ಸುದ್ದಿವಾಹಿನಿಗಳಿಂದ. ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುದನ್ನು ಸದರಿ ಘಟನೆ ನಡೆದಿದೆ ಎನ್ನಲಾದ ಜಾಗದಲ್ಲಿ ಇದ್ದ ಅನೇಕ ವರದಿಗಾರರು ನಿರಾಕರಿಸಿದ್ದಾರೆ. ಹೀಗೆ ನಿರಾಕರಿಸಿದವರಲ್ಲಿ ANI ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ಅವರ ಸಹೋದ್ಯೋಗಿ ಕೂಡಾ ಇದ್ದಾರೆ. ನಾನು ಸತ್ಯ ಹೇಳಿದ್ದಕ್ಕೆ ನನ್ನನ್ನು ಬಂಧಿಸಬೇಕು ಎಂದು ಹೇಳುತ್ತಿರುವವರಲ್ಲಿ ಈಕೆ ಮತ್ತು ಅನೇಕ ಬಲಪಂಥೀಯ ಟ್ರೋಲ್ ಗಳೂ ಸೇರಿದ್ದಾರೆ. ಕರ್ನಾಟಕದಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವುದರಲ್ಲಿ ಒಂದು ಪ್ಯಾಟರ್ನ್ ಅನ್ನು ನೀವು ನೋಡಬಹುದು.

1.    ಜನವರಿಯಲ್ಲಿ, ಬಿಜೆಪಿ ಮತ್ತು ಪ್ರೊಪಗಾಂಡಾ ನ್ಯೂಸ್ ಏಜನ್ಸಿ ANI ಸಹಿತ ಮಾಧ‍್ಯಮಗಳು ‘ರಾಜ್ಯ ಸರಕಾರದ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಮಂಡ್ಯದ ಕೆರೆಗೋಡುವಿನಲ್ಲಿ ಧ್ವಜಸ್ತಂಭದಿಂದ ಹನುಮಾನ್ ಧ‍್ವಜ ಇಳಿಸಿದರು’ ಎಂದು ದೂರುತ್ತಾ, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಅಬ್ಬರಿಸಿತು. ಆದರೆ ವಾಸ್ತವ ಏನಾಗಿತ್ತು ಎಂದರೆ, ಧ್ವಜ ಸ್ತಂಭ ಇದ್ದುದು ಸರಕಾರಿ ಜಮೀನಿನ ಮೇಲೆ. ಅದರಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಮಾತ್ರ ಹಾರಿಸಲು ಅನುಮತಿ ನೀಡಲಾಗಿತ್ತು. ಕಾಂಗ್ರೆಸ್ ವಿರೋಧಿ ಅಪಪ್ರಚಾರ ಟೆಲಿವಿಶನ್ ನಲ್ಲಿ ವಾರಕ್ಕೂ ಅಧಿಕ ಕಾಲ ನಡೆಯಿತು. ಆದರೆ, ಇದನ್ನು ಹೇಗೆ ಕೌಂಟರ್ ಮಾಡಬೇಕು ಎನ್ನುವುದೇ ಕರ್ನಾಟಕ ಕಾಂಗ್ರೆಸ್ ಗೆ ತಿಳಿಯಲಿಲ್ಲ!

2.    ಫೆಬ್ರವರಿಯಲ್ಲಿ, ಬಜೆಟ್ ನಂತರ, ಬಿಜೆಪಿ ಮತ್ತು ಮಾಧ್ಯಮಗಳು ಕಾಂಗ್ರೆಸ್ ಅನ್ನು ಮತ್ತೆ ಟಾರ್ಗೆಟ್ ಮಾಡಿದವು. ಹಿಂದೂ ದೇಗುಲಗಳಿಂದ ಹಣ ತೆಗೆದು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಅದನ್ನು ಕಾಂಗ್ರೆಸ್ ಉಪಯೋಗಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಇದು ಮೂರು ನಾಲ್ಕು ದಿನಗಳ ಕಾಲ ನಡೆಯಿತು. ಮತ್ತೆ ಈ ಸುಳ್ಳುಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಗೆ ಗೊತ್ತೇ ಆಗಲಿಲ್ಲ. ಸುಳ್ಳು ಸುದ್ದಿ ಹರಡಿದವರ ಮೇಲೆ ಎಫ್ ಐ ಆರ್ ಕೂಡಾ ಹಾಕಲಿಲ್ಲ.

3.    ಮುಜರಾಯಿ (ಎಂಡೋ ಮೆಂಟ್) ಮಸೂದೆಯ ಬಳಿಕ, ಬಿಜೆಪಿ ಮತ್ತು ಮಾಧ‍್ಯಮಗಳು ಮತ್ತೊಂದು ಸುತ್ತಿನ ಸುಳ್ಳು ಸುದ್ದಿ ಹರಡ ಹೊರಟವು. ಹಿಂದೂ ದೇಗುಲಗಳ ಮೇಲೆ ಸಿದ್ದರಾಮಯ್ಯ ಸರಕಾರ 10% ಜಜಿಯಾ (ತೆರಿಗೆ) ಹಾಕಲಾರಂಭಿಸಿದೆ ಎಂಬುದು ಈ ಬಾರಿಯ ಆರೋಪ ಅವರದು. ಅಸಲಿಗೆ, ಈ ಕಾನೂನು ತಿದ್ದುಪಡಿ ಮೊದಲು ನಡೆದುದು ಯಡಿಯೂರಪ್ಪ ಸರಕಾರ ಇದ್ದಾಗ, 2011 ರಲ್ಲಿ. ಸತ್ಯ ಸಂಗತಿಯೇನೆಂದರೆ, ಅಖಿಲ ಕರ್ನಾಟಕ ಅರ್ಚಕ ಸಂಘ ಈ ಮಸೂದೆಯನ್ನು ಬೆಂಬಲಿಸಿ ಪತ್ರಿಕಾಗೋಷ್ಠಿ ನಡೆಸಿ ಬೆಂಬಲಿಸಿದ್ದರು. ಸಣ್ಣ ದೇಗುಲಗಳಿಗೆ ಹಣದ ಕೊರತೆಯಿದೆ, ರಾಜ್ಯದಲ್ಲಿ 36,000 ಸಿ ಗ್ರೇಡ್ ದೇಗುಲಗಳ ಉದ್ಧಾರಕ್ಕೆ, ಆದಾಯದ ಆಧಾರದಲ್ಲಿ ಮಾಡಿರುವ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಬೆಂಬಲಿಸುವಂತೆ ಅವರು ವಿಪಕ್ಷ ಬಿಜೆಪಿಯನ್ನುಆಗ್ರಹಿಸಿದ್ದರು. ಆದರೆ ಇಲ್ಲಿ ಕೂಡಾ ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರ ಎಂಬ ಸುಳ್ಳು ಪ್ರೊಪಗಾಂಡಾದಲ್ಲಿ ಬಿಜೆಪಿ ಮತ್ತು ಮಾಧ‍್ಯಮಗಳು ಯಶಸ್ವಿಯಾದವು. ಕಾಂಗ್ರೆಸ್ ಗೆ ಅವರ ಪ್ರೊಪಗಾಂಡಾ ಕೌಂಟರ್ ಮಾಡಲು ಸಾಧ್ಯವಾಗಲೂ ಇಲ್ಲ, ಸುಳ್ಳು ಸುದ್ದಿ ಹರಡಿದವರು ಮತ್ತು ಅದನ್ನು ಮತ್ತೆ ಹಿಗ್ಗಿಸಿ ಹರಡಿದವರ ಮೇಲೆ ಯಾವುದೇ ಕ್ರಮ ಜರುಗಿಸಲೂ ಇಲ್ಲ.

ಈಗ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಮೂವರು ಕಾಂಗ್ರೆಸ್ ಬೆಂಬಲಿಗರನ್ನು ಬಂಧಿಸಿದ ಬಳಿಕ ಸರಕಾರ ಒಬ್ಬ ಬಿಜೆಪಿ ಬೆಂಬಲಿಗನನ್ನು ಕೂಡ ಅಂಥದ್ದೇ ಘೋಷಣೆ ಕೂಗಿದ್ದಕ್ಕಾಗಿ ಬಂಧಿಸಿದೆ. ಆತ ಬಾಯಿ ತಪ್ಪಿ ಅಂತಹ ಘೋಷಣೆ ಕೂಗಿದ್ದು ಮಂಡ್ಯದಲ್ಲಿ, 2022 ರಲ್ಲಿ. ಆ ಪ್ರಕರಣದಲ್ಲಿ ಬಿಜೆಪಿ ಬೆಂಬಲಿಗ ‘ಮುರ್ದಾಬಾದ್’ ಎಂದು ಕೂಗುವ ಬದಲಿಗೆ ‘ಜಿಂದಾಬಾದ್’ ಎಂದು ಕೂಗಿದ್ದ ಎಂಬುದು ಸುಸ್ಪಷ್ಟ.ಬಿಜೆಪಿಯು ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮದ ನೆರವಿನೊಂದಿಗೆ ಪ್ರೊಪಗಾಂಡಾ ಕದನವನ್ನು ಗೆಲ್ಲುತ್ತಿರುವುದು ಹೀಗೆ. ಆದರೆ ಅದನ್ನು ಹೇಗೆ ಕೌಂಟರ್ ಮಾಡಬೇಕು ಎನ್ನುವುದೇ ಕಾಂಗ್ರೆಸ್ ಗೆ ಗೊತ್ತಿಲ್ಲ!”.

More articles

Latest article