ಪುಲ್ವಾಮಾದಲ್ಲಿ ಹತ್ಯೆಗೀಡಾದ 40 ಜನ ಸೈನಿಕರ ಸಾವಿಗೆ ಯಾರು ಕಾರಣ? ಅಯೋಗ್ಯ ಬಿಜೆಪಿ ಸ್ಪಷ್ಟಪಡಿಸಲಿ: ಕೃಷ್ಣ ಬೈರೇಗೌಡ ಕಿಡಿ

Most read

ಐದು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಜೀವ ಚೆಲ್ಲಿದ 40 ಜನ ಭಾರತೀಯ ಸೈನಿಕರ ಹತ್ಯೆಗೆ ಕಾರಣ ಯಾರು? ಈ ಕೃತ್ಯಕ್ಕೆ ಬಳಸಿದ ಆರ್‌ಡಿಎಕ್ಸ್ ಎಲ್ಲಿಂದ ಬಂತು? ಈ ಪ್ರಕರಣದ ತನಿಖೆ ಏನಾಯ್ತು? ಎಂಬುದನ್ನು ಅಯೋಗ್ಯ ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಆಗ್ರಹಿಸಿದರು.

ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಮಾತನಾಡುತ್ತಾ ಕಾಂಗ್ರೆಸ್‌ ವಿರುದ್ಧ ಕಿಡಿಕಾರುವ ಬರದಲ್ಲಿ, “ಕೇಂದ್ರ ಸರ್ಕಾರ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಯಾವ ಪಕ್ಷ? ದೇಶ ಒಡೆದದ್ದು ಯಾರು?” ಎಂದು ಪ್ರಶ್ನಿಸಿದರು.

ಈ ವೇಳೆ ಶಾಸಕರ ಭಾಷಣದ ನಡುವೆ ಮಧ್ಯ ಪ್ರವೇಶಿ ಪುಲ್ವಾಮಾ ಹತ್ಯಾಕಾಂಡ ಘಟನೆಯನ್ನು ಉಲ್ಲೇಖಿಸಿ ಬಿಜೆಪಿಗರ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣ ಬೈರೇಗೌಡ ಅವರು, “ನಮ್ಮ ದೇಶದ 40 ಜನ ಸೈನಿಕರ ಸಾವಿಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಹೇಳಲಾಗದ, ಪ್ರಕರಣದ ತನಿಖೆ ನಡೆಸುವ ಯೋಗ್ಯತೆಯೂ ಇಲ್ಲದ ಅಯೋಗ್ಯರು ಬಿಜೆಪಿಗರು. ಇವರಿಗೆ ದೇಶಕ್ಕೆ ಬೆಂಕಿ ಇಟ್ಟು ಓಟು ಹಾಕಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ? ಎಂದು ಆಕ್ರೋಶ ಹೊರಹಾಕಿದರು.

ಮುಂದುವರೆದು, “ ಬಿಜೆಪಿಗರು ಸದನದಲ್ಲಿ ವಾಸ್ತವಕ್ಕೆ ಹತ್ತಿರವಾದ ವಿಚಾರದ ಬಗ್ಗೆ ಮಾತನಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬರೀ ಸುಳ್ಳು ಮತ್ತು ಕಟ್ಟುಕಥೆಗಳಿಂದ ಕೂಡಿದ ಅವರ ಮಾತಿಗೆ ಸದನದಲ್ಲಿ ಅವಕಾಶ ನೀಡಬೇಡಿ. ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿಷ್ಣಾತರು. ಅದರಲ್ಲೂ, ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಮಾತುಗಳನ್ನಾಡುತ್ತಿದ್ದಾರೆ.

ನಾವು ತಾಳ್ಮೆಯಿಂದ ಇದ್ದೇವೆ ಎಂಬ ಕಾರಣಕ್ಕೆ ಅವರು ದುರ್ಲಾಬ ಪಡೆದುಕೊಂಡು ವಾಸ್ತವ ಬಿಟ್ಟು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದಾರೆ. ನಮ್ಮ ತಾಳ್ಮೆ ಪರೀಕ್ಷೆ ಮಾಡುವುದೇ ಅವರ ಉದ್ದೇಶವಾಗಿದೆ. ದೇಶದ ಬಿಭಜನೆಗೆ ಯಾರು ಕಾರಣ? ಎಂಬ ಬಗ್ಗೆ ಚರ್ಚಿಸಲು ನಾವು ಸಿದ್ದರಿದ್ದೇವೆ. ಆದರೆ, ಇಂದು ಅವರು ಅಸಲಿ ವಿಚಾರದ ಬಗ್ಗೆ ಮಾತನಾಡಲಿ. ವಿಷಯಾಂತರ ಬೇಡ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

More articles

Latest article