ಬೆಂಗಳೂರು: ಗ್ಯಾಂಗ್ ಸ್ಟರ್ ಬಿಷ್ಣೋಯ್ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪಿಗಳನ್ನು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ರಫೀಕ್, ಶಿಶುಪಾಲ್ ಸಿಂಗ್, ವನ್ಷ್ ಸಚ್ದೇವ್, ಅಮಿತ್ ಚೌಧರಿ ಬಂಧಿತ ಆರೋಪಿಗಳು. ಮೊಹಮ್ಮದ್ ರಫೀಕ್ ಬೆಂಗಳೂರಿನ ಮಾವಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.
ಮೊಹಮ್ಮದ್ ರಫೀಕ್ ವಿರುದ್ಧ ಈ ಹಿಂದೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿತ್ತು. ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ತಿಹಾರ್ ಜೈಲಿನಲ್ಲಿ ಹಲವು ಆರೋಪಿಗಳನ್ನು ಪರಿಚಯಿಸಿಕೊಂಡಿದ್ದ ಈತ ಜೈಲಿನಿಂದ ಹೊರಬಂದ ಬಳಿಕ ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಸುಲಿಗೆ ಮಾಡಲು ಆರಂಭಿಸಿದ್ದ. ಬಿಷ್ಟೋಯ್ ತಂಡ್ಕಕೂ ಈ ಮೂವರು ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ. ಇದೀಗ, ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಪೊಲೀಸರು ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಸತಿಗೃಹಗಳಲ್ಲಿ ಪರಿಶೀಲನೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿದಿನ ಲಾಡ್ಜ್ ಗಳ ದಾಖಲಾತಿ ಪುಸ್ತಕವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಆರೋಪಿಗಳು ಈ ಹಿಂದೆ ಬೆಂಗಳೂರಿಗೆ ಬಂದಾಗ ದೀರ್ಘ ಕಾಲ ಲಾಡ್ಜ್ ನಲ್ಲಿ ಉಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.