ಮಾಗಡಿ ಪಾಲನಹಳ್ಳಿ ಮಠಕ್ಕೆ ಸಾವಿರಾರು ಕೋಟಿ ರೂ. ಆಸ್ತಿ ದಾನ ಮಾಡಿದ ಉದ್ಯಮಿ

Most read

ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್
ಎಂಬುವರು ತಾವು ಗಳಿಸಿದ ಸಾವಿರಾರು ಕೋಟಿ
ರೂ. ಮೌಲ್ಯದ ಆಸ್ತಿಯನ್ನು ರಾಜ್ಯದ ರಾಮನಗರ ಜಿಲ್ಲೆ ಮಾಗಡಿಯ ಪಾಲನಹಳ್ಳಿ ಮಠಕ್ಕೆ ದಾನ ಮಾಡಿದ್ದಾರೆ. ತಾವು ಜೈನ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಬಯಸಿದ್ದು ಸಮಸ್ತ ಆಸ್ತಿಯನ್ನು ಮಠಕ್ಕೆ ದಾನ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಇತ್ತೀಚೆಗೆ ಓಸ್ವಾಲ್ ಜೈನ್ ಅವರು ಮಠದ ಪೀಠಾಧ್ಯಕ್ಷ ಡಾ. ಸಿದ್ಧರಾಮ ಸ್ವಾಮೀಜಿ ಅವರಿಗೆ ಆಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಪಾಲನಹಳ್ಳಿ ಮಠ ರಾಜ್ಯದ ಹೆಚ್ಚಿನ ಸಂಪತ್ತು ಹೊಂದಿರುವ ಮಠಗಳ ಪೈಕಿ ಒಂದಾಗಲಿದೆ.

ಓಸ್ವಾಲ್ ಜೈನ್‌ ತಾವು ಸಂಪಾದಿಸಿದ ಕರ್ನಾಟಕ, ತಮಿಳುನಾಡು, ಮುಂಬಯಿ, ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ರಾಜ್ಯಗಳಲ್ಲಿನ 3 ಸಾವಿರ ಎಕರೆ ಕಲ್ಲಿದ್ದಲು, ಚಿನ್ನ, ಅದಿರಿನ ಗಣಿಗಳನ್ನು ದಾನ ಮಾಡಿದ್ದಾರೆ. ಅಲ್ಲದೆ ಜಪಾನ್, ಜರ್ಮನಿ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ನಡೆಸುತ್ತಿದ್ದ ವಿದೇಶಿ ವಹಿವಾಟುಗಳನ್ನು ಮಠಕ್ಕೆ ಧಾರೆಯೆರೆದಿದ್ದಾರೆ. ಓಸ್ವಾಲ್‌ ಜೈನ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಪುತ್ರ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇಬ್ಬರು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯನ್ನು ಹಂಚಿದ್ದಾರೆ. ಸ್ವಯಾರ್ಜಿತವಾಗಿ ಸಂಪಾದಿಸಿದ ಆಸ್ತಿಯನ್ನು ಮಾತ್ರ ಮಠಕ್ಕೆ ದಾನ ಮಾಡಿದ್ದಾರೆ.

ಓಸ್ವಾಲ್ ಅವರು ಕಂಪನಿ ಆರಂಭಿಸಿದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಶ್ರೀಗಳ ಒಡನಾಟ ಹೊಂದಿದ್ದರು. ನನ್ನ ಏಳಿಗೆಗೆ ಶ್ರೀಗಳ ಮಾರ್ಗದರ್ಶನ ಕಾರಣವಾಗಿತ್ತು. ಈಗ ನನಗೆ 78 ವರ್ಷಗಳಾಗಿದ್ದು, ಜೈನ ವ್ರತಾಚರಣೆ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕಾನೂ ರೀತ್ಯಾ ಆಸ್ತಿ ಮಠಕ್ಕೆ ವರ್ಗಾವಣೆಗೊಂಡ ನಂತರ ಮಠದ ಆಡಳಿತ ಮಂಡಳಿಯು ತೆರಿಗೆ ಆಯುಕ್ತರೊಂದಿಗೆ ಚರ್ಚಿಸಲಿದೆ. ನಂತರ ಗಣಿ ವಹಿವಾಟು ಆದಾಯದಿಂದ ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲಗಳ ನಿರ್ಮಾಣ ಮತ್ತು ಬಡವರ ಸೇವೆಗೆ ಬಳಕೆ ಮಾಡುವ ಉದ್ದೇಶವಿದೆ ಎಂದು ಮಠದ ಪೀಠಾಧ್ಯಕ್ಷ ಡಾ. ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

More articles

Latest article