ಬೆಂಗಳೂರು: ಸಿನಿಮಾ ಅಂದರೆ ಮನರಂಜನೆ. ಮನರಂಜನೆಗಾಗಿಯೇ ಸಿನಿಪ್ರೇಮಿಗಳು ಥಿಯೇಟರ್ ಹೋಗೋದು. ನೋವು, ಕಷ್ಟ, ಟೆನ್ಶನ್ ಎಲ್ಲಾ ಮರೆಯಬೇಕು ಅಂದರೆ ಅಲ್ಲಿ ಭರಪೂರ ಕಾಮಿಡಿ ಇರಲೇಬೇಕು. ಆರಂಭದಿಂದ ಅಂತ್ಯದವರೆಗೂ ಬರೀ ನಗು ಮಾತ್ರ ತುಂಬಿಕೊಂಡಿರುವ ಕನ್ನಡ ಸಿನಿಮಾವೊಂದು ರಿಲೀಸ್ ಗೆ ರೆಡಿಯಾಗಿದೆ. ಅದುವೆ “ಮಿಡಲ್ ಕ್ಲಾಸ್ ರಾಮಾಯಣ”. ಈಗಷ್ಟೇ ಟ್ರೇಲರ್ ರಿಲೀಸ್ ಆಗಿದ್ದು, ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗ್ತಾ ಇದೆ.
ಟ್ರೇಲರ್ ನಲ್ಲಂತೂ ಮಿಡಲ್ ಕ್ಲಾಸ್ ಜನರ ಮದುವೆಯ ಹತ್ತಾರು ಸಂಕಷ್ಟಗಳನ್ನು ತೋರಿಸಲಾಗಿದೆ. ಅಷ್ಟೇ ನಗು ಇದೆ. ಮೋಕ್ಷಿತಾ ಪೈ ಅವರಂತೂ ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ʼರೆಬಲ್ ಹುಡುಗರುʼ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಧನುಶ್ ಗೌಡ ಮಾತನಾಡಿ, “ಮಿಡಲ್ ಕ್ಲಾಸ್ ರಾಮಾಯಣ” ಒಬ್ಬ ಹುಡುಗನ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಕಥೆ ಇದ್ದೇ ಇರುತ್ತದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಆರ್ಟಿಸ್ಟ್ ಗಳೂ ಬಣ್ಣ ಹಚ್ಚಿದ್ದಾರೆ. ಆದರೆ ಸುದ್ದಿಗೋಷ್ಠಿಗೆ ಕರೆದರೂ ಬಂದಿಲ್ಲ ಎಂಬ ಬೇಸರ ನಿರ್ದೇಶಕರಲ್ಲಿ ಎದ್ದು ಕಾಣಿಸುತ್ತಿತ್ತು. ಇನ್ನು ಈ ಸಿನಿಮಾ ಕೋವಿಡ್ ಗೂ ಮುಂಚಿತವಾಗಿ ಆರಂಭಿಸಲಾಗಿದ್ದು, ಸ್ವಲ್ಪ ತಡವಾದ ಕಾರಣ ಹೀರೋ – ಹೀರೋಯಿನ್ ಪಾರ್ಟ್ ಅನ್ನು ಸ್ವಲ್ಪ ಮಟ್ಟಿಗೆ ರಿಶೂಟ್ ಮಾಡಲಾಗಿದೆ.
ನಿರ್ಮಾಪಕ ಜಯರಾಮ್ ಗಂಗಪ್ಪನಹಳ್ಳಿ ಟ್ರಕ್ ಗಳನ್ನು ಇಟಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕೃಷಿ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಫ್ರೆಂಡ್ ಒಬ್ಬರು ಕಥೆ ಹೇಳಿದ್ರು, ಕಥೆ ಇಷ್ಟ ಆಯ್ತು ಹೀಗಾಗಿ ಸಿನಿಮಾಗೆ ಬಂಡವಾಳ ಹೂಡಲು ನಿರ್ಧರಿಸಿದೆ. ನಮಗೆ ಸಿನಿಮಾ ಇಷ್ಟ ಆಗೋದು ಮುಖ್ಯ ಅಲ್ಲ. ಜನ ಇಷ್ಟ ಪಡುವುದು ಬಹಳ ಮುಖ್ಯ ಎಂದು ಮಾತು ಮುಗಿಸಿದರು.
ನಟಿ ಯುಕ್ತ ಮಾತನಾಡುತ್ತಾ, ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಖುಷಿ ಇದೆ. ಕೀರ್ತಿ ಎಂಬ ಪಾತ್ರ ಮಾಡಿದ್ದೇನೆ. ಕನ್ನಡದಲ್ಲಿ ಇದು ಮೂರನೇ ಸಿನಿಮಾ ಆಗಿದೆ ಎಂದರು.
ಮೋಕ್ಷಿತಾ ಪೈ ಮಾತನಾಡಿ, ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಫೀಲ್ ಆಗ್ತಾ ಇದೆ. ನಾವೆಲ್ಲರೂ ನಿಮ್ಗೆ ಕಾಣಿಸ್ತೀವಿ. ಆದರೆ ತೆರೆ ಹಿಂದೆ ಒಂದಷ್ಟು ಜನರು ಹಾಕಿದ ಶ್ರಮದಿಂದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಚಿತ್ರದಲ್ಲಿ ಸೌಂದರ್ಯ ಎಂಬ ಪಾತ್ರ ಮಾಡಿದ್ದೀನಿ. ಆದ್ರೆ ಸಿನಿಮಾದಲ್ಲಿ ನಾನೇನು ಸಖತ್ತಾಗಿ ಕಾಣಿಸ್ತಿಲ್ಲ. ನಿರ್ದೇಶಕರು ಎಣ್ಣೆಗೆಂಪಾಗಿ ಕಾಣಿಸ್ತೀರಾ ಅಂದಿದ್ರು. ಲುಕ್ ಟೆಸ್ಟ್ ಕೊಟ್ಟಾಗ ನಾನೇ ಶಾಕ್ ಆಗಿದ್ದೆ. ಆದ್ರೆ ಹೊಸಪ್ರಯತ್ನ ಇರಲಿ ಅಂತ ಒಪ್ಪಿಕೊಂಡೆ. ಸಿಂಪಲ್ ಅಂಡ್ ಸ್ವೀಟ್ ಆಗಿ ಕಥೆಯನ್ನ ಹೇಳ್ತಾ ಇದ್ದೀವಿ ಎಂದಿದ್ದಾರೆ.
ನಟ ವಿನು ಗೌಡ ತಮ್ಮ ಸಿನಿಮಾದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದರೋ ಅದೇ ರೀತಿ ಬಂದಿದ್ದರು. ಈ ವೇಳೆ ಮಾತನಾಡುತ್ತಾ, ಈ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಹೊಸ ಪ್ರತಿಭೆಗಳನ್ನು ಬೆಳೆಸಿ ಎಂದಿದ್ದಾರೆ ಎಂದು ಅನಿಸಿಕೆಯನ್ನು ಹಂಚಿಕೊಂಡರು.