ಕೋಲಾರ: ಭೂ ಪರಿವರ್ತನೆ ಹಾಗೂ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿರಸ್ತೇದಾರ್ ಚಂದ್ರಪ್ಪ, ಎಫ್ ಡಿಎ ಅಜಯ್ ಹಾಗೂ ‘ಡಿ’ ದರ್ಜೆಯ ನೌಕರ ಮುನಿರಾಜು ಲೋಕಾಯುಕ್ತ ಬಲೆಗೆ ಬಿದ್ದ ನೌಕರರು.
ಇವರ ಮೇಲೆ ಭ್ರಷ್ಟಾಚಾರ ನಿಗ್ರಹದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಚಂದ್ರಪ್ಪ ಹಾಗೂ ಮುನಿರಾಜು ಅವರನ್ನು ಬಂಧಿಸಿದ್ದಾರೆ. ಎಫ್ ಡಿಎ ಅಜಯ್ ಎಂಬುವರು ಈ ಸಂದರ್ಭದಲ್ಲಿ ನ್ಯಾಯಾಲಯದ ಕೆಲಸದ ನಿಮಿತ್ತ ಕಚೇರಿಗೆ ಬಂದಿರಲಿಲ್ಲ ಎಂದು ತಿಳಿದು ಬಂದಿದೆ. ಎ
ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರದ ಮಂಜುನಾಥ್ ಎಂಬುವರು ತಮ್ಮ ಜಮೀನಿನ ಭೂಪರಿವರ್ತನೆ ಹಾಗೂ ಖಾತೆ ವಿಚಾರಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ರೂ. 25 ಸಾವಿರ ಲಂಚ ಕೇಳಿದ್ದರು. ಆರೋಪಿಗಳು ಒಮ್ಮೆ 15 ಸಾವಿರ ಪಡೆದು ಕೊಂಡಿದ್ದರು. ಉಳಿದ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧ ಆಡಿಯೋ ದಾಖಲೆಯೂ ಇದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ನೌಕರರ ವರ್ತನೆಯಿಂದ ಬೇಸತ್ತ ಮಂಜುನಾಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಂಜುನಾಥ್ ನೀಡಿದ ರೂ. 22 ಸಾವಿರದಲ್ಲಿ ಸ್ವಲ್ಪ ಹಣವನ್ನು ತನ್ನ ಬಳಿ ಇಟ್ಟುಕೊಂಡ ‘ಡಿ’ ದರ್ಜೆ ನೌಕರ ಮುನಿರಾಜು, ಉಳಿದ ಹಣವನ್ನು ಶಿರಸ್ತೇದಾರ ಚಂದ್ರಪ್ಪ ಎಂಬುವರಿಗೆ ಕೊಡಲು ಹೋಗುವಾಗ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಿ.ಧನಂಜಯ, ಡಿವೈಎಸ್ಪಿ ಸುಧೀರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ ಮಳಿಗೆ ತಿಂಗಳ ಮಾಮೂಲಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಂಗಲಿ ಪೊಲೀಸ್ ಠಾಣೆ PSI ಅರ್ಜುನ್ಗೌಡ ಹಾಗೂ ಪೇದೆ ಸುರೇಶ್ ಅವರನ್ನು ಬಂಧಿಸಿದ್ದಾರೆ.
ಬಾರ್ ಮಾಲೀಕ ಪ್ರಶಾಂತ್ ಎಂಬುವರ ಬಳಿ 10 ಸಾವಿರ ಹಣ ಪಡೆವಾಗ ಸಿಕ್ಕಿಬಿದ್ದಿದ್ದಾರೆ. ಪಿಎಸ್ ಐ ಸೂಚನೆಯಂತೆ ಹಣ ವಸೂಲಿ ಮಾಡಿದ್ದಾಗಿ ಪೇದೆ ಸುರೇಶ್ ಹೇಳಿಕೆ ನೀಡಿದ್ದಾರೆ. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆದಿದೆ.