ಲಖನೌ: ಲಾರೆನ್ಸ್ ಬಿಷ್ಣೋಯ್ ತಂಡದ ಶಾರ್ಪ್ ಶೂಟರ್ ಗಳಲ್ಲಿ ಒಬ್ಬನಾಗಿದ್ದ ನವೀನ್ ಕುಮಾರ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ನಿನ್ನೆ ತಡರಾತ್ರಿ ಹಾಪುರದ ಠಾಣಾ ಕೋಟ್ವಾಲಿ ಪ್ರದೇಶದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ಎನ್ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದೆ. ಘಾಜಿಯಾಬಾದ್ ನ ಲೋನಿ ನಿವಾಸಿಯಾಗಿದ್ದ ನವೀನ್ ಕುಮಾರ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ.
ಪೊಲೀಸರು ಕಾರ್ಯಾಚರಣೆ ನಡೆಸುವಾಗ ಶಾರ್ಪ್ಶೂಟರ್ ನವೀನ್ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ್ದಾನೆ. ಆಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ಮಾಡಿದ್ದಾರೆ. ಎನ್ಕೌಂಟರ್ನಲ್ಲಿ ತೀವ್ರವಾಗಿ ಗಾಯಗೊಂಡ ನವೀನ್ ಕುಮಾರ್ನನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಹಲವು ಗುಂಡುಗಳು ದೇಹ ಹೊಕ್ಕಿದ್ದರಿಂದ ಮೃತಪಟ್ಟಿದ್ದಾನೆ.
ದೆಹಲಿಯ ಫರ್ಶ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಮತ್ತು ಎಂಸಿಒಸಿಎ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಪ್ರಕರಣದಲ್ಲಿ ನವೀನ್ ಪ್ರಮುಖ ಆರೋಪಿಯಾಗಿದ್ದ. ಪೊಲೀಸರ ಪ್ರಕಾರ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ ಮತ್ತು ಎಂಸಿಒಸಿಎ ಸೇರಿದಂತೆ 20 ಪ್ರಕರಣಗಳು ನವೀನ್ ವಿರುದ್ಧ ದಾಖಲಾಗಿವೆ. ಈ ಹಿಂದೆಯೂ ಈತ ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.