ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಪತ್ರವನ್ನು ಕಡ್ಡಾಯಗೊಳಿಸಿ ಸರ್ಕಾರ ಕಾನೂನು ಜಾರಿಗೊಳಿಸಿದರೆ ಆ ಪ್ರಕಾರವೇ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಮತಪತ್ರ ಅಥವಾ ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಮೂಲಕ ಚುನಾವಣೆ ನಡೆಸಬಹುದು ಎಂದು ಕಾಯಿದೆಯಲ್ಲೇ ನಮೂದಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಬೇಕಿದೆ. ವಿಳಂಬಕ್ಕೆ ಸರ್ಕಾರ ಕಾರಣವೇ ಹೊರತು ಆಯೋಗ ಅಲ್ಲ. ಸರ್ಕಾರ ಇದುವರೆಗೂ ಮೀಸಲಾತಿ ಪಟ್ಟಿ ನೀಡಿಲ್ಲ ಎಂದು ಉತ್ತರಿಸಿದರು.
188 ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅವಧಿ ಅಕ್ಟೋಬರ್ ನಲ್ಲಿ ಮುಗಿಯಲಿದ್ದು ಚುನಾವಣೆ ನಡೆಸಬೇಕಿದೆ. ಮೀಸಲಾತಿ ಪಟ್ಟಿಯನ್ನು ಸರ್ಕಾರ ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಸರ್ಕಾವೇ ಉತ್ತರ ನೀಡಬೇಕು. ಹದಿನೈದು ದಿನಗಳ ಹಿಂದೆ ಹೈಕೋರ್ಟ್ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ವಿಚಾರಣೆಗೆ ನಡೆದಾಗ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಿದೆ ಎಂದು ಕೋರ್ಟ್ಗೆ ಸರ್ಕಾರ ತಿಳಿಸಿದೆ. ಈ ಪ್ರಕ್ರಿಯೆ ನಡೆದ ನಂತರ ಚುನಾವಣೆ ನಡೆಯಲಿದೆ ಎಂದು ಸಂಗ್ರೇಶಿ ಹೇಳಿದರು.